ಅಭಿವೃದ್ಧಿ ಕಡೆ ಗಮನಹರಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಕರೆ
ಬೆಂಗಳೂರು:ಅಧಿಕಾರಿಗಳು ರಾಜಕಾರಣಿಗಳ ಓಲೈಕೆ ಬಿಟ್ಟು ಅಭಿವೃದ್ಧಿ ಕಡೆ ಗಮನಹರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲಾಖಾ ಪ್ರಧಾನಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳಿಗೆ ಇಂದಿಲ್ಲಿ ತಾಕೀತು ಮಾಡಿದ್ದಾರೆ.
ಓಲೈಕೆ ರಾಜಕಾರಣದಿಂದ ಆಡಳಿತ ಸಂಪೂರ್ಣವಾಗಿ ಕುಸಿಯುವುದಲ್ಲದೆ, ಸರ್ವಾಧಿಕಾರಿ ಧೋರಣೆಗೆ ದಾರಿ ಮಾಡಿಕೊಡುತ್ತದೆ, ಇದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದಿದ್ದಾರೆ.
ಮುಖ್ಯಸ್ಥರೊಂದಿಗೆ ತುರ್ತು ಸಭೆ
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಉಪಮುಖ್ಯಮಂತ್ರಿ ಸೇರಿದಂತೆ ಸಚಿವರುಗಳನ್ನು ದೂರವಿಟ್ಟು, ಇಲಾಖಾ ಮುಖ್ಯಸ್ಥರೊಂದಿಗೆ ತುರ್ತು ಸಭೆ ನಡೆಸಿದ ಮುಖ್ಯಮಂತ್ರಿ, ಮಧ್ಯವರ್ತಿಗಳನ್ನು ದೂರವಿಟ್ಟು ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದು ತಿಳಿಸಿದ್ದಾರೆ.
ಸಚಿವರಿಗೆ ಕಾನೂನು ವ್ಯಾಪ್ತಿಯೊಳಗೆ ಸಲಹೆಗಳನ್ನು ನೀಡಿ, ಸರ್ಕಾರಕ್ಕೆ ಒಳ್ಳೆಯ ಹೆಸರು ತರುವುದು ಕಾರ್ಯದರ್ಶಿಗಳ ಕರ್ತವ್ಯದ ಮೇಲೆ ಅವಲಂಬಿತವಾಗಿದೆ.
ಆದರೆ, ಕೆಲವರು, ಇದನ್ನು ಮಾಡದೆ, ಓಲೈಕೆ ರಾಜಕಾರಣ ಮಾಡಿಕೊಂಡು ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಕೆಲಸ ನಡೆದಿದೆ.
ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ
ನಗರದಲ್ಲಿ ಬಿದ್ದ ಒಂದೇ ಮಳೆಗೆ 10 ಜನರ ಪ್ರಾಣ ಹೋಗಿದೆ, ಅಲ್ಲದೆ, ಸಾರ್ವಜನಿಕರ ಆಸ್ತಿ-ಪಾಸ್ತಿ ಹಾನಿಯಾಗಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಕಾರಣವಲ್ಲವೆ ಎಂದು ಪ್ರಶ್ನಿಸಿದರು.
ಸರ್ಕಾರದ ಕಾರ್ಯಕ್ರಮಗಳ ಅನುಷ್ಟಾನ ಜಾರಿ ಜೊತೆಗೆ ಜನರ ಸಂಕಷ್ಟಗಳಿಗೆ ಸ್ಪಂದಿಸುವುದು ನಿಮ್ಮ ಕರ್ತವ್ಯ, ಅದನ್ನು ನೀವು ಮಾಡುತ್ತಿದ್ದೀರಾ.
ನಿಮಗೆ ವಹಿಸಿರುವ ಇಲಾಖೆಗಳಲ್ಲಿ ಸಭೆಗಳನ್ನು ನಡೆಸಿ ಕೆಳಹಂತದ ಅಧಿಕಾರಿಗಳ ಮೇಲೆ ಹಿಡಿತ ಹೊಂದಿದರೆ, ಸಮಸ್ಯೆಗಳೇ ಎದುರಾಗುವುದಿಲ್ಲ.
ಕೊಠಡಿಯಲ್ಲೇ ಕುಳಿತು ಆಡಳಿತ
ನಿಮಗೆ ವಹಿಸಿರುವ ಜಿಲ್ಲೆಗಳಲ್ಲಿ ಪ್ರವಾಸವನ್ನೂ ಮಾಡುವುದಿಲ್ಲ, ಕೊಠಡಿಯಲ್ಲೇ ಕುಳಿತು ಆಡಳಿತ ನಡೆಸಿದರೆ, ಜನರ ಸಮಸ್ಯೆಗಳು ನಿಮಗೆ ತಿಳಿಯುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಜನಪರವಾಗಿ ಇರಬೇಕೇ ಹೊರತು ಜನ ವಿರೋಧಿ ಆಗಬಾರದು, ರಾಜಕಾರಣಿಗಳಿಗಿಂತ ಅಧಿಕಾರಿಗಳಿಗೆ ಹೆಚ್ಚು ಕೆಲಸ ಇರುತ್ತದೆ, ನಾವು ಬರುತ್ತೇವೆ, ಹೋಗುತ್ತೇವೆ, ಆದರೆ, ನೀವು 30 ರಿಂದ 35 ವರ್ಷ ಖಾಯಂ ಆಗಿರುತ್ತೀರಿ.
ನೀವು ನೀಡುವಂತಹ ಅಭಿಪ್ರಾಯಗಳು ಸಂವಿಧಾನರೀತ್ಯ ಇರಬೇಕು, ಸತ್ಯ ಹಾಗೂ ನಿರ್ಭೀತಿಯಿಂದ ಕೂಡಿರಬೇಕು, ಇದನ್ನು ಪಾಲಿಸುತ್ತಿದ್ದೀರಾ ಎಂದರು.
ಅಭಿಪ್ರಾಯ ಮಂತ್ರಿಗಳಿಗೆ ತಿಳಿಸಿ
ದೇಶದ ಮೊದಲ ಗೃಹ ಸಚಿವ ಸರದಾರ್ ವಲ್ಲಭ ಭಾಯ್ ಪಟೇಲ್ ಅವರು, ಕಾರ್ಯದರ್ಶಿಗಳು ನಿರ್ಭಯ ಹಾಗೂ ಸ್ವತಂತ್ರವಾಗಿ ತಮ್ಮ ಅಭಿಪ್ರಾಯಗಳನ್ನು ಮಂತ್ರಿಗಳಿಗೆ ತಿಳಿಸಬೇಕು.
ಮಂತ್ರಿ ಅಸಮಾಧಾನಗೊಳ್ಳುವರೆಂಬ ಕಾರಣಕ್ಕೆ ಸತ್ಯ ಹೇಳುವುದರಿಂದ ಹಿಂಜರಿಯಬಾರದು, ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ತಿಳಿಸಿ, ಯಾರೇ, ಎಷ್ಟೇ ಒತ್ತಡ ಹೇರಿದರೂ ಕಾನೂನಿನ ವಿರುದ್ಧ ಕೆಲಸ ಮಾಡಬೇಡಿ ಎಂದಿದ್ದರು.
ಅಧಿಕಾರಿಗಳು ಎಂದೂ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಬಾರದು, ತಪ್ಪು ದಾರಿಗೆ ಎಳೆಯಬಾರದು, ನಿಮ್ಮ ನಿಲುವು ಮತ್ತು ತೀರ್ಮಾನ ಜನಪರವಾಗಿರಬೇಕು ಎಂದರು.
ನಿಜವಾದ ರಾಜಕೀಯ ಸ್ವಾತಂತ್ರ್ಯ
ಡಾ.ಬಾಬಾ ಸಾಹೇಬ್ ಅಂಬೇಡ್ಕರ್1949 ನವೆಂಬರ್ 25ರಂದು ಮಾಡಿದ ಭಾಷಣದಲ್ಲಿ, ರಾಜಕೀಯ ಪ್ರಜಾಪ್ರಭುತ್ವ ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಯ ತಳಹದಿಯ ಮೇಲೆ ನಿಂತಿದೆ ಎಂದಿದ್ದರು, ಅಂದರೆ, ದೇಶದ ಪ್ರತಿಯೊಬ್ಬರಿಗೂ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ತುಂಬುವ ಕಾರ್ಯ ಮಾಡಿದರೆ ಮಾತ್ರ ನಿಜವಾದ ರಾಜಕೀಯ ಸ್ವಾತಂತ್ರ್ಯ ಸಾಕಾರಗೊಳ್ಳಲು ಸಾಧ್ಯ ಎಂದರು.
ಬಜೆಟ್ ಘೋಷಣೆಗಳನ್ನು ಜಾರಿಗೊಳಿಸುವ ಕಾರ್ಯ ಅಧಿಕಾರಿಗಳದ್ದು, ಕಳೆದ ವರ್ಷದ ಬಜೆಟ್ನ 15 ಘೋಷಣೆಗಳು ಇನ್ನೂ ಜಾರಿ ಆಗಿಲ್ಲ, ಇದಕ್ಕೆ ಯಾರು ಹೊಣೆ, ಆಯವ್ಯಯದಲ್ಲಿ 218 ಹೊಸ ಘೋಷಣೆಗಳು ಸೇರಿ ಒಟ್ಟಾರೆ 565 ಘೋಷಣೆ ಮಾಡಿದ್ದೇವೆ.
ಎಲ್ಲಾ ಘೋಷಣೆಗಳನ್ನು ಅದೇ ಆರ್ಥಿಕ ವರ್ಷದಲ್ಲಿ ಜಾರಿಗೊಳಿಸುವುದು ಅಧಿಕಾರಿಗಳ ಜವಾಬ್ದಾರಿ, ಬಜೆಟ್ ಘೋಷಣೆಗಳು ಯಾವುದೇ ಕಾರಣಕ್ಕೂ ಅನುಷ್ಠಾನಗೊಳ್ಳದೆ ಇರಬಾರದು, ಅನುಷ್ಠಾನದಲ್ಲಿನ ಪ್ರಾಯೋಗಿಕ ತೊಡಕುಗಳನ್ನು ನೇರವಾಗಿ ನನ್ನ ಅಥವಾ ಮುಖ್ಯಕಾರ್ಯದರ್ಶಿ ಗಮನಕ್ಕೆ ತರಬೇಕು.
ಸರ್ಕಾರಿ ಆದೇಶ ಜಾರಿಗೊಳಿಸಿ
ಈ ತಿಂಗಳಾಂತ್ಯದೊಳಗೆ ಎಲ್ಲಾ ಸರ್ಕಾರಿ ಆದೇಶ ಜಾರಿಗೊಳಿಸಿ, ಅನುಷ್ಠಾನ ಕಾರ್ಯ ಆರಂಭಿಸಬೇಕು, ತಪ್ಪಿದರೆ, ಆಯಾ ಕಾರ್ಯದರ್ಶಿಗಳನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.
ರಾಜ್ಯಮಟ್ಟದ ಎರಡು ಜನಸ್ಪಂದನ ಸಭೆಯಲ್ಲಿ ಸ್ವೀಕರಿಸಿದ್ದ 15,334 ಅರ್ಜಿಗಳ ಪೈಕಿ 15,295 ವಿಲೇವಾರಿ ಮಾಡಲಾಗಿದೆ, ಬಾಕಿಯಿರುವ 45 ಅರ್ಜಿಗಳನ್ನು ವಿಲೇವಾರಿ ಮಾಡಿ.
ಸಾರ್ವಜನಿಕ ಕುಂದುಕೊರತೆಯ 3,27,052 ಅರ್ಜಿಗಳ ಪೈಕಿ 3,17,576 ವಿಲೇವಾರಿ ಮಾಡಲಾಗಿದೆ, 1,828 ಅರ್ಜಿಗಳ ವಿಲೇವಾರಿಗೆ ಕಾಲಾವಧಿ ಮುಗಿದಿದೆ, ಸಕಾಲದಲ್ಲಿ ವಿಲೇವಾರಿ ಮಾಡದಿದ್ದರೆ ಜನರಿಗೆ ಸರ್ಕಾರದ ಮೇಲಿನ ನಂಬಿಕೆಯೇ ಹೊರಟು ಹೋಗುತ್ತದೆ, ಇದಕ್ಕೆ ಅವಕಾಶ ನೀಡಬಾರದು, ಸಕಾಲದಲ್ಲಿ ವಿಲೇವಾರಿ ಮಾಡಬೇಕು.
ಹುದ್ದೆಗಳ ಭರ್ತಿಗೆ ಮಂಜೂರಾತಿ
ಹುದ್ದೆಗಳ ಭರ್ತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು, ಆರ್ಥಿಕ ಇಲಾಖೆಯಿಂದ 24,300 ಹುದ್ದೆಗಳ ಭರ್ತಿಗೆ ಮಂಜೂರಾತಿ ನೀಡಲಾಗಿದೆ, ಕಲ್ಯಾಣ ಕರ್ನಾಟಕಕ್ಕೆ ಸಂಬಂಧಿಸಿದ ವೃಂದ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗದೇ 32,132 ಹುದ್ದೆ ಬಾಕಿ ಇವೆ, ಇದನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ 2 ಕೋಟಿ ರೂ.ವರೆಗೆ ಮೀಸಲಾತಿ ಕಲ್ಪಿಸಲಾಗಿದೆ, ವಿವಿಧ ಕಾಮಗಾರಿ ಸೇರಿಸಿ ಪ್ಯಾಕೇಜ್ ಮೂಲಕ ಮೀಸಲಾತಿ ತಪ್ಪಿಸಲು ಅವಕಾಶ ನೀಡಬಾರದು, ಎಲ್ಲಾ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು, ಕಾಮಗಾರಿ ವಿಳಂಬದಿಂದ ನಿರ್ಮಾಣ ವೆಚ್ಚ ಹೆಚ್ಚಳಕ್ಕೆ ಅವಕಾಶ ಆಗುತ್ತದೆ.
ಕುಡಿಯುವ ನೀರಿನ ಪರಿಸ್ಥಿತಿ
ಈ ವರ್ಷ ಮಳೆ ಶೇ.5ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಯ ಜಿಲ್ಲೆಯಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ಬಗ್ಗೆ ನಿರಂತರ ನಿಗಾ ವಹಿಸಬೇಕು.
ಈ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳ ಜೊತೆ ಸಭೆ ನಡೆಸಬೇಕು, ತಮ್ಮ ಉಸ್ತುವಾರಿಯ ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸುವುದು ಆಯಾ ಕಾರ್ಯದರ್ಶಿಗಳ ಜವಾಬ್ದಾರಿಯಾಗಿದೆ, ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆ ಆಗಬಾರದು ಎಂದರು.


