ಬೆಂಗಳೂರು:ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ನ 7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಶಾಸಕರಿಂದ ಅಡ್ಡ ಮತದಾನ ಘಟನೆಯನ್ನು ಪಕ್ಷದ ದೆಹಲಿ ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದಾರೆ.
ಅಡ್ಡ ಮತದಾನ ಕುರಿತಂತೆ ರಾಜ್ಯ ನಾಯಕರಿಂದ ವರದಿ ಕೇಳಿರುವ ವರಿಷ್ಠರು, ರಾಜ್ಯ ನಾಯಕತ್ವದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೂವರು ಸದಸ್ಯರ ಸಮಿತಿ
ಅಡ್ಡ ಮತದಾನದ ಸತ್ಯಾಸತ್ಯತೆ ಮತ್ತು ವಾಸ್ತವಿಕತೆ ತಿಳಿಯಲು, ಪಕ್ಷದ ಮಾಜಿ ಪ್ರಧಾನಕಾರ್ಯದರ್ಶಿ ಹಾಗೂ ಹಾಲಿ ಶಾಸಕ ಸಿ.ಟಿ.ರವಿ ನೇತೃತ್ವದಲ್ಲಿ ಮೂವರು ಸದಸ್ಯರ ಸತ್ಯಶೋಧನಾ ಸಮಿತಿ ರಚಿಸಲಾಗಿದೆ.
ಮಾಜಿ ಸಚಿವ ಎನ್.ಮಹೇಶ್, ವಿಧಾನಸಭಾ ಸದಸ್ಯ ಮಹೇಶ್ ಟೆಂಗಿನಕಾಯಿ ಸಮಿತಿಯ ಇತರ ಸದಸ್ಯರಾಗಿದ್ದಾರೆ.
ಘಟನೆ ಬಗ್ಗೆ ಪೂರ್ಣ ಮಾಹಿತಿ ಸಿದ್ಧಪಡಿಸಿ, ಜೂನ್ 27ರಂದು ದೆಹಲಿಗೆ ಬರುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಸೂಚಿಸಿದ್ದಾರೆ.
ವರಿಷ್ಠರಿಗೆ ಅಗರ್ವಾಲ್ ವರದಿ
ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್, ತಮ್ಮ ಪಕ್ಷದ ಶಾಸಕರ ಅಡ್ಡ ಮತದಾನ ರಾಜ್ಯ ನಾಯಕತ್ವದ ವೈಫಲ್ಯ ಎಂದಿದ್ದಾರೆ, ಅಲ್ಲದೆ, ಈ ಕುರಿತಂತೆ ಪಕ್ಷದ ವರಿಷ್ಠರಿಗೆ ವರದಿ ನೀಡಿದ್ದಾರೆ ಎಂದು ಹೇಳಲಾಗಿದೆ.
ತಮ್ಮ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರನ್ನೂ ಹಿಡಿದಿಟ್ಟುಕೊಳ್ಳುವಲ್ಲಿ ರಾಜ್ಯ ನಾಯಕರು ವಿಫಲರಾಗಿದ್ದಾರೆ, ಪಕ್ಷದ ಅಧ್ಯಕ್ಷರು ಮತ್ತು ವಿಧಾನಸಭೆಯ ಪ್ರತಿಪಕ್ಷ ನಾಯಕರು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡುತ್ತಿಲ್ಲ.
ಶಾಸಕರು ಬಣಗಳಾಗಿ ವಿಭಜನೆಯಾಗಿದ್ದಾರೆ, ಹೀಗಾಗಿ ಪಕ್ಷದ ಶಿಸ್ತು ಇಲ್ಲಿ ಕೆಲಸ ಮಾಡುತ್ತಿಲ್ಲ, ಶಾಸಕರ ಅಡ್ಡ ಮತದಾನಕ್ಕೆ ನಾಯಕತ್ವದ ವೈಫಲ್ಯವೇ ಕಾರಣ ಎಂದು ತಮ್ಮ ವರದಿಯಲ್ಲಿ ತಿಳಿಸಿರುವುದಾಗಿ ಗೊತ್ತಾಗಿದೆ.
ನಬಿನ್ರಿಂದ ಪ್ರಾಥಮಿಕ ಮಾಹಿತಿ
ರಾಧಾ ಮೋಹನ್ ದಾಸ್ ಅಗರ್ವಾಲ್ ಮಾಹಿತಿ ಬೆನ್ನಲ್ಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಗುರುವಾರ ರಾತ್ರಿಯೇ ವಿಜಯೇಂದ್ರ ಅವರನ್ನು ಸಂಪರ್ಕಿಸಿ ಅಡ್ಡ ಮತದಾನಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮಾಹಿತಿ ಪಡೆದರು.
ನಂತರ ಸತ್ಯಾಸತ್ಯತೆ ಅರಿಯಲು ಶೋಧನಾ ಸಮಿತಿ ರಚಿಸುತ್ತೇವೆ, ವರದಿ ಸಿದ್ಧಗೊಳ್ಳುತ್ತಿದ್ದಂತೆ ದೆಹಲಿಗೆ ಬನ್ನಿ ಎಂದು ಸೂಚಿಸಿದರು.
ತಿಂಗಳ 25ರೊಳಗೆ ವರದಿ
ತ್ರಿಸದಸ್ಯ ಸಮಿತಿ ಪಕ್ಷದ ಎಲ್ಲಾ ಶಾಸಕರು ಮತ್ತು ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಜೊತೆ ಮಾತುಕತೆ ನಡೆಸಿ ವರದಿ ಸಿದ್ಧಪಡಿಸಬೇಕು, ಈ ಸಮಯದಲ್ಲಿ ಅಡ್ಡ ಮತದಾನಕ್ಕೆ ಕಾರಣವಾದ ಅಂಶಗಳ ಬಗ್ಗೆಯೂ ಅಧ್ಯಯನ ನಡೆಸಲು ಸೂಚನೆ ನೀಡಿದ್ದು, ಈ ತಿಂಗಳ 25ರೊಳಗೆ ವರದಿ ನೀಡಲು ಸೂಚನೆ ನೀಡಲಾಗಿದೆ.
ರಾಧಾಮೋಹನ್ ದಾಸ್ ಸಲಹೆ ಮೇರೆಗೆ ಅಶೋಕ್ ಗುರುವಾರ ರಾತ್ರಿಯೇ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿ ಮೈತ್ರಿಕೂಟದ ಶಾಸಕರಿಂದ ಅಡ್ಡ ಮತದಾನಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡಿದ್ದಾರೆ.


