ಬೆಂಗಳೂರು:ದೇಶದ ಜನತೆಗೆ ಮೂಲಸೌಕರ್ಯ, ಅಭಿವೃದ್ಧಿ ಹಾಗೂ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮ ರೂಪಿಸುವ ಉದ್ದೇಶದಿಂದ ಏಪ್ರಿಲ್ 1ರಿಂದ ರಾಜ್ಯಾದ್ಯಂತ ಜನಗಣತಿ ಕಾರ್ಯ ಆರಂಭಗೊಳ್ಳಲಿದೆ.
ಶಿಕ್ಷಣ ಹಾಗೂ ಪ್ರಜಾಫ್ರಭುತ್ವ ವ್ಯವಸ್ಥೆ ಬಲಗೊಳಿಸುವ, ರಾಷ್ಟ್ರವನ್ನು ಜಾಗತಿಕವಾಗಿ ಮುಂಚೂಣಿಗೆ ತರುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ, ಜನಗಣತಿ ಹಾಗೂ ಜಾತಿಗಣತಿಯನ್ನು ಎರಡು ಹಂತಗಳಲ್ಲಿ ಕೈಗೊಳ್ಳಲು ಚಾಲನೆ ನೀಡಿದ್ದಾರೆ.
ಶಿಕ್ಷಕರು, ಸರ್ಕಾರಿ ಸಿಬ್ಬಂದಿ ನಿಯೋಜನೆ
ಹದಿನೈದು ವರ್ಷಗಳ ನಂತರ ನಡೆಯುತ್ತಿರುವ ಈ ಮಹತ್ವದ ಕಾರ್ಯಕ್ಕೆ ಶಿಕ್ಷಕರು ಹಾಗೂ ಇತರೆ ಸರ್ಕಾರಿ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ.
2025-26ನೇ ಸಾಲಿನ ಪ್ರಾಥಮಿಕ ಮತ್ತು ಪದವಿಪೂರ್ವ ಶಿಕ್ಷಣದ ಪರೀಕ್ಷಾ ಕಾರ್ಯ ಮುಗಿಯುತ್ತಿದ್ದಂತೆ ಜನಗಣತಿ ಕಾರ್ಯ ಏಪ್ರಿಲ್ 1ರಿಂದ 15ರವರೆಗೆ ನಡೆಯಲಿದೆ.
ಏಪ್ರಿಲ್ 16ರಿಂದ ಮೇ 15ರವರೆಗೆ 2ನೇ ಹಂತದ ಗಣತಿಯಲ್ಲಿ ನಿಯೋಜಿತಗೊಂಡ ಅಧಿಕಾರಿ ಮತ್ತು ನೌಕರರು ಮನೆ-ಮನೆಗೆ ತೆರಳಿ ಗಣತಿ ಕೈಗೊಳ್ಳಲಿದ್ದಾರೆ.
2027ರಲ್ಲಿ ಜಾತಿ ಆಧಾರಿತ ಜನಗಣತಿ
ಎರಡನೇ ಹಂತದಲ್ಲಿ 2027ರಲ್ಲಿ ಜಾತಿ ಆಧಾರಿತ ಜನಗಣತಿ ನಡೆಯಲಿದ್ದು, ಮಾರ್ಚ್ 1, 2027 ಅನ್ನು ಉಲ್ಲೇಖಿತ ದಿನಾಂಕವಾಗಿ ನಿಗದಿಪಡಿಸಲಾಗಿದೆ.
1931ರ ನಂತರ ಇದೇ ಮೊದಲ ಬಾರಿಗೆ ರಾಷ್ಟ್ರವ್ಯಾಪಿ ಜಾತಿ ಆಧಾರಿತ ಎಣಿಕೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ.
ರಾಷ್ಟ್ರವ್ಯಾಪಿ ಈ ಬೃಹತ್ ಕಾರ್ಯಕ್ಕೆ ಸುಮಾರು 11,718.24 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.
34 ಲಕ್ಷ ಗಣತಿದಾರರು, ಮೇಲ್ವಿಚಾರಕರು
ಸುಮಾರು 30 ರಿಂದ 34ಲಕ್ಷ ಗಣತಿದಾರರು ಮತ್ತು ಮೇಲ್ವಿಚಾರಕರು ಈ ಕಾರ್ಯಕ್ಕೆ ನಿಯೋಜನೆಗೊಳ್ಳಲಿದ್ದಾರೆ.
ಜನಗಣತಿ ಮತ್ತು ಜಾತಿಗಣತಿ ಮೂಲಕ ಗ್ರಾಮ, ಪಟ್ಟಣ ಮತ್ತು ವಾರ್ಡ್ಮಟ್ಟದಲ್ಲಿ ಸೂಕ್ಷ್ಮ ದತದತಾಂಶವನ್ನು ಪಡೆಯುವುದಲ್ಲದೆ, ಕಲ್ಯಾಣ ಯೋಜನೆಗಳನ್ನು ರೂಪಿಸಲು ಹಾಗೂ ನಿರ್ದಿಷ್ಟ ಜನಸಂಖ್ಯಾ ಗುಂಪುಗಳಿಗೆ ಸಂಪನ್ಮೂಲಗಳ ಹಂಚಿಕೆ, ಶಾಲೆಗಳು ಮತ್ತು ಆಸ್ಪತ್ರೆಗಳಂತಹ ಸಾರ್ವಜನಿಕ ಮೂಲಸೌಕರ್ಯ ಯೋಜಿಸಲು ಸರ್ಕಾರಕ್ಕೆ ಅನುವು ಮಾಡಿಕೊಡುತ್ತದೆ.
ಕೇಂದ್ರ ಗೃಹ ಸಚಿವಾಲಯ ಹಮ್ಮಿಕೊಂಡಿರುವ ಮೊದಲ ಹಂತದ ಗಣತಿಯಲ್ಲಿ 15 ದಿನಗಳ ಕಾಲ ವೆಬ್ ಪೋರ್ಟಲ್ ಮೂಲಕ ಸ್ವಯಂ ಗಣತಿಗೆ ಅವಕಾಶ ಕಲ್ಪಿಸಿದೆ.
ಸ್ವಯಂ ಗಣತಿಗೆ ಅವಕಾಶ
ಮನೆಯ ಯಾವುದೇ ಒಬ್ಬ ಸದಸ್ಯ 15 ನಿಮಿಷಗಳಲ್ಲಿ ಸ್ವಯಂ ಗಣತಿ ಮಾಡಿ ಮನೆಯ ವಿವರಗಳನ್ನು ಒದಗಿಸಬಹುದಾಗಿದೆ.
ಮೊಬೈಲ್ ಇಲ್ಲವೇ ಇ-ಮೇಲ್ನಲ್ಲಿ ಸ್ವಯಂ ಗಣತಿ ಐಡಿ ಪಡೆಯಬಹುದಾಗಿರುತ್ತದೆ.
ಎರಡನೇ ಹಂತದಲ್ಲಿ ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ಮನೆಗಳ ಗಣತಿ ಮಾಹಿತಿ ಸಂಗ್ರಹಿಸಲಿದ್ದಾರೆ.
ಗಣತಿದಾರರೊಂದಿಗೆ ಐಡಿ ಹಂಚಿಕೊಳ್ಳಬೇಕು
ಗಣತಿದಾರರು ಮನೆಗೆ ಭೇಟಿ ನೀಡಿದಾಗ ದೃಢೀಕರಿಸಲು ಮತ್ತು ಸ್ವಯಂ ಗಣತಿ ದತ್ತಾಂಶದ ಅಂತಿಮ ಸಲ್ಲಿಕೆಗೆ ಐಡಿಯನ್ನು ಗಣತಿದಾರರೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ.
ನಾಗರಿಕರು ತಮ್ಮ ಮಾಹಿತಿ ದಾಖಲಿಸಲು ಅವಕಾಶ ಇದ್ದು, ಇದರಿಂದ ಗಣತಿ ಕಾರ್ಯದಲ್ಲಿ ಪಾರದರ್ಶಕತೆ, ವೇಗ ಮತ್ತು ನಿಖರತೆ ಹೆಚ್ಚಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2027ರ ಜನಗಣತಿ ಮಾಹಿತಿ ಆಧಾರದ ಮೇಲೆ ಸರ್ಕಾರದ ಜನಪರ ಕಲ್ಯಾಣ ಕಾರ್ಯಕ್ರಮಗಳು, ಅಭಿವೃದ್ಧಿ, ಮೂಲಸೌಕಲರ್ಯ, ಅತ್ಯಂತ ಹಿಂದುಳಿದ ವರ್ಗದ ಸಮುದಾಯಗಳಿಗೆ ವಿಶೇಷ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಈ ಗಣತಿ ಮಹತ್ವದ ಪಾತ್ರ ವಹಿಸಿಲಿದೆ.
ಜನತೆ ಗಣತಿಗೆ ಸಹಕರಿಸಿ
ಈ ಕಾರಣಕ್ಕಾಗಿ ರಾಜ್ಯದ ಜನತೆ ಗಣತಿ ಕಾರ್ಯಕ್ಕೆ ಬರುವ ಅಧಿಕಾರಿಗಳೊಂದಿಗೆ ಸಹಕರಿಸಿ ಅಗತ್ಯ ಮಾಹಿತಿಗಳನ್ನು ನೀಡಬೇಕು.
ಇದನ್ನು ಅತ್ಯಂತ ಗೌಪ್ಯವಾಗಿ ಇರಿಸಲಾಗುವುದು ಎಂದು ಈಗಾಗಲೇ ಕೇಂದ್ರ ಗೃಹ ಸಚಿವಾಲಯ ದೇಶದ ಜನತೆಗೆ ಭರವಸೆ ನೀಡಿದೆ.
ಈ ಜನಗಣತಿ ಅಂಕಿ-ಅಂಶಗಳು ಲೋಕಸಭಾ ಹಾಗೂ ರಾಜ್ಯ ವಿಧಾನಸಭೆಗಳ ಕ್ಷೇತ್ರಗಳ ವಿಂಗಡಣಾ ಕಾರ್ಯಕ್ಕೂ ಸಹಕಾರಿಯಾಗಲಿದೆ.
ಕರ್ನಾಟಕದಲ್ಲಿ ಜಾತಿಗಣತಿ
ಕೇಂದ್ರ ಸರ್ಕಾರ ಹೊಸದಾಗಿ ಜನಗಣತಿ ಹಾಗೂ ಜಾತಿಗಣತಿ ನಡೆಸುವುದಾಗಿ ಪ್ರಕಟ ಮಾಡಿದ ನಂತರವೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕದಲ್ಲಿ ಜಾತಿಗಣತಿ ನಡೆಸಿದರು.
ಸುಮಾರು 437 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚ ಮಾಡಿ ನಡೆಸಿದ ಜಾತಿಗಣತಿ ಇದುವರೆಗೂ ಫಲಿತಾಂಶ ನೀಡಿಲ್ಲ.
ಕೇಂದ್ರ ಪ್ರಕಟಿಸಿದಂತೆ ಬರುವ ಬುಧವಾರದಿಂದ ಜನಗಣತಿ ಕಾರ್ಯ ಆರಂಭವಾಗಲಿದೆ.


