ಕಲಬುರಗಿ:ಕರ್ನಾಟಕ ಕಾಂಗ್ರೆಸ್ ನಾಯಕತ್ವ ಬದಲಾವಣೆ ಕುರಿತು ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ತಾವು ಚರ್ಚಿಸಿ ನಿರ್ಧರಿಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ನಾಯಕತ್ವ ಖಾಲಿ ಇಲ್ಲ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ, ಈ ವಿಚಾರ ಎದುರಾದಾಗ ನಾವು ಮೂವರೂ ಕುಳಿತು ತೀರ್ಮಾನಿಸುತ್ತೇವೆ.
ಒಂದಷ್ಟು ಸಮಯ ಹಿಡಿಯುತ್ತದೆ
ಅಧಿಕಾರ ಹಸ್ತಾಂತರ ಕುರಿತು ಖರ್ಗೆ ಅವರು ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿದ್ದು, ನಾಯಕತ್ವ ಬದಲಾವಣೆ ವಿಚಾರ ಬಂದಾಗ ಪಕ್ಷ ತೀರ್ಮಾನ ಕೈಗೊಳ್ಳುತ್ತದೆ, ಅದಕ್ಕೆ ಒಂದಷ್ಟು ಸಮಯ ಹಿಡಿಯುತ್ತದೆ ಎಂದರು.
ರಾಜ್ಯ ಕಾಂಗ್ರೆಸ್ನಲ್ಲಿನ ಸಮಸ್ಯೆಯನ್ನು ಆದಷ್ಟು ಶೀಘ್ರ ಪರಿಹರಿಸುತ್ತೇವೆ, ಅದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ.
ತಾವೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಬೇಕೆಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೇರಿದಂತೆ ದಲಿತ ಸಮುದಾಯದ ಸಚಿವರು ಮನವಿ ಮಾಡುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ, ನಾನು ಮುಖ್ಯಮಂತ್ರಿ ಆದರೆ, ಉತ್ತಮ ಎಂದು ಅವರೂ ಹೇಳುತ್ತಾರೆ, ನೀವೂ ಹೇಳುತ್ತೀರಿ, ಮೇಲಿನವರೂ ಹೇಳುತ್ತಾರೆ, ಆದರೆ, ಅದಕ್ಕೆ ಹಣೆಬರಹ ಬೇಕು ಎಂದರು.
ಸೋನಿಯಾ ಮಾತ್ರ ನಿರ್ಧರಿಸಲು ಸಾಧ್ಯ
ಹಣೆಬರಹ ಪದ ಬಳಸಿದ ಮರುಕ್ಷಣವೇ, ನಮ್ಮಲ್ಲಿ ಪಕ್ಷದ ಸಿದ್ಧಾಂತದಂತೆ ನಡೆಯುತ್ತದೆ, ಪಕ್ಷಕ್ಕೆ ದುಡಿದವರಿಗೆ ಯಾವ ಸ್ಥಾನ ನೀಡಬೇಕೆಂಬುದನ್ನು ಸೋನಿಯಾ ಗಾಂಧಿ ಮಾತ್ರ ನಿರ್ಧರಿಸಲು ಸಾಧ್ಯ ಎಂದರು.
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಹಿರಿಯ ನಾಯಕ ಖರ್ಗೆ ಮುಖ್ಯಮಂತ್ರಿ ಆಗಬೇಕು ಎಂದು ಪುನರುಚ್ಛರಿಸಿದರು.
ಪಕ್ಷಕ್ಕಾಗಿ 50 ವರ್ಷಗಳ ಕಾಲ ದುಡಿದಿದ್ದಾರೆ, ಅವರ ಸಮಕಾಲೀನರವರಾದ ಎಸ್.ಬಂಗಾರಪ್ಪ, ಗುಂಡೂರಾವ್, ಧರ್ಮಸಿಂಗ್, ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದಾರೆ.
ಪಕ್ಷಕ್ಕೆ ಖರ್ಗೆ ಸುದೀರ್ಘ ಸೇವೆ
ಪಕ್ಷಕ್ಕೆ ಸುದೀರ್ಘ ಸೇವೆ ಸಲ್ಲಿಸಿರುವ ಖರ್ಗೆ ಅವರಿಗೆ ಈ ಅವಕಾಶ ದೊರೆತಿಲ್ಲ, ಅವರಿಗೂ ಮುಖ್ಯಮಂತ್ರಿ ಸ್ಥಾನ ದೊರೆಯಲಿ ಎಂಬ ಉದ್ದೇಶದಿಂದ ನಾವು ವರಿಷ್ಠರಲ್ಲಿ ಮನವಿ ಮಾಡಿ ಒತ್ತಾಯಿಸಿದ್ದೇವೆ.
ನಾಯಕತ್ವ ವಿಚಾರ ಬಂದಾಗ ನಮ್ಮ ಅನಿಸಿಕೆಗಳನ್ನು ಹೇಳಬಹುದೇ ಹೊರತು ಅದು ನಮ್ಮ ನಿರ್ಧಾರವಾಗುವುದಿಲ್ಲ, ಪಕ್ಷದ ತೀರ್ಮಾನವೇ ಅಂತಿಮವಾಗಿರುತ್ತದೆ, ಅದಕ್ಕೆ ನಾವು ತಲೆಬಾಗಬೇಕಾಗುತ್ತದೆ ಎಂದರು.


