ಬೆಂಗಳೂರು:ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಬಾವ ಹಾಗೂ ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ ಡಾ.ವೈ.ಮಂಜುನಾಥ್ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿದೇರ್ಶನಾಲಯ (ಇ.ಡಿ) ಕೇಂದ್ರ ಭದ್ರತಾ ಪಡೆ ರಕ್ಷಣೆಯಲ್ಲಿ ದಾಳಿ ನಡೆಸಿದೆ.
ಬಿಜೆಪಿ ಮಾಜಿ ಸಂಸದ ದೇವೇಂದ್ರಪ್ಪ ಪುತ್ರರೂ ಆಗಿರುವ ಮಂಜುನಾಥ್ ಅವರ ಆತ್ಮೀಯ ಸ್ನೇಹಿತರ ಮನೆ ಮತ್ತು ಕಚೇರಿಗಳ ಮೇಲೂ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.
ಅಕ್ರಮ ಸಂಪಾದನೆ ಆರೋಪ
ಅಕ್ರಮ ಹಣ ವರ್ಗಾವಣೆ, ಆಸ್ತಿ ಸಂಪಾದನೆ ಆರೋಪದ ಮೇಲೆ ಬೆಳಗಾವಿ, ಬಳ್ಳಾರಿ, ವಿಜಯನಗರ, ಬೆಂಗಳೂರು, ಮೈಸೂರು, ಮಹಾರಾಷ್ಟ್ರದ ಸೊಲ್ಲಾಪುರ, ಪುಣೆ, ಮುಂಬೈ ಸೇರಿದಂತೆ ೨೦ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿ ಶೋಧನಾ ಕಾರ್ಯ ಮುಂದುವರೆದಿದೆ.
ಮಂಜುನಾಥ್ ಬಾನಾಮಿ ಹೆಸರಿನಲ್ಲಿ ವೈನ್ಶಾಪ್, ಬಾರ್ ಮತ್ತು ರೆಸಾರ್ಟ್ ಹೊಂದಿರುವುದಲ್ಲದೆ, ಆದಾಯ ಮೂಲಕ್ಕಿಂತ ಭಾರೀ ಪ್ರಮಾಣದಲ್ಲಿ ಸಂಪತ್ತು ಗಳಿಸಿರುವ ಆರೋಪದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅವರ ಆಸ್ತಿ-ಪಾಸ್ತಿಗಳ ಮೇಲೆ ಇ.ಡಿ. ದಾಳಿ ನಡೆಸಿದೆ.
ಸರ್ಕಾರಿ ಅಧಿಕಾರಿಯಾಗಿ ಅಕ್ರಮ ಲೇವಾದೇವಿ ಮತ್ತು ಹಣಕಾಸು ವಹಿವಾಟನ್ನು ದೊಡ್ಡ ಪ್ರಮಾಣದಲ್ಲಿ ನಡೆಸುತ್ತಿದ್ದರೆಂಬ ಆರೋಪವೂ ಇವರ ಮೇಲಿದೆ.
ಬೆಂಗಳೂರು-ಗೋವಾ ಅಧಿಕಾರಿಗಳ ಜಂಟಿ ದಾಳಿ
ಬೆಂಗಳೂರು ಮತ್ತು ಗೋವಾದ ಇ.ಡಿ. ಅಧಿಕಾರಿಗಳು ಜಂಟಿಯಾಗಿ, ಬೆಳಗಾವಿಯ ದೂರದರ್ಶನ ಕೇಂದ್ರದ ಸಮೀಪವಿರುವ ಅವರ ಮನೆ, ಅಲ್ಲದೆ, ಬೆಂಗಳೂರು, ವಿಜಯನಗರ, ಅರಸೀಕೆರೆಯಲ್ಲಿರುವ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ.
ಹರಪನಹಳ್ಳಿಯ ಅರಸೀಕರೆಗ್ರಾಮದ ಎರಡು ಮನೆ, ಅಥಣಿ ತಾಲ್ಲೂಕಿನ ಐನಾಪುರ ಗ್ರಾಮದಲ್ಲಿನ ಸ್ನೇಹಿತನ ಮನೆ, ಬೆಂಗಳೂರಿನಲ್ಲಿನ ಅಪಾರ್ಟ್ಮೆಂಟ್ಗಳ ಮೇಲೆ ಕೇಂದ್ರ ಭದ್ರತಾ ಪಡೆಯ 10 ತುಕಡಿಗಳ ರಕ್ಷಣೆಯಲ್ಲಿ ದಾಳಿ ನಡೆಸಲಾಗಿದೆ.
ಅಬಕಾರಿ ಎಸ್ಪಿ ಮನೆ ಮೇಲೂ ದಾಳಿ
ಮಂಜುನಾಥ್ ಆಪ್ತ ತುಮಕೂರು ಅಬಕಾರಿ ಎಸ್ಪಿ ಸತೀಶ್ ಕಾಗಲಿ ಅವರ ಬೆಳಗಾವಿಯ ಐನಾಪುರ ಪಟ್ಟಣ ಹಾಗೂ ಶ್ರೀನಗರದಲ್ಲಿರುವ ನಿವಾಸಗಳ ಮೇಲೂ ದಾಳಿ ನಡೆದಿದೆ.
ಚಿಕ್ಕೋಡಿಯ ಅಬಕಾರಿ ಡಿವೈಎಸ್ಪಿ ವಿಶ್ವನಾಥ್ ಗಾಣಿಗೇರ ಮನೆ, ಕಚೇರಿ ಮೇಲೆ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಲಾಗಿದೆ.


