ಬೆಂಗಳೂರು:ಪಶ್ಚಿಮ ಬಂಗಾಳದಲ್ಲಿ ಕೇಸರಿ ಪತಾಕೆ ಹಾರುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಬಿಜೆಪಿ ಬಾವುಟ ಹಾರಿಸಲು ತಯಾರಿ ಆರಂಭಿಸಿದ್ದಾರೆ.
ನಾಳೆ, ಭಾನುವಾರ ರಾಜ್ಯಕ್ಕೆ ಒಂದು ದಿನದ ಪ್ರವಾಸ ಕೈಗೊಳ್ಳುತ್ತಿರುವ ಪ್ರಧಾನಿ ಮೋದಿ, ಎಚ್ಎಎಲ್ ವಿಮಾನ ನಿಲ್ದಾಣದ ವಿಐಪಿ ಲಾಂಜ್ನಲ್ಲಿ ಪಕ್ಷದ ಆಯ್ದ 60 ಮುಖಂಡರ ಸಭೆ ಕರೆದಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಕ್ರಮ
ರಾಜ್ಯ ಬಿಜೆಪಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
2028ರಲ್ಲಿ ಕರ್ನಾಟಕ ವಿಧಾನಸಭೆಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆ ಸಂಬಂಧ ಮೋದಿ ಅವರು ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಮಂಡಲದ ಪ್ರತಿಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಷಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ರಾಜ್ಯ ಪ್ರತಿನಿಧಿಸುವ ಸಂಸದರು, ಹಿರಿಯ ಶಾಸಕರು ಮತ್ತು ಮುಖಂಡರಿಗೆ ಮಾತ್ರ ಸಭೆಗೆ ಆಹ್ವಾನ ನೀಡಲಾಗಿದೆ.
ಪಕ್ಷ ಮತ್ತೆ ಅಧಿಕಾರಕ್ಕೆ
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ದಕ್ಷಿಣ ಭಾರತದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಪ್ರಧಾನಿ ಮೋದಿ, ನಾಯಕರುಗಳಿಗೆ ಕೆಲವು ಸಲಹೆ, ಸೂಚನೆ ನೀಡಲಿದ್ದಾರೆ.
ಬಂಗಾಳದಲ್ಲಿ ಕಳೆದ ಎರಡು ವರ್ಷಗಳ ಹಿಂದಿನಿಂದಲೇ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು, ಟಿಎಂಸಿ ಸರ್ಕಾರದ ವಿರುದ್ಧ ಹೋರಾಟ ನಡೆಸಿ, ಮತದಾರರನ್ನು ಒಲಿಸಿಕೊಳ್ಳುವ ಮೂಲಕ ಅಧಿಕಾರಕ್ಕೆ ಬರಲು ಶ್ರಮಿಸಿದ್ದಾರೆ.
ರಾಜ್ಯದಲ್ಲೂ ಈಗಿನಿಂದಲೇ ಕಾಂಗ್ರೆಸ್ ದುರಾಡಳಿತ ಹಾಗೂ ವೈಫಲ್ಯಗಳನ್ನು ಜನರ ಗಮನಕ್ಕೆ ತಂದು ಪ್ರತಿ ಬೂತ್ಗಳಲ್ಲಿ ಸಂಘಟನಾ ಕಾರ್ಯ ಚುರುಕುಗೊಳಿಸಿ, ಜೆಡಿಎಸ್ ಜೊತೆಗಿನ ಮೈತ್ರಿಗೆ ಚ್ಯುತಿ ಬರದಂತೆ ಕಾರ್ಯಕ್ರಮ ರೂಪಿಸಿ.
ಮೈತ್ರಿ ಪರಿಣಾಮ ಅಧಿಕಾರ ಗದ್ದುಗೆ
ಬಿಹಾರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಸ್ಥಳೀಯ ಪಕ್ಷದೊಂದಿಗಿನ ನಮ್ಮ ಮೈತ್ರಿ ಪರಿಣಾಮ ಅಧಿಕಾರ ಗದ್ದುಗೆ ಏರಿದ್ದೇವೆ.
ಸಂಘಟನೆಗೆ ಸಂಬಂಧಿಸಿದಂತೆ ಯಾವುದೇ ಸಲಹೆ, ಸೂಚನೆ ನೀಡಲು ಮುಖಂಡರು ಸ್ವತಂತ್ರರು, ಮುಂದಿನ ಎರಡು ವರ್ಷ ವಿಶ್ರಮಿಸದೆ, ಪಕ್ಷ ಸಂಘಟನೆ ಮತ್ತು ಸಣ್ಣ ಹಾಗೂ ಅತಿಸಣ್ಣ ಸಮುದಾಯ ಸೇರಿದಂತೆ ಎಲ್ಲ ವರ್ಗಗಳನ್ನು ಪಕ್ಷದ ಪರವಾಗಿ ಒಗ್ಗೂಡಿಸುವಲ್ಲಿ ಮುಂದಾಗಿ ಎಂದು ಕರೆ ನೀಡಲಿದ್ದಾರೆ.


