ಬೆಂಗಳೂರು:ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಬಿಪಿಎಲ್ ಪಡಿತರ ಚೀಟಿದಾರರಿಗೆ 5 ಕೆ.ಜಿ. ಅಕ್ಕಿ ಜೊತೆಗೆ ಎಣ್ಣೆ, ಬೇಳೆ ಮತ್ತು ಇತರೆ ಆಹಾರ ಪದಾರ್ಥಗಳನ್ನು ನೀಡುವ ಸರ್ಕಾರದ ಮಹತ್ವಾಕಾಂಕ್ಷಿ ಇಂದಿರಾ ಕಿಟ್ ಯೋಜನೆಗೆ ಕಾಂಗ್ರೆಸ್ ವರಿಷ್ಠರು ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ.
ಯೋಜನೆ ಜಾರಿಯಲ್ಲಿ ಭ್ರಷ್ಟಾಚಾರ ಆರೋಪ ಎದುರಾಗಲಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ವರಿಷ್ಠರು ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ದಿನೋಪಯೋಗಿ ಪದಾರ್ಥ ತೀರ್ಮಾನ
ಬಿಪಿಎಲ್ ಪಡಿತರ ಚೀಟಿದಾರರ ಕುಟುಂಬಕ್ಕೆ ಮಾಸಿಕ ಪ್ರತಿ ಯೂನಿಟ್ಗೆ ತಲಾ 10 ಕೆ.ಜಿ. ಅಕ್ಕಿ ಉಚಿತವಾಗಿ ನೀಡುವ ಬದಲು ಐದು ಕೆ.ಜಿ. ಅಕ್ಕಿ ಹಾಗೂ ಇತರೆ ದಿನೋಪಯೋಗಿ ಆಹಾರ ಪದಾರ್ಥಗಳನ್ನು ನೀಡುವ ತೀರ್ಮಾನ ಕೈಗೊಳ್ಳಲಾಗಿತ್ತು.
ಯೋಜನೆ ಅನುಷ್ಟಾನಕ್ಕೆ ವಾರ್ಷಿಕ 6,000 ಕೋಟಿ ರೂ. ತಗಲುತ್ತಿದ್ದರೂ, ವಾರ್ಷಿಕವಾಗಿ ಸರ್ಕಾರಕ್ಕೆ ಸ್ವಲ್ಪಮಟ್ಟಿನ ಉಳಿತಾಯವೇ ಆಗುತ್ತಿತ್ತು.
ಇಂದಿರಾ ಯೋಜನೆಯಡಿ ಬಿಪಿಎಲ್ ಕುಟುಂಬಕ್ಕೆ ಒಂದು ಲೀಟರ್ ಕಡಲೇಕಾಯಿ ಎಣ್ಣೆ ಇಲ್ಲವೇ ಸೂರ್ಯಕಾಂತಿ ಎಣ್ಣೆ, ತಲಾ ಒಂದು ಕೆ.ಜಿ. ಸಕ್ಕರೆ, ಉಪ್ಪು ಹಾಗೂ ತೊಗರಿಬೇಳೆ ನೀಡಲು ಸಿದ್ಧತೆ ನಡೆಸಲಾಗಿತ್ತು.
ನಾಲ್ಕು ಸದಸ್ಯರಿಗೆ ಒಂದು ಕಿಟ್
ಕುಟುಂಬದ ಒಂದರಿಂದ ನಾಲ್ಕು ಸದಸ್ಯರಿಗೆ ಒಂದು, ಆರು ಮಂದಿ ಇದ್ದರೆ 2, ಎಂಟು ಮಂದಿಯಿದ್ದರೆ ಮೂರು ಆಹಾರ (ಇಂದಿರಾ) ಕಿಟ್ ನೀಡಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ನಿರ್ಧರಿಸಿತ್ತು.
ಅಕ್ಕಿ ಜೊತೆಗೆ ಆಹಾರ ಕಿಟ್ಗಳನ್ನು ಫಲಾನುಭವಿಗಳಿಗೆ ನಿಗದಿತ ಕಾಲಕ್ಕೆ ತಲುಪಿಸುವ ಉದ್ದೇಶದಿಂದ ರಾಜ್ಯವನ್ನು ಐದು ವಿಭಾಗಗಳನ್ನಾಗಿ ಮಾಡಿ ಪ್ರತ್ಯೇಕ ಪೂರೈಕೆಗೆ ಸಿದ್ಧತೆ ನಡೆಸಲಾಗಿತ್ತು.
ಇಂದಿರಾ ಕಿಟ್ಗಾಗಿ ಇಲಾಖೆ ಟೆಂಡರ್ ಕರೆದು 20 ಗುತ್ತಿಗೆದಾರರನ್ನು ಆಯ್ಕೆ ಮಾಡಿ, ಅದರಲ್ಲಿ ಅಂತಿಮವಾಗಿ ಏಳು ಮಂದಿಯ ಪಟ್ಟಿ ಸಿದ್ಧಪಡಿಸಿತ್ತು.
ಹಣಕಾಸು ಇಲಾಖೆ ತಕರಾರು
ಆಹಾರ ಇಲಾಖೆ ಕೈಗೊಳ್ಳುವ ತೀರ್ಮಾನದಿಂದ ಸರ್ಕಾರಕ್ಕೆ ಕಳಂಕ ಬರುತ್ತದೆ, ಮತ್ತು ಹಣ ಕೈಬದಲಾವಣೆ ಆಗುವುದೆಂಬ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆ ತಕರಾರು ತೆಗೆದು ಗುತ್ತಿಗೆ ನೀಡುವುದನ್ನೇ ವಿರೋಧಿಸಿತ್ತು.
ಇದರ ಬದಲು ಕುಟುಂಬದ ಒಬ್ಬರಿಗೆ ರೂಪ್ವೇ ಕಾರ್ಡ್ ವಿತರಿಸಿ, ಕುಟುಂಬದ ಸದಸ್ಯರು ತಮಗೆ ನಿಗದಿ ಪಡಿಸಿದ ಆಹಾರ ಪದಾರ್ಥಗಳನ್ನು ರಾಜ್ಯದ ಯಾವುದೇ ಭಾಗದ ಕಿರಾಣಿ ಅಂಗಡಿಯಲ್ಲಿ ಖರೀದಿಸುವ ವ್ಯವಸ್ಥೆ ತನ್ನಿ ಎಂದು ಸಲಹೆ ನೀಡಿತ್ತು.
ರೂಪ್ವೇ ಕಾರ್ಡ್ಗಳನ್ನು ನಾವೇ ನೀಡುತ್ತೇವೆ, ಇದರಿಂದ ಸರ್ಕಾರಕ್ಕೆ ಕಳಂಕ ಬರುವುದಿಲ್ಲ ಹಾಗೂ ವಿಳಂಬವೂ ಆಗದು, ತಕ್ಷಣದಿಂದಲೇ ಫಲಾನುಭವಿಗಳಿಗೆ ಸೌಲಭ್ಯ ಲಭ್ಯವಾಗಲಿದೆ ಎಂದಿತ್ತು.
ಆಹಾರ ಇಲಾಖೆ ಪಟ್ಟು
ಆದರೆ, ಆಹಾರ ಇಲಾಖೆ ಇದನ್ನು ಒಪ್ಪದೆ, ಟೆಂಡರ್ ಕರೆದೇ ಇಂದಿರಾ ಕಿಟ್ ವಿತರಣೆ ಆಗಬೇಕು ಎಂದು ಪಟ್ಟು ಹಿಡಿಯಿತು.
ಟೆಂಡರ್ ನೀಡುವ ಸಂದರ್ಭದಲ್ಲೂ ಭಾರೀ ಷರತ್ತುಗಳನ್ನು ಹಾಕಿದ್ದರಿಂದ ಕಡಿಮೆ ಸಂಖ್ಯೆಯಲ್ಲಿ ಬಿಡ್ದಾರರು ಪಾಲ್ಗೊಳ್ಳುವಂತಾಯಿತು.
ಇದರ ನಡುವೆ ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದ ಅಡುಗೆ ಎಣ್ಣೆ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿ, ಇಂದಿರಾ ಕಿಟ್ಗೆ ನಿಗದಿಯಾದ ಅನುದಾನ ಸಾಲದಾಗುತ್ತದೆ, ಆದ್ದರಿಂದ, ಅನುದಾನ ಹೆಚ್ಚಳ ಮಾಡುವಂತೆ ಕೋರಲಾಯಿತು.
ಸಚಿವ ಮುನಿಯಪ್ಪ ಸಂಕಟ
ಈ ಪ್ರಸ್ತಾವನೆಯನ್ನೂ ಹಣಕಾಸು ಇಲಾಖೆ ಸಾರಾಸಗಟಾಗಿ ತಳ್ಳಿಹಾಕಿದ್ದರಿಂದ ಸಂಬಂಧಪಟ್ಟ ಖಾತೆ ಸಚಿವ ಕೆ.ಎಚ್.ಮುನಿಯಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಾಸ್ತವ ಸಂಗತಿ ವಿವರಿಸಿದರು.
ಇಷ್ಟರಲ್ಲಾಗಲೇ ಎಐಸಿಸಿ, ಮುಖ್ಯಮಂತ್ರಿ ಅವರಿಗೆ ಇಂದಿರಾ ಕಿಟ್ ಯೋಜನೆ ಕುರಿತ ದೂರುಗಳ ಮಾಹಿತಿ ತಲುಪಿಸಿದ್ದರಿಂದ ಸಿದ್ದರಾಮಯ್ಯ, 10 ಕೆ.ಜಿ. ಅಕ್ಕಿ ನೀಡುವ ಪದ್ಧತಿಯನ್ನೇ ಮುಂದುವರೆಸಿ ಎಂದು ಸೂಚಿಸಿದರು.


