ಬೆಂಗಳೂರು:ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ತೆರವಾಗಲಿರುವ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ವೇಳಾ ಪಟ್ಟಿ ಪ್ರಕಟಿಸಿದೆ.
ದೇವೇಗೌಡ ಹಾಗೂ ಖರ್ಗೆ ಅವರಲ್ಲದೆ, ಬಿಜೆಪಿಯ ಈರಣ್ಣ ಕಡಾಡಿ, ಕೆ.ನಾರಾಯಣ್ ಅವರ ಸದಸ್ಯತ್ವ ಅವಧಿಯೂ ಜೂನ್ 25ಕ್ಕೆ ಪೂರ್ಣಗೊಳ್ಳಲಿದೆ.
ಜೂನ್ 18ರಂದು ಮತದಾನ
ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ದ್ವೈವಾರ್ಷಿಕ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಜೂನ್ 8 ಕೊನೆಯ ದಿನ, ನಾಮಪತ್ರ ಹಿಂಪಡೆಯಲು ಜೂನ್ 11, ಜೂನ್ 18ರಂದು ಮತದಾನ ನಡೆದು ಅಂದು ಸಂಜೆಯೇ ಫಲಿತಾಂಶ ಪ್ರಕಟಗೊಳ್ಳಲಿದೆ.
ವಿಧಾನಸಭೆಯಲ್ಲಿನ ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್ ಮೂರು ಹಾಗೂ ಬಿಜೆಪಿ ಒಂದು ಸ್ಥಾನದಲ್ಲಿ ಸುಲಭ ಜಯ ಗಳಿಸಬಹುದಾಗಿದೆ.
ಕಳೆದ ಬಾರಿ ಕಾಂಗ್ರೆಸ್ ಬೆಂಬಲದೊಂದಿಗೆ ಜೆಡಿಎಸ್ನಿಂದ ದೇವೇಗೌಡ ರಾಜ್ಯಸಭೆ ಪ್ರವೇಶಿಸಿದ್ದರು, ಆದರೆ, ಈ ಬಾರಿ ಅವರಿಗೆ ರಾಜ್ಯಸಭೆ ಪ್ರವೇಶಿಸುವಷ್ಟು ಸಂಖ್ಯಾಬಲ ರಾಜ್ಯ ವಿಧಾನಸಭೆಯಲ್ಲಿ ಜೆಡಿಎಸ್ಗೆ ಲಭ್ಯವಿಲ್ಲ.
ಮೂರು ಸ್ಥಾನಗಳಿಗೆ ಪೈಪೋಟಿ
ಕಾಂಗ್ರೆಸ್ನ ಮೂರು ಸ್ಥಾನಗಳಿಗಾಗಿ ಪಕ್ಷದಲ್ಲಿ ಭಾರೀ ಪೈಪೋಟಿ ನಡೆದಿದೆ, ಮಲ್ಲಿಕಾರ್ಜುನ ಖರ್ಗೆ ಅವರ ಪುನರ್ ಆಯ್ಕೆಗೆ ಪಕ್ಷ ತೀರ್ಮಾನ ಕೈಗೊಳ್ಳಬಹುದು.
ಉಳಿದಂತೆ ಎರಡು ಸ್ಥಾನಗಳಿಗೆ ಯುವಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಡಿ.ಬಿ.ಶ್ರೀನಿವಾಸ್ (ಹಿಂದುಳಿದ ವರ್ಗ), ವಿಜಯಕುಮಾರ್ (ಒಕ್ಕಲಿಗ, ಮೈಸೂರು) ಇವರ ಹೆಸರುಗಳು ಪ್ರಬಲವಾಗಿ ಕೇಳಿಬರುತ್ತಿದೆ.
ರಾಜ್ಯದ ಜಲವಿವಾದ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ನಲ್ಲಿ ಸಮರ್ಥ ವಾದ ಮಂಡಿಸುತ್ತಿರುವ ಮೋಹನ್ ಕಾತರಕಿ (ಲಿಂಗಾಯತ), ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಹೆಸರುಗಳೂ ಚರ್ಚೆಯಲ್ಲಿವೆ.
ಕರ್ನಾಟಕದಿಂದ ಪವನ್ ಖೇಡ
ಈ ಮಧ್ಯೆ, ಎಐಸಿಸಿ ವಕ್ತಾರ ಪವನ್ ಖೇಡ ಅವರನ್ನು ಕರ್ನಾಟಕದಿಂದ ರಾಜ್ಯಸಭೆ ಕಳುಹಿಸಲು ಪಕ್ಷದ ವರಿಷ್ಠರು ಚಿಂತನೆ ನಡೆಸಿದ್ದಾರೆ.
ವಿಜಯಕುಮಾರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ಬೆಂಬಲವಿದೆ, ಆದರೆ, ಒಕ್ಕಲಿಗ ಕೋಟಾದಲ್ಲಿ ತಾವು ನಿರ್ಧಾರ ಕೈಗೊಂಡು ವರಿಷ್ಠರಿಗೆ ಶಿಫಾರಸು ಮಾಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಂತಿದೆ.
ಇವರಲ್ಲದೆ, ಇನ್ನೂ ಕೆಲವು ಮುಖಂಡರು ತೆರೆಮರೆಯಲ್ಲಿ ರಾಜ್ಯಸಭಾ ಟಿಕೆಟ್ಗಾಗಿ ಕಸರತ್ತು ನಡೆಸಿದ್ದಾರೆ.
ಬಿಜೆಪಿಗೆ ಒಂದು ಸ್ಥಾನ
ಬಿಜೆಪಿಗೆ ಸುಲಭವಾಗಿ ಒಂದು ಸ್ಥಾನ ಗೆಲ್ಲುವ ಅವಕಾಶ ಇದೆಯಾದರೂ ಅದಕ್ಕಾಗಿ ಪೈಪೋಟಿ ಕಂಡುಬರುತ್ತಿಲ್ಲ.
ಆದರೆ, ಪಕ್ಷದ ರಾಜ್ಯ ಘಟಕ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೆಸರನ್ನು ವರಿಷ್ಠರಿಗೆ ಶಿಫಾರಸು ಮಾಡಿದೆ.
ಬಿಜೆಪಿಯ ಒಂದು ಸ್ಥಾನ ಜೆಡಿಎಸ್ನ ದೇವೇಗೌಡರಿಗೆ ಬಿಟ್ಟುಕೊಡಬಹುದೆಂಬ ಮಾತುಗಳು ಕೇಳಿಬರುತ್ತಿವೆ.
ಪ್ರಧಾನಿ ನರೇಂದ್ರ ಮೋದಿ ಕೈಗೊಳ್ಳುವ ನಿರ್ಧಾರದ ಮೇಲೆ ಬಿಜೆಪಿ ಅಭ್ಯರ್ಥಿ ಆಯ್ಕೆ ನಡೆಯಲಿದೆ.


