ಬೆಂಗಳೂರು:ಮಾಜಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಗೊಂಡಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸರ್ವಾನುಮತದಿಂದ ಶಿವಕುಮಾರ್ ಅವರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಯಿತು.
25ನೇ ಮುಖ್ಯಮಂತ್ರಿ
ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಶಿವಕುಮಾರ್ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಜೂನ್ 3ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
ಎಐಸಿಸಿ ಅದರಲ್ಲೂ ಅಧಿನಾಯಕ ರಾಹುಲ್ ಗಾಂಧಿ ಮಧ್ಯಪ್ರವೇಶದಿಂದ ನಾಯಕತ್ವಕ್ಕೆ ಶಿವಕುಮಾರ್ ಹೊರತುಪಡಿಸಿ ಯಾರದೇ ಸ್ಪರ್ಧೆಗೆ ಅವಕಾಶ ಇರಲಿಲ್ಲ.
ಎಐಸಿಸಿ ವೀಕ್ಷಕರಾಗಿದ್ದ ಪಕ್ಷದ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಪಕ್ಷದ ನಿರ್ಧಾರವನ್ನು ಸಭೆಗೆ ತಿಳಿಸಿದರು.
ಸಿದ್ದರಾಮಯ್ಯ ಪ್ರಸ್ತಾವ
ವರಿಷ್ಠರ ಆದೇಶದಂತೆ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಸರು ಸೂಚಿಸಿ, ಮಾಜಿ ಸಚಿವ ಹಾಗೂ ಹಿರಿಯ ನಾಯಕ ಡಾ.ಜಿ.ಪರಮೇಶ್ವರ್ ಸೇರಿದಂತೆ ಕೆಲವರು ಅನುಮೋದಿಸಿದರು.
ಅನುಮೋದನೆ ಮಾಡುತ್ತಿದ್ದಂತೆ ಇಡೀ ಸಭೆ ಒಕ್ಕೊರಲಿನಿಂದ ಶಿವಕುಮಾರ್ ಅವರಿಗೆ ಬೆಂಬಲ ಸೂಚಿಸುವ ಮೂಲಕ ಸರ್ವಾನುಮತದಿಂದ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಯಿತು.
ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಆಗುತ್ತಿದ್ದಂತೆ ಪಕ್ಷದ ಶಾಸಕರು, ಹಿರಿಯ ಸದಸ್ಯರು ಶಿವಕುಮಾರ್ ಅವರಿಗೆ ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು.
ರಾಜೀನಾಮೆ ಅಂಗೀಕಾರ
ಮೇ 28ರಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು, ಅವರ ರಾಜೀನಾಮೆಯನ್ನು ರಾಜ್ಯಪಾಲರು ಮೇ 29ರಂದು ಅಂಗೀಕರಿಸಿ ಮಂತ್ರಿಮಂಡಲವನ್ನು ವಿಸರ್ಜಿಸಿದರು.
ರಾಜೀನಾಮೆ ಅಂಗೀಕಾರ ಆಗುತ್ತಿದ್ದಂತೆ ಎಐಸಿಸಿ ನಾಯಕರು ಶಿವಕುಮಾರ್ ಹೆಸರನ್ನು ಮುನ್ನೆಲೆಗೆ ತಂದಿಲ್ಲದೆ, ಮೇ 30ಕ್ಕೆ ಶಾಸಕಾಂಗ ಪಕ್ಷದ ಸಭೆಯನ್ನೂ ನಿಗದಿ ಪಡಿಸಿದರು.
ಶಾಸಕಾಂಗ ಸಭೆ ನಿಗದಿಗೂ ಮುನ್ನ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿಕೊಂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಹೊಸ ನಾಯಕನ ಆಯ್ಕೆ ಹಾಗೂ ಹೊಸ ಸರ್ಕಾರ ಕುರಿತು ಸಮಾಲೋಚನೆ ನಡೆಸಿದರು.
ರಾಹುಲ್ ಸಲಹೆ-ಸೂಚನೆ
ಸರ್ಕಾರ ರಚನೆ ಕುರಿತಂತೆ ರಾಹುಲ್ ಗಾಂಧಿ ಉಭಯ ನಾಯಕರಿಗೂ ಕೆಲವು ಸಲಹೆ-ಸೂಚನೆ ನೀಡಿ ಕಳುಹಿಸಿಕೊಟ್ಟರು.
ಅದರಂತೆ, ಪ್ರಮಾಣವಚನ ಸಮಾರಂಭ ಆಡಂಬರವಿಲ್ಲದೆ ಸರಳವಾಗಿರುತ್ತದೆ ಹಾಗೂ ಮಂತ್ರಿಮಂಡಲ ಸ್ವರೂಪ ಕುರಿತು ಬುಧವಾರದವರೆಗೂ ಕಾಯಬೇಕಿದೆ.


