ಬೆಂಗಳೂರು:ಕರ್ನಾಟಕ ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆ ಗೊಂದಲ ತಾರಕಕ್ಕೇರಿರುವ ಬೆನ್ನಲ್ಲೇ ಬಿಜೆಪಿ ಮುಂಬರುವ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ರಣಕಹಳೆ ಊದಿದೆ.
ಕಳೆದ ಎರಡು ತಿಂಗಳಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಹಾಗೂ ಕೇಂದ್ರ ಬಿಜೆಪಿಯ ವಿವಿಧ ವಿಭಾಗಗಳ ಮುಖಂಡರು ಕರ್ನಾಟಕದ ವಿಧಾನಸಭಾ ಚುನಾವಣೆಗೆ ಅಖಾಡ ಸಿದ್ಧ ಮಾಡುತ್ತಿದ್ದಾರೆ.
ನಿತಿನ್ ನಬೀನ್ ರಾಜ್ಯ ಪ್ರವಾಸ
ಇದರ ಬೆನ್ನಲ್ಲೇ ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ರಾಜ್ಯಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ.
ಬಿಹಾರ, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಳಲ್ಲಿ ಜಯಭೇರಿ ಬಾರಿಸಿದ ಬಿಜೆಪಿ, ಇದೀಗ 2028ರಲ್ಲಿ ಕರ್ನಾಟಕ ಚುನಾವಣೆಯತ್ತ ಮುಖ ಮಾಡಿದೆ.
ಕಾಂಗ್ರೆಸ್ನ ಆಂತರಿಕ ಕಚ್ಚಾಟವನ್ನೇ ಬಂಡವಾಳ ಮಾಡಿಕೊಂಡು, ತೆರೆಮರೆಯಲ್ಲಿ ಪಕ್ಷ ಸಂಘಟನೆಗೆ ದೆಹಲಿ ಬಿಜೆಪಿ ವರಿಷ್ಠರು ಮುಂದಾಗಿದ್ದಾರೆ.
ಚುನಾವಣಾ ಅಖಾಡಕ್ಕೆ ಭೂಮಿಕೆ
ನಬೀನ್ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ರಾಜ್ಯ ಭೇಟಿ ಇದಾಗಿದ್ದು ಈ ಸಂದರ್ಭದಲ್ಲೇ ಚುನಾವಣಾ ಅಖಾಡಕ್ಕೆ ಭೂಮಿಕೆ ಸಿದ್ಧಗೊಳಿಸುತ್ತಿದ್ದಾರೆ.
ನಾಳೆ ಭಾನುವಾರ, ಇಡೀ ದಿನ ಪಕ್ಷದ ಎಲ್ಲಾ ಹಂತದ ಕಾರ್ಯಕರ್ತರು, ಮುಖಂಡರು ಮತ್ತು ಜನಪ್ರತಿನಿಧಿಗಳ ಜೊತೆ ನಿರಂತರ ಸಭೆ ನಡೆಸಲಿದ್ದಾರೆ.
ಪಕ್ಷದ ಪ್ರಧಾನ ಕಾರ್ಯಾಲಯದಲ್ಲಿ ಸಂಸದರು, ಶಾಸಕರ ಜೊತೆ ಎರಡು ಗಂಟೆಗಳ ಕಾಲ ಸಮಾಲೋಚನೆ ನಡೆಸಲಿದ್ದಾರೆ.
ಚುನಾವಣೆಗೆ ಸಿದ್ಧರಾಗಿ
ಈ ಸಂದರ್ಭದಲ್ಲಿ ರಾಜ್ಯದಲ್ಲಿನ ರಾಜಕೀಯ ಸ್ಥಿತಿಗತಿ ಅವಲೋಕನದ ಜೊತೆಗೆ, ಬರುವ ೨೦೨೮ಕ್ಕೆ ಅಥವಾ ಅದಕ್ಕೂ ಮೊದಲು ಮಧ್ಯಂತರ ಚುನಾವಣೆ ಎದುರಾದರೆ ಸಿದ್ಧರಾಗಿರುವಂತೆ ಸೂಚಿಸಲಿದ್ದಾರೆ.
ಸ್ಥಳೀಯ ಸರ್ಕಾರ ಮತ್ತು ರಾಜಕೀಯಕ್ಕೆ ಸಂಬಂಧಿಸಿದಂತೆ ಪಕ್ಷದ ಜನಪ್ರತಿನಿಧಿಗಳಿಂದಲೂ ಮಾಹಿತಿ ಪಡೆಯುವುದಲ್ಲದೆ, ಮುಂದಿನ ಚುನಾವಣೆ ಬಗ್ಗೆಯೂ ವಿವರ ಪಡೆಯಲಿದ್ದಾರೆ.
ಕೋರ್ ಕಮಿಟಿ ಸಭೆ
ನಂತರ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿ, ಕೆಲವು ಪ್ರಮುಖ ವಿಷಯಗಳ ಕುರಿತು ಚರ್ಚಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಭೆ ನಂತರ ಬೆಂಗಳೂರು ಉತ್ತರ ಜಿಲ್ಲೆಯಲ್ಲಿ ನಡೆಯಲಿರುವ ಪ್ರಶಿಕ್ಷಣ ಶಿಬಿರದಲ್ಲಿ ಭಾಗವಹಿಸಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ಮಾಡಲಿದ್ದಾರೆ ಎಂದರು.


