ಭೂಸ್ವಾಧೀನಕ್ಕೆ ಸಂಬಂಧಿಸಿದ ಸಂಪೂರ್ಣ ವಿವರ ಜನತೆ ಮುಂದಿಡುವೆ
ಬೆಂಗಳೂರು:ಬಿಡದಿ ಟೌನ್ಶಿಪ್ ನಿರ್ಮಾಣ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಹೆಸರಿನಲ್ಲಿ ರೈತರ ಭೂಸ್ವಾಧೀನಕ್ಕೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ರಾಜ್ಯದ ಜನತೆ ಮುಂದಿಡುವುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಂದಿಲ್ಲಿ ಸರ್ಕಾರವನ್ನು ಎಚ್ಚರಿಸಿದ್ದಾರೆ.
ನಗರದ ಹೊರವಲಯಗಳಲ್ಲಿ ರೈತರು ಮತ್ತು ಬಡವರ ಅತ್ಯಂತ ಬೆಲೆ ಬಾಳುವ ಭೂಮಿಯನ್ನು ವಶ ಪಡಿಸಿಕೊಂಡು ನುಂಗುವ ಪ್ರಯತ್ನ ನಡೆಯುತ್ತಿದೆ.
ಮೇ 20ರಂದು ದಾಖಲೆ ಬಹಿರಂಗ
ಸರ್ಕಾರ ತಕ್ಷಣವೇ ಎಚ್ಚೆತ್ತು ಕ್ರಮ ಕೈಗೊಳ್ಳದಿದ್ದರೆ, ಮೇ 20ರಂದು ದಾಖಲೆಗಳ ಸಮೇತ ಬಹಿರಂಗಪಡಿಸಿ ಹೋರಾಟಕ್ಕೆ ಇಳಿಯುವುದಾಗಿ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಯಾವುದೇ ಉತ್ತರ ಬಂದಿಲ್ಲ.
ಅವರು ರಾಜಕೀಯ ಒತ್ತಡದಲ್ಲಿದ್ದಾರೆ, ಆ ಪಕ್ಷದ ಆಂತರಿಕ ವಿಚಾರಗಳಿಗೆ ನಾವು ಹೋಗುವುದಿಲ್ಲ, ರೈತರು ಮತ್ತು ಬಡವರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮತ್ತೊಂದು ಪತ್ರ ಬರೆಯುತ್ತೇನೆ.
ರೈತರಿಗೋಸ್ಕರ ಹೋರಾಟ
ಮೇ 20ರಂದು ನಾನು ಎತ್ತಿರುವ ವಿಚಾರಗಳನ್ನು ಜನರ ಮುಂದಿಟ್ಟು, ರೈತರಿಗೋಸ್ಕರ ಈ ಇಳಿ ವಯಸ್ಸಿನಲ್ಲೂ ಹೋರಾಟ ನಡೆಸುವುದಾಗಿ ತಿಳಿಸಿದರು.
ಭೂಮಿ ಬೆಲೆ ಹೆಚ್ಚಿಸಿ ಜಾಗ ಲಪಟಾಯಿಸಲು ಸರ್ಕಾರದ ಮಹಾನುಭಾವರೊಬ್ಬರು ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಪರಿವರ್ತಿಸಿದರು.
ಬೆಂಗಳೂರು ನಗರವನ್ನು ಐದು ಪಾಲಿಕೆಗಳಾಗಿ ವಿಂಗಡಿಸಿದರು, ಅಭಿವೃದ್ಧಿ ಹೆಸರಿನಲ್ಲಿ ವಿವಿಧ ಯೋಜನೆಗಳನ್ನು ಮುಂದಿಟ್ಟುಕೊಂಡು ರೈತರ ಮತ್ತು ಬಡವರ ಭೂಮಿ ಕಬಳಿಸುತ್ತಿದ್ದಾರೆ.
ಈ ಹಿಂದೆ ನ್ಯಾಯ ಕೊಡಿಸಿದ್ದೇನೆ
ರೈತರ ಭೂಮಿ ಕೊಳ್ಳೆ ಹೊಡೆಯಲು ಬಿಡುವುದಿಲ್ಲ, ಈ ಹಿಂದೆ ದೇವರಾಜ ಅರಸು ಕಾಲದಿಂದ ಬಿ.ಎಸ್.ಯಡಿಯೂರಪ್ಪ ಆಡಳಿತದವರೆಗೆ ಹೋರಾಟ ಮತ್ತು ಧರಣಿ ನಡೆಸಿ ನ್ಯಾಯ ಕೊಡಿಸಿದ್ದೇನೆ.
ನನ್ನ ಬಗ್ಗೆ ಸಿದ್ದರಾಮಯ್ಯ ಅವರಿಗೂ ತಿಳಿದಿದೆ, ಆದರೂ, ಅವರು ನನ್ನ ಮನವಿಗೆ ಸ್ಪಂದನೆ ಮಾಡಿಲ್ಲ.
ಮತ್ತೊಂದು ಪತ್ರದ ಜೊತೆಗೆ ಮಹಾನುಭಾವರು ಮಾಡಿರುವ ಬಡವರ ಭೂಮಿ ಲೂಟಿ ಬಗ್ಗೆ ಮಾಹಿತಿ ನೀಡಿ ಅಂದೇ ಹೋರಾಟದ ಮುಂದಿನ ತೀರ್ಮಾನ ಮಾಡುವುದಾಗಿ ತಿಳಿಸಿದರು.


