ಬಾಗಲಕೋಟೆ:ಪೂರ್ಣಾವಧಿಗೆ ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದ ಸಿದ್ದರಾಮಯ್ಯ, ಇದೀಗ ತಮ್ಮ ವರಸೆ ಬದಲಿಸಿ, ಮುಂದಿನ ಎರಡು ವರ್ಷ ’ನಾವೇ’ ಮುಖ್ಯಮಂತ್ರಿ ಆಗಿರುತ್ತೇವೆ ಎಂದಿದ್ದಾರೆ.
ನನ್ನ ಸರ್ಕಾರ ಎನ್ನುತ್ತಿದ್ದವರು, ನಮ್ಮದೇ ಸರ್ಕಾರ ಇರುತ್ತದೆ, ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ, ಅಭಿವೃದ್ಧಿ ಕಾರ್ಯಗಳು ಕೈಗೊಳ್ಳಲು ಸಹಕಾರಿಯಾಗಲಿದೆ ಎಂದಿದ್ದಾರೆ.
’ನಾನೇ’ ಬಿಟ್ಟು ’ನಮ್ಮದೇ’
ಮಂಗಳವಾರ ಬಾಗಲಕೋಟೆ ವಿಧಾನಸಭಾ ಉಪಚುನಾವಣಾ ಪ್ರಚಾರ ವೇಳೆ ಹಾಗೂ ಪತ್ರಿಕಾಗೋಷ್ಠಿಗಳಲ್ಲಿ ’ನಾನೇ’ ಎಂಬುದನ್ನು ಬಿಟ್ಟು ’ನಮ್ಮದೇ’ ಎಂಬ ಪದ ಬಳಕೆ ಮಾಡಿದ್ದಾರೆ.
ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಮುಖ್ಯಮಂತ್ರಿ, ಕಳೆದ ನಾಲ್ಕು ದಿನಗಳಿಂದ ಈ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ನಮ್ಮ ಸರ್ಕಾರಕ್ಕೆ ಮತ್ತಷ್ಟು ಬಲ ಬರುತ್ತದೆ ಎಂಬ ಮಾತುಗಳನ್ನು ಆಡಿದ್ದಾರೆ.
ಗೊಂದಲ ಬಗೆಹರಿಸಲು ಮನವಿ
ಕಳೆದ ಮೂರು ದಿನಗಳ ಹಿಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅಧಿನಾಯಕ ರಾಹುಲ್ ಗಾಂಧಿ ಭೇಟಿ ಮಾಡಿ, ಕರ್ನಾಟಕ ಕಾಂಗ್ರೆಸ್ನಲ್ಲಿನ ಗೊಂದಲ ಬಗೆಹರಿಸಲು ನಿರ್ಣಯ ಕೈಗೊಳ್ಳಿ ಎಂಬುದಾಗಿ ಮನವಿ ಮಾಡಿದ್ದಾರೆ.
ಖರ್ಗೆ ಸಲಹೆಗೆ, ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ನಂತರ ಈ ಬಗ್ಗೆ ನಾವು ತೀರ್ಮಾನ ಕೈಗೊಳ್ಳೋಣ ಎಂಬ ಭರವಸೆ ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪಂಚರಾಜ್ಯಗಳ ವಿಧಾನಸಭೆಗಳಿಗೆ ಮತದಾನ ಮುಗಿಯುತ್ತಿದ್ದಂತೆ ತಮಗೆ ಮುಖ್ಯಮಂತ್ರಿ ಪಟ್ಟ ಕೊಡಿಸಿ ಎಂದು ವರಿಷ್ಠರಲ್ಲಿ ಪಟ್ಟು ಹಿಡಿದಿದ್ದಾರೆ.
ಒಂದಲ್ಲಾ ಒಂದು ನೆಪ
ಪಕ್ಷ ನೀಡಿದ ಭರವಸೆಯಂತೆ ಕಳೆದ ನವೆಂಬರ್ 20ಕ್ಕೆ ಅಧಿಕಾರ ಹಸ್ತಾಂತರ ಆಗಬೇಕಿತ್ತು, ಅದು ಮುಗಿದು 5 ತಿಂಗಳು ಕಳೆದಿದೆ, ಒಂದಲ್ಲಾ ಒಂದು ನೆಪ ಮುಂದಿಟ್ಟುಕೊಂಡು ಸಿದ್ದರಾಮಯ್ಯ ಅವರನ್ನು ಅಧಿಕಾರದಲ್ಲಿ ಮುಮದುವರೆಸಲಾಗುತ್ತಿದೆ.
ಪಕ್ಷದ ಬಹುತೇಕ ಶಾಸಕರು ಅಧಿಕಾರ ಹಂಚಿಕೆ ಆಗಬೇಕೆಂದು ಬಯಸಿದ್ದಾರೆ, ಮತ್ತಷ್ಟು ವಿಳಂಬ ಮಾಡದೆ, ಮತದಾನ ಮುಗಿಯುತ್ತಿದ್ದಂತೆ ತಮಗೆ ಅಧಿಕಾರ ಕೊಡಿಸಿ ಎಂದು ಎಐಸಿಸಿಯ ಎಲ್ಲಾ ಪ್ರಮುಖ ನಾಯಕರ ಬಳಿಯೂ ಮನವಿ ಮಾಡಿದ್ದಾರೆ.
ಖರ್ಗೆ-ರಾಹುಲ್ ಭೇಟಿ
ಪಂಚರಾಜ್ಯಗಳ ಚುನಾವಣೆ ಕುರಿತಂತೆ ಚರ್ಚಿಸಲು ಖರ್ಗೆ ಅವರು ರಾಹುಲ್ ಭೇಟಿ ಮಾಡಿದ ಸಂದರ್ಭದಲ್ಲಿ ಕರ್ನಾಟಕ ಕಾಂಗ್ರೆಸ್ನಲ್ಲಿನ ಗೊಂದಲದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.
ಚುನಾವಣೆ ಮುಗಿದ ನಂತರ ಗೊಂದಲ ಸರಿಪಡಿಸೋಣ ಎಂಬ ರಾಹುಲ್ ಮಾತು ಮುಖ್ಯಮಂತ್ರಿ ಅವರಿಗೂ ತಲುಪಿರಬಹುದು, ಈ ಬೆಳವಣಿಗೆ ನಂತರವೇ ’ನಾನು’ ಎನ್ನುವುದನ್ನು ಬಿಟ್ಟು ’ನಾವು’ ಎನ್ನುತ್ತಿದ್ದಾರೆ ಎಂಬುದು ಪಕ್ಷದ ವಲಯಗಳಲ್ಲಿ ಕೇಳಿಬರುತ್ತಿರುವ ಮಾತು.


