ಎ, ಬಿ, ಸಿ, ಡಿ ಗ್ರೇಡಿಂಗ್ ನೀಡಲಾಗುವುದು: ಸಚಿವ ಮಧುಬಂಗಾರಪ್ಪ
ಬೆಂಗಳೂರು:ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಒತ್ತಡ ಕಡಿಮೆ ಮಾಡಲು ಇನ್ನು ಮುಂದೆ ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಅಂಕ ಇರುವುದಿಲ್ಲ.
ಈ ವರ್ಷದಿಂದಲೇ ತೃತೀಯ ಭಾಷಾ ಪರೀಕ್ಷೆ ಕಡ್ಡಾಯವಲ್ಲ, ಈ ಸಂಬಂಧ ಸರ್ಕಾರ ಇನ್ನೆರಡು ದಿನದಲ್ಲೇ ಅದೇಶ ಹೊರಡಿಸಲಿದೆ.
ಒಟ್ಟು ಅಂಕ 625ಕ್ಕೆ ಬದಲು 525ಕ್ಕೆ ಇಳಿಕೆ
ಸರ್ಕಾರದ ಈ ನಿರ್ಧಾರದಿಂದ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಒಟ್ಟಾರೆ ಅಂಕ 625ಕ್ಕೆ ಬದಲು 525ಕ್ಕೆ ಇಳಿಕೆ ಆಗಲಿದೆ.
ತುರ್ತು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪ, ತೃತೀಯ ಭಾಷೆಗಳಿಗೆ ಇನ್ನು ಮುಂದೆ ಅಂಕಗಳ ಬದಲು ಗ್ರೇಡ್ ನೀಡಲಾಗುವುದು, ತೃತೀಯ ಭಾಷೆಯನ್ನು ಗ್ರೇಡಿಂಗ್ ವ್ಯವಸ್ಥೆಗೆ ಒಳಪಡಿಸಲಾಗುವುದು ಎಂದರು.
ಇನ್ನು ಮುಂದೆ ತೃತೀಯ ಭಾಷೆಯಲ್ಲಿ ಪಾಸ್ ಅಥವಾ ಫೇಲ್ ಎಂಬ ಪದ್ಧತಿ ಇರುವುದಿಲ್ಲ, ಅಂತಿಮ ಫಲಿತಾಂಶದ ಅಂಕಗಳಿಗೆ ತೃತೀಯ ಭಾಷೆ ಅಂಕಗಳನ್ನು ಪರಿಗಣಿಸಲಾಗುವುದಿಲ್ಲ, ಬದಲಿಗೆ ಎ, ಬಿ, ಸಿ, ಡಿ ಎಂಬ ಗ್ರೇಡಿಂಗ್ ನೀಡಲಾಗುವುದು.
ಎಲ್ಲಾ ತೃತೀಯ ಭಾಷೆಗಳಿಗೆ ನಿಯಮ ಅನ್ವಯ
ಹಿಂದಿ, ಸಂಸ್ಕೃತ, ತುಳು, ಮರಾಠಿ, ಅರೇಬಿಕ್ ಸೇರಿದಂತೆ ಪಠ್ಯಕ್ರಮದಲ್ಲಿರುವ ಎಲ್ಲಾ ತೃತೀಯ ಭಾಷೆಗಳಿಗೂ ಈ ನಿಯಮ ಅನ್ವಯವಾಗಲಿದೆ.
ತೃತೀಯ ಭಾಷಾ ವಿಷಯ ಪರೀಕ್ಷೆಗೆ 100 ಅಂಕಗಳು ನಿಗದಿಪಡಿಸಿದ್ದರೂ, ಅಂಕಪಟ್ಟಿಯಲ್ಲಿ ಒಟ್ಟಾರೆ 525 ಅಂಕಗಳೆಂದು ನಮೂದಿಸಲಾಗುತ್ತದೆ.
ಹಿಂದಿ ಹೇರಿಕೆ ತಡೆಯುವ ಬಗ್ಗೆ ಮುಖ್ಯಮಂತ್ರಿಗಳೂ ಆಸಕ್ತಿ ತೋರಿದ್ದಾರೆ, ಕನ್ನಡ ಪರ ಸಂಘಟನೆಗಳೂ ಪಠ್ಯಕ್ರಮದಿಂದಲೇ ಹಿಂದಿ ಭಾಷೆ ಪಠ್ಯ ಕೈಬಿಡುವಂತೆ ಆಗ್ರಹಿಸಿವೆ.
ಫಲಿತಾಂಶದ ಮೇಲೆ ಭಾರೀ ಪರಿಣಾಮ
ತೃತೀಯ ಭಾಷೆಯಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿ ಫಲಿತಾಂಶದ ಮೇಲೆ ಭಾರೀ ಪರಿಣಾಮ ಬೀರುತ್ತಿರುವುದಲ್ಲದೆ, ಹಿಂದಿ ತೇರ್ಗಡೆಯಾಗದ ವಿದ್ಯಾರ್ಥಿಗಳ ಕಲಿಕಾ ಭವಿಷ್ಯವೇ ಮಂಕಾಗುತ್ತಿತ್ತು.
ಕಳೆದ ಸಾಲಿನಲ್ಲಿ ತೃತೀಯ ಭಾಷೆಯಲ್ಲಿ 1.64 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾದರೆ, ಇದರಲ್ಲಿ ಹಿಂದಿ ಪರೀಕ್ಷೆ ತೇರ್ಗಡೆ ಆಗದವರ ಸಂಖ್ಯೆ 1.48 ಲಕ್ಷ ಇದ್ದರು.
ಇದನ್ನು ಗಮನದಲ್ಲಿ ಇಟ್ಟುಕೊಂಡು ತೃತೀಯ ಭಾಷೆ ಹಿಂದಿಗೆ ಅಂಕ ಬದಲು ಗ್ರೇಡ್ ನಿಗದಿ ಪಡಿಸಲಾಗುತ್ತಿದೆ.
ಹಿಂದಿ ಭಾಷಾ ಹೇರಿಕೆ ಅಗತ್ಯವಿಲ್ಲ
ಕನ್ನಡ ಪರ ಸಂಘಟನೆಗಳು ಹಿಂದಿ ಭಾಷಾ ಹೇರಿಕೆ ಅಗತ್ಯವಿಲ್ಲ ಎಂದು ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಸಹಾ ದ್ವಿಭಾಷಾ ಸೂತ್ರ ತಂದರೆ ಒಳ್ಳೆಯದು ಎಂದಿದ್ದಾರೆ, ಈಗ ತ್ರಿಭಾಷಾ ಸೂತ್ರ ಇದೆ, ಇದನ್ನು ಬದಲಿಸಲು ಕಾನೂನು ತಜ್ಞರು ಮತ್ತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು.
ಕನ್ನಡ ಪರ ಸಂಘಟನೆಗಳು, ಹಿಂದಿ ಹೇರಿಕೆ ವಿರೋಧಿಸಿ ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕುವುದು ಬೇಡ ಎಂದು ಮನವಿ ಮಾಡಿದ ಸಚಿವರು, ಹೋರಾಟಗಾರರ ಕೂಗಿನ ಪರವಾಗಿ ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ ಎಂದರು.
ಪ್ರವೇಶ ವಯೋಮಿತಿ ನಿಗದಿ
ಕಳೆದ ಗುರುವಾರ 1ನೇ ತರಗತಿ ಪ್ರವೇಶ ವಯೋಮಿತಿಯನ್ನು 6 ವರ್ಷಕ್ಕೆ ಬದಲಾಗಿ, 5 ವರ್ಷ 10 ತಿಂಗಳಿಗೆ ನಿಗದಿಪಡಿಸಲಾಗಿದೆ.
ಎಲ್ಕೆಜಿ ಸೇರ್ಪಡೆಗೆ 3 ವರ್ಷ 10 ತಿಂಗಳು, ಯುಕೆಜಿಗೆ 4 ವರ್ಷ 10 ತಿಂಗಳು ವಯೋಮಿತಿ ನಿಗದಿಪಡಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಮುಂಬರುವ ಶೈಕ್ಷಣಿಕ ವರ್ಷದಿಂದಲೇ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತವಾಗಿ ’ನೈತಿಕ ಶಿಕ್ಷಣ’ ಪುಸ್ತಕ ಒದಗಿಸಲಾಗುತ್ತದೆ, ಇದು ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವ ಸರ್ಕಾರದ ಹೆಜ್ಜೆಯಾಗಿದೆ.
ಸಾಮಾಜಿಕ ಜಾಲತಾಣ ಬಳಕೆ ನಿರ್ಬಂಧ
ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಭವಿಷ್ಯ ದೃಷ್ಟಿಯಲ್ಲಿ ಇಟ್ಟುಕೊಂಡು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆ ನಿರ್ಬಂಧಿಸುವ ಮಹತ್ವದ ಪ್ರಸ್ತಾಪ ಸದನದಲ್ಲಿ ಚರ್ಚಿಸಲಾಗಿದ್ದು, ಎಲ್ಲರಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
ಈ ಸಮಸ್ಯೆ ಕೇವಲ ಸರ್ಕಾರದ ಮಟ್ಟದಲ್ಲಿ ಬಗೆಹರಿಯುವುದಿಲ್ಲ, ಪೋಷಕರು ತಮ್ಮ ಮಕ್ಕಳ ಮೊಬೈಲ್ ಬಳಕೆ ಮೇಲೆ ಹೆಚ್ಚಿನ ಜವಾಬ್ದಾರಿ ವಹಿಸಬೇಕು.
ಸರ್ಕಾರದ ಪ್ರಮುಖ ಉದ್ದೇಶ ಸರ್ಕಾರಿ ಶಾಲೆಗಳ ಸಬಲೀಕರಣ, ಪಾರದರ್ಶಕತೆ ಮತ್ತು ವಿದ್ಯಾರ್ಥಿಗಳನ್ನು ಪರೀಕ್ಷಾ ಒತ್ತಡದಿಂದ ಮುಕ್ತಗೊಳಿಸುವುದಾಗಿದೆ.
ಇದರ ಭಾಗವಾಗಿ ವಾರ್ಷಿಕ 3 ಪರೀಕ್ಷೆ ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಅಂಕ ಉಳಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.


