ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಹಾಗೂ ನನ್ನ ಸಂಬಂಧ ರಾಜ್ಯಸಭಾ ಸ್ಥಾನಕ್ಕೆ ಸೀಮಿತವಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಂದಿಲ್ಲಿ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ರಾಜಕೀಯಕ್ಕೆ ಬಂದು 70 ವರ್ಷ ಕಳೆದಿದೆ, ಜನಪರ ಸೇವೆ ಮಾಡಿದ್ದೇನೆ, ರಾಜ್ಯಸಭಾ ಸದಸ್ಯ ಆಗಬೇಕು ಎಂಬ ವ್ಯಾಮೋಹ ಇದ್ದಿದ್ದರೆ ಕೇಂದ್ರದ ಮುಖಂಡರನ್ನು ಭೇಟಿ ಮಾಡುತ್ತಿದ್ದೆ.
ಪ್ರಧಾನಿ ಪತ್ರ
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಬರೆದಿದ್ದ ಪ್ರಧಾನಿ ಮೋದಿ ಬಗೆಗಿನ ಪುಸ್ತಕವನ್ನು ನೀವೇ ಬಿಡುಗಡೆ ಮಾಡಿ ಎಂಬುದಾಗಿ ನನಗೆ ಪ್ರಧಾನಿಯೇ ಪತ್ರ ಬರೆದಿದ್ದರು.
ಅವರ ಸಲಹೆಯಂತೆ ದೆಹಲಿಯಲ್ಲಿ ಕಳೆದ ತಿಂಗಳ ಮೂರನೇ ವಾರ ಪುಸ್ತಕ ಬಿಡುಗಡೆ ಮಾಡಿದೆ, ಆ ಸಮಾರಂಭಕ್ಕೆ ಕೇಂದ್ರದ ಪ್ರಮುಖ ಸಚಿವರುಗಳು ಹಾಗೂ ಬಿಜೆಪಿ ರಾಜ್ಯದ ಮುಖ್ಯಮಂತ್ರಿಗಳೂ ಆಗಮಿಸಿದ್ದರು.
ಚೌಹಾಣ್ ಅವರು ನನ್ನ ಕುರಿತು ಒಳ್ಳೆಯ ಮಾತುಗಳನ್ನು ಆಡಿದರು, ಕಾರ್ಯಕ್ರಮ ಮುಗಿದ ನಂತರ ನಾನು ನೇರವಾಗಿ ಬೆಂಗಳೂರಿಗೆ ಬಂದೆ, ಮತ್ತೆ ದೆಹಲಿ ಕಡೆ ಹೋಗಲಿಲ್ಲ.
ಸುದ್ದಿಗಳ ವೈಭವೀಕರಣ
ಆದರೆ, ಮಾಧ್ಯಮದವರು ಏಳೆಂಟು ಮಂದಿ ಹೆಸರಿನ ಜೊತೆ ನನ್ನನ್ನೂ ಸೇರಿಸಿ, ತಮ್ಮ ಸುದ್ದಿಗಳನ್ನು ವೈಭವೀಕರಿಸಿಕೊಂಡರು, ’ಬಹಳ ಸಂತೋಷ’ ಎಂದು ವ್ಯಂಗ್ಯಭರಿತ ಧ್ವನಿಯಲ್ಲಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ ಮತ್ತು ತಮ್ಮ ನಡುವಿನ ಸೌಹಾರ್ದ ಸಂಬಂಧ ಬಿಚ್ಚಿಟ್ಟ ಅವರು, ರಾಜ್ಯದ ಅಭಿವೃದ್ಧಿ ವಿಷಯಗಳಿದ್ದರೆ, ಮುಕ್ತವಾಗಿ ಪ್ರಧಾನಿ ಅವರನ್ನೇ ಭೇಟಿ ಮಾಡುತ್ತೇನೆ, ಇಲ್ಲವೇ ಪತ್ರ ಬರೆಯುತ್ತೇನೆ.
ರಾಜ್ಯಸಭಾ ಸದಸ್ಯತ್ವ ಇಟ್ಟುಕೊಂಡೇ ರಾಜ್ಯದ ಕೆಲಸಗಳನ್ನು ಮಾಡಬೇಕಿಲ್ಲ, ನನ್ನ ಮತ್ತು ಅವರ ನಡುವಿನ ಸಂಬಂಧ ಅಷ್ಟರ ಮಟ್ಟಿಗೆ ಉತ್ತಮವಾಗಿದೆ ಎಂದರು.
ಕುಮಾರಸ್ವಾಮಿ ಹೇಳಿಕೆಗೆ ಸ್ವಾಗತ
ವಿಧಾನಸಭೆಯಲ್ಲಿ ನಾವು 18 ಸಂಖ್ಯಾಬಲ ಇಟ್ಟುಕೊಂಡು ರಾಜ್ಯಸಭಾ ಅಭ್ಯರ್ಥಿ ಕಣಕ್ಕಿಳಿಸುವುದು ಎಷ್ಟರ ಮಟ್ಟಿಗೆ ಸರಿ, ಬಿಜೆಪಿ ಸಂಖ್ಯಾಬಲ 64 ಇದೆ, ಸುಲಭವಾಗಿ ಒಬ್ಬರನ್ನು ರಾಜ್ಯಸಭೆಗೆ ಕಳುಹಿಸಹುದು ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಯನ್ನು ನಾನು ಸ್ವಾಗತಿಸಿದ್ದೆ.
ಆದರೆ, ಮಾಧ್ಯಮದವರು ಅನಗತ್ಯವಾಗಿ ವಿಷಯ ಹುಟ್ಟುಹಾಕಿ, ಕಾಂಗ್ರೆಸ್ನವರ ಬಾಯಿಗೆ ಆಹಾರ ಮಾಡಿ ನನ್ನ ಮತ್ತು ಪ್ರಧಾನಿ ಮೋದಿ ನಡುವಿನ ಸಂಬಂಧ ಹದಗೆಡಿಸುವ ಯತ್ನ ನಡೆಯಲಿಲ್ಲ.
ಅಂತಿಮ ದಿನದವರೆಗೂ ಪ್ರಧಾನಿ ಜೊತೆಗಿನ ಸಂಬಂಧವನ್ನು ಈಗಿನಂತೆ ಉಳಿಸಿಕೊಳ್ಳುತ್ತೇನೆ ಎನ್ನುವ ಮೂಲಕ ಜೆಡಿಎಸ್ ಮುಂದೆಯೂ ಎನ್ಡಿಎ ಕೂಟದ ಮಿತ್ರ ಪಕ್ಷವಾಗಿರಲಿದೆ ಎಂಬುದನ್ನು ದೇವೇಗೌಡ ಸ್ಪಷ್ಟಪಡಿಸಿದರು.


