ಮೈಸೂರು:ವಸೂಲಿ ದಂಧೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪುತ್ರ ಯತೀಂದ್ರ ಅವರನ್ನೇ ನೇಮಿಸಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ರಾಜ್ಯದ ಎಲ್ಲ ಅಧಿಕಾರಿಗಳಿಗೂ ಮಗನ ವಸೂಲಿ ದಂಧೆ ಹೇಗೆ ನಡೆಯುತ್ತದೆ ಎಂಬುದು ತಿಳಿದಿದೆ, ಮಗನಿಗೆ ಆಶ್ರಯ ಕಮಿಟಿ ಸದಸ್ಯತ್ವ ನೀಡಿ ಜಿಲ್ಲೆ ನೋಡಿಕೊಳ್ಳುವಂತೆ ನಾನು ಬಿಟ್ಟಿಲ್ಲ.
ನನ್ನ ಮಗನಿಗೆ ವಸೂಲಿ ಮಾಡು ಎಂದಿಲ್ಲ
ನಾನು ಮುಖ್ಯಮಂತ್ರಿ ಆಗಿದ್ದಾಗ ನನ್ನ ಮಗನಿಗೆ ಆಶ್ರಯ ಸಮಿತಿ ಸದಸ್ಯನನ್ನಾಗಿ ಮಾಡಿ ಯಾವುದಾದರೂ ಜಿಲ್ಲೆ ನೋಡಿಕೊ ಅಥವಾ ವಸೂಲಿ ಮಾಡು ಎಂದು ಹೇಳಲಿಲ್ಲ ಎಂದರು.
ಸಿದ್ದರಾಮಯ್ಯ ಅವರಿಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ, ನಾನು, ನನ್ನ ಮಗನನ್ನು ಜನರ ಅಪೇಕ್ಷೆಯಂತೆ ರಾಜಕೀಯಕ್ಕೆ ತಂದಿದ್ದೇನೆಯೇ ಹೊರತು ವಸೂಲಿಗಲ್ಲ ಎಂದಿದ್ದಾರೆ.
ಸಿದ್ದರಾಮಯ್ಯ ಅವರ ಮೊದಲ ಮಗನ ನಿಧನದ ಬಳಿಕ ಎರಡನೇ ಮಗನಿಗೆ ಆಶ್ರಯ ಕಮಿಟಿಯಲ್ಲಿ ಸದಸ್ಯ ಮಾಡಿದ್ದಾರೆ, ಅವರ ಎರಡನೇ ಮಗನನ್ನು ರಾಜಕೀಯಕ್ಕೆ ಏಕೆ ಕರೆದುಕೊಂಡು ಬಂದರು, ವಸೂಲಿ ಮಾಡೋಕೆ ಅಲ್ಲವೇ, ವಸೂಲಿ ಮಾಡುವುದಕ್ಕೆ ನಾನು ನನ್ನ ಮಗನನ್ನು ಬಿಟ್ಟಿಲ್ಲ, ಅವರ ಮಗ ಎಲ್ಲಾ ಕಡೆ ವಸೂಲಿ ಮಾಡಿಕೊಂಡು ಕೂತಿದ್ದಾರೆ ಎಂದು ಹರಿಹಾಯ್ದರು.
ಭೂತದ ಬಾಯಲ್ಲಿ ಭಗವದ್ಗೀತೆ
ಸಿದ್ದರಾಮಯ್ಯ ಜೆಡಿಎಸ್ನಲ್ಲಿದ್ದಾಗ ದೊಡ್ಡ ಸಾಧನೆ ಮಾಡಿದ್ದೆ ಎಂಬುದಾಗಿ ಕೊಚ್ಚಿಕೊಂಡಿದ್ದಾರೆ, ಈ ಟೀಕೆ ಭೂತದ ಬಾಯಲ್ಲಿ ಭಗವದ್ಗೀತೆ ಬಂದ ಹಾಗಿದೆ.
ಜನತಾದಳದಲ್ಲಿದ್ದಾಗ ಆ ಪಕ್ಷ 58 ಸೀಟು ಗೆದ್ದಿದ್ದು ಎಂಬುದಾಗಿ ಸಿದ್ದರಾಮಯ್ಯ ಪದೇ ಪದೇ ಹೇಳುತ್ತಾರೆ, ಆ ಚುನಾವಣೆಯಲ್ಲಿ ಪಕ್ಷ ಅಷ್ಟು ಸೀಟು ಗೆಲ್ಲಲು ದೇವೇಗೌಡರು ಮತ್ತು ನನ್ನ ಪಾತ್ರವೂ ಸಾಕಷ್ಟಿದೆ.
ಅಹಿಂದ ನಾಯಕರೆಂದು ಬಿಂಬಿಸಿಕೊಳ್ಳುವ ಅವರು ಕಾಂಗ್ರೆಸ್ನಿಂದ ಹೊರಬಂದು ಸ್ವಂತ ಪಕ್ಷ ಕಟ್ಟಿ ಐದು ಸೀಟು ಗೆಲ್ಲುಸಿಕೊಳ್ಳುವಿರಾ ಎಂದು ಸವಾಲು ಹಾಕಿದರು.
ಇನ್ನೊಬ್ಬರು ಕಟ್ಟಿದ ಪಕ್ಷ ಸೇರಿ ರಾಜಕೀಯ
ಸಿದ್ದರಾಮಯ್ಯ ಅವರಿಗೆ ಸ್ವಂತ ಪಕ್ಷ ಕಟ್ಟಿ ಸ್ವಂತ ಬಲದ ಮೇಲೆ ಗೆಲ್ಲುವ ಶಕ್ತಿ ಇಲ್ಲ, ಇನ್ನೊಬ್ಬರು ಕಟ್ಟಿರುವ ಪಕ್ಷ ಸೇರಿ 40-50 ವರ್ಷಗಳಿಂದ ಕಷ್ಟಪಟ್ಟು ಬೆಳೆದಿರುವ ನಾಯಕರನ್ನು ಮೂಲೆಗುಂಪು ಮಾಡಿ ರಾಜಕೀಯ ಶಕ್ತಿ ಬಳಸಿಕೊಂಡಿದ್ದಾರೆ.
ಚುನಾವಣೆಯಲ್ಲಿ ಗೆಲುವು, ಸೋಲು ಸಾಮಾನ್ಯ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋತ ನಂತರ ರಾಜಕೀಯ ನಿವೃತ್ತಿ ಪಡೆದರೇ, ಅವರಿಗೆ ಜೆಡಿಎಸ್ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ.
ಜೆಡಿಎಸ್ ಬಗ್ಗೆ ಹಗುರವಾಗಿ ಮಾತನಾಡುವ ಸಿದ್ದರಾಮಯ್ಯ, ಅದೇ ಪಕ್ಷದಿಂದ ರಾಜಕೀಯ ಅಸ್ತಿತ್ವ ಕಂಡುಕೊಂಡರು ಎಂಬುದನ್ನು ಮರೆಯಬಾರದು.
1999ರಲ್ಲಿ ಎಷ್ಟು ಸೀಟು ಗೆದ್ದಿದ್ದರು
1999ರಲ್ಲಿ ಇವರೇ ಪಕ್ಷದ ಅಧ್ಯಕ್ಷರಾಗಿದ್ದರು, ಆಗ ಎಷ್ಟು ಸೀಟು ಗೆದ್ದಿದ್ದರು, ವಿಧಾನಸಭಾ ಚುನಾವಣೆಯಲ್ಲಿ ನಾನು, ಎಚ್.ಡಿ.ದೇವೇಗೌಡರು, ಸಿದ್ದರಾಮಯ್ಯ, ಮಹದೇವಪ್ಪ ಎಲ್ಲರೂ ಸೋತೆವು, ನಾನಾಗಲಿ, ದೇವೇಗೌಡರಾಗಲಿ ರಾಜಕೀಯ ಬೇಡ ಎಂದು ಕಣ್ಣೀರು ಹಾಕಲಿಲ್ಲ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಏಕೆ ಸೋತರು ಎಂಬುದನ್ನು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ.
ಪರಾಭವಗೊಂಡ ಸಿದ್ದರಾಮಯ್ಯ, ಅಂದು ಮಹದೇವಪ್ಪ ಜೊತೆಗೂಡಿ ದೇವೇಗೌಡರ ಮನೆಗೆ ಬಂದು ಗಳಗಳನೆ ಅತ್ತರು, ಒಂದು ಬಕೆಟ್ ಇಟ್ಟಿದ್ದರೆ ತುಂಬಿ ಬಿಡುತ್ತಿತ್ತು.
ಪರ್ಯಾಯ ವ್ಯವಸ್ಥೆ ಮಾಡಿಕೊಟ್ಟರು
ರಾಜಕೀಯ ಜೀವನವೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದ ಸಿದ್ದರಾಮಯ್ಯ ಅವರಿಗೆ ಗೌಡರು ಧೈರ್ಯ ಹೇಳಿದ್ದಲ್ಲದೆ, ಹೆದರುವ ಅವಶ್ಯಕತೆ ಇಲ್ಲ ಪಕ್ಷ ಕಟ್ಟೋಣ ನಡೆಯಿರಿ ಎಂದು ಹೇಳಿ ಪರ್ಯಾಯ ವ್ಯವಸ್ಥೆ ಮಾಡಿಕೊಟ್ಟರು.
2004ರಲ್ಲಿ ಮಂಡ್ಯ, ರಾಮನಗರ ಎಲ್ಲೂ ಸಿದ್ದರಾಮಯ್ಯ ಪ್ರಚಾರಕ್ಕೆ ಬಂದಿಲ್ಲ, ನಾವು ಅವರನ್ನು ಕರೆಯಲಿಲ್ಲ, ಅಹಿಂದ ರಚಿಸಿ ದೇವೇಗೌಡರಿಗೆ ಅನ್ಯಾಯ ಮಾಡಿದರು, ಪಕ್ಷದ ಬೆನ್ನಿಗೆ ಚೂರಿ ಹಾಕಿದರು.
2006ರಲ್ಲಿ 200 ಮತಗಳಲ್ಲಿ ಗೆದ್ದಾಗ ಅವರ ಪರಿಸ್ಥಿತಿ ಹೇಗಿತ್ತು ಎಂಬುದನ್ನು ನೆನಪಿಸಿಕೊಳ್ಳಲಿ, ಈಗ ಅಧಿಕಾರ ಇದೆ ಎಂದು ಹಳೆಯದನ್ನು ಮರೆತರೆ ಜನ ಕ್ಷಮಿಸುವುದಿಲ್ಲ.
ಬೆರಳೆಣಿಕೆ ಮಂದಿಯೂ ಹಿಂದೆ ಹೋಗಲಿಲ್ಲ
ಇವೆಲ್ಲವನ್ನೂ ಸಿದ್ದರಾಮಯ್ಯ ಮರೆತಂತಿದೆ, ಪಕ್ಷ ತೊರೆದು ಹೋಗುವಾಗ ಅವರ ಹಿಂದೆ ಬೆರಳೆಣಿಕೆ ಮಂದಿಯೂ ಹೋಗಲಿಲ್ಲ, 58 ಮಂದಿಯನ್ನು ಅವರೇ ಗೆಲ್ಲಿಸಿದ್ದರೆ, ಎಲ್ಲರೂ ಹೋಗಬೇಕಿತ್ತಲ್ಲ.
ರಾಜಕೀಯ ಬದುಕಿನಲ್ಲಿ ಸೋಲು-ಗೆಲುವು ಸಹಜ, ಆ ನೋವು ಇಬ್ಬರಿಗೂ ಆಗಿದೆ, ಸೋತಾಕ್ಷಣ ಜನ ತಿರಸ್ಕರಿಸಿದ್ದಾರೆ ಎನ್ನುವುದು ಸರಿಯಲ್ಲ.
ರಾಜ್ಯದಲ್ಲಿ ಕಾಂಗ್ರೆಸ್ಗೆ ಕೊನೆ ಮೊಳೆ ಹೊಡೆಯುವುದು ಸಿದ್ದರಾಮಯ್ಯ ಅವರ ಕನಸು ಮತ್ತು ಗುರಿ ಎಂದರು.
ಅಧಿಕಾರ ಇಲ್ಲದೇ ಒಂದು ದಿನವೂ ಇರುವುದಿಲ್ಲ
ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವುದಿಲ್ಲ, ಅವರ ಸ್ವಭಾವ ನನಗೆ ಗೊತ್ತು, ಅಧಿಕಾರ ಇಲ್ಲದೇ ಅವರು ಒಂದು ದಿನವೂ ಇರುವುದಿಲ್ಲ. ಕರ್ನಾಟಕದಲ್ಲಿ ನಮ್ಮದು ಸಣ್ಣ ಪಕ್ಷ, ದೇಶದಲ್ಲಿ ದೊಡ್ಡ ಪಕ್ಷ ಕಾಂಗ್ರೆಸ್ ಕಥೆ ಏನಾಗಿದೆ.
ಪಾಪ, ಆ ಪಕ್ಷದ ನಾಯಕರೊಬ್ಬರು ಮುಖ್ಯಮಂತ್ರಿ ಸ್ಥಾನಕ್ಕಾಗಿ ದೇವರ ಮೊರೆ ಹೋಗುತ್ತಿದ್ದಾರೆ, ಸ್ವಾರ್ಥಕ್ಕಾಗಿ ದೇವರನ್ನು ಬೇಡಿದರೆ ಫಲ ನೀಡುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಅವರಿಗೂ ಟಾಂಗ್ ಕೊಟ್ಟರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವುದಕ್ಕೆ ನಮಗೇನು ಹೊಟ್ಟೆಕಿಚ್ಚು ಇಲ್ಲ, ಅವರ ಪಕ್ಷದಲ್ಲೇ ಅನೇಕರಿಗೆ ಹೊಟ್ಟೆ ನೋವು ಇದೆ, ಕೆಲವರು ದಿನ ಬೆಳಗಾದರೆ ಟೈಮ್ ನೋಡಿಕೊಂಡು ಸಮಯ ಬರುತ್ತೆ ಅಂತ ಓಡಾಡುತ್ತಿದ್ದಾರೆ.
ಸ್ವಘೋಷಿತ ಪೂರ್ಣಾವಧಿ ಮುಖ್ಯಮಂತ್ರಿ
ನಾನು ಪೂರ್ಣಾವಧಿ ಮುಖ್ಯಮಂತ್ರಿ ಎಂಬುದಾಗಿ ಸ್ವತಃ ಸಿದ್ದರಾಮಯ್ಯ ಹೇಳುತ್ತಾರೆ, ಮತ್ತೊಂದು ಕಡೆ ಹೈಕಮಾಂಡ್ ತೀರ್ಮಾನ ಅಂತಾರೆ.
ಅವರ ಮಗ ನನ್ನ ತಂದೆಯೇ ಐದು ವರ್ಷ ಮುಖ್ಯಮಂತ್ರಿ ಎನ್ನುತ್ತಾರೆ, ಮುಂದೆಯೂ ಅವರೇ ಮುಖ್ಯಮಂತ್ರಿ ಅಂತಾರೆ, ಸಿದ್ದರಾಮಯ್ಯ ಹೈಕಮಾಂಡ್ ಅನ್ನು ಹೆದರಿಸಿ ಇಟ್ಟುಕೊಂಡಿದ್ದಾರೆ, ಯಾವ ಕಾರಣಕ್ಕೂ ಅವರು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲ್ಲ, ಕೊಡುವ ಪ್ರಶ್ನೆಯೂ ಇಲ್ಲ ಎನ್ನುವುದು ನನ್ನ ಅಭಿಪ್ರಾಯ ಎಂದರು.
ಮುಖ್ಯಮಂತ್ರಿ ಕನಸು ಕಾಣವುದು ತಪ್ಪಲ್ಲ
ಮುಖ್ಯಮಂತ್ರಿ ಸ್ಥಾನದ ಕನಸು ಎಲ್ಲರೂ ಕಾಣಬಹುದು, ತಪ್ಪೇನು ಅಲ್ಲ, ಕನಸು ಕಾಣಲು ಎಲ್ಲರಿಗೂ ದೇವರು ಅವಕಾಶ ಕೊಟ್ಟಿದ್ದಾನೆ, ಭಗವಂತ ಆ ಕನಸನ್ನು ನನಸು ಮಾಡಬೇಕು ಅಷ್ಟೇ.
ಒಬ್ಬಬ್ಬೊರಿಗೆ ಒಂದೊಂದು ನಂಬಿಕೆ, ಸ್ವಾರ್ಥಕ್ಕಾಗಿ ಕನಸು ಕಾಣುವವರಿಗೆ ಭಗವಂತ ಒಲಿಯುವುದಿಲ್ಲ, ಪ್ರಯತ್ನ ವಿಫಲ ಆದರೂ ಪ್ರಾರ್ಥನೆ ವಿಫಲ ಆಗಲ್ಲ ಎನ್ನುತ್ತಾರೆ, ಕೇವಲ ಬಾಯಿ ಮಾತಿನಲ್ಲಿ ಹೇಳಿದರೆ ಅದು ಆಗಲ್ಲ, ಬಾಯಲ್ಲಿ ಹೇಳಿದಷ್ಟು ಸುಲಭವೂ ಅಲ್ಲ ಎಂದು ವ್ಯಂಗ್ಯವಾಡಿದರು.


