ಬೆಂಗಳೂರು:ವಿಧಾನಸಭೆಯಿಂದ ವಿಧಾನ ಪರಿಷತ್ನ 7 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ 5ನೇ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಇಡೀ ಸರ್ಕಾರವೇ ರೆಸಾರ್ಟ್ಗೆ ಶಿಫ್ಟಾಗಿದೆ.
ವಿಧಾನ ಪರಿಷತ್ನ ಚುನಾವಣೆ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ಗೆ ಸವಾಲಾಗಿದ್ದು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಮೂರೂ ಪಕ್ಷಗಳು ರಣತಂತ್ರ ರೂಪಿಸಿವೆ.
ಸದನದ ಸಂಖ್ಯಾಬಲ
ಸದನದ ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್ 4, ಬಿಜೆಪಿ 2 ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದಾಗಿದೆ.
ಉಳಿದ ಒಂದು ಸ್ಥಾನಕ್ಕಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ಸಂಖ್ಯಾಬಲದ ಕೊರತೆಯಿದ್ದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಹೆಚ್ಚುವರಿ ಸ್ಥಾನಕ್ಕಾಗಿ ರಾಜಕೀಯ ರಣತಂತ್ರ ರೂಪಿಸಿವೆ.
ಪಕ್ಷದಲ್ಲಿನ ಅಸಮಾಧಾನಿತರಿಂದ ಅಡ್ಡ ಮತದಾನ ಆಗದಂತೆ ಮುನ್ನೆಚ್ಚರಿಕೆಯಾಗಿ ಪಕ್ಷದ ಸಚಿವರು ಮತ್ತು ಶಾಸಕರನ್ನು ಬಿಡದಿ ಸಮೀಪದ ರೆಸಾರ್ಟ್ಗೆ ಶಿಫ್ಟ್ ಮಾಡಲಾಗಿದೆ.
ನೇರವಾಗಿ ವಿಧಾನಸೌಧಕ್ಕೆ
ಸೋಮವಾರ ರಾತ್ರಿಯಿಂದಲೇ ಶಾಸಕರು ರೆಸಾರ್ಟ್ ತಲುಪಿದ್ದು, ಮತದಾನ ದಿನದಂದು ನೇರವಾಗಿ ವಿಧಾನಸೌಧಕ್ಕೆ ಆಗಮಿಸಿ ಮತಚಲಾಯಿಸಲಿದ್ದಾರೆ.
ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆದೇಶದಂತೆ ಮುಖ್ಯಮಂತ್ರಿ ಅವರು, ಶಾಸಕರನ್ನು ಒಂದೆಡೆ ಸೇರಿಸುವುದಲ್ಲದೆ, ಅವರಿಗೆ ಯಾರದೇ ಸಂಪರ್ಕ ಲಭ್ಯವಾಗದಂತೆ ಎಚ್ಚರ ವಹಿಸಿದ್ದಾರೆ.
ಸದ್ಯ ವಿಧಾನಸಭೆಯಲ್ಲಿ 222 ಸದಸ್ಯ ಬಲವಿದ್ದು, ಒಬ್ಬ ಅಭ್ಯರ್ಥಿ ಗೆಲುವಿಗೆ ಕನಿಷ್ಠ 28 ಮೊದಲ ಪ್ರಾಶಸ್ತ್ಯ ಮತಗಳ ಅಗತ್ಯವಿದೆ.
ಹೆಚ್ಚುವರಿ ಮತಗಳ ಅಗತ್ಯ
ಈ ಲೆಕ್ಕಾಚಾರದ ಅನ್ವಯ ಕಾಂಗ್ರೆಸ್ 4 ಮತ್ತು ಬಿಜೆಪಿ 2 ಸ್ಥಾನಗಳನ್ನು ಸುಲಭವಾಗಿ ಗೆಲ್ಲಲಿದ್ದು, ಉಳಿದ ಒಂದು ಸ್ಥಾನ ಗೆಲ್ಲಲು ಜೆಡಿಎಸ್ ಅಭ್ಯರ್ಥಿ ಕಣದಲ್ಲಿದ್ದು, ಗೆಲುವಿಗೆ ತನ್ನ 18 ಶಾಸಕರ ಮತಗಳ ಜೊತೆಗೆ ಬಿಜೆಪಿ ಮತ್ತು ಕಾಂಗ್ರೆಸ್ನ ಹೆಚ್ಚುವರಿ ಮತಗಳ ಅಗತ್ಯವಿದೆ.
ಬಿಜೆಪಿಯ ಹೆಚ್ಚುವರಿ ಮತಗಳು, ಪಕ್ಷೇತರ ಹಾಗೂ ಕಾಂಗ್ರೆಸ್ನ ಅತೃಪ್ತ ಶಾಸಕರ ಮತ ಗಳಿಸುವ ಲೆಕ್ಕಾಚಾರದೊಂದಿಗೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
ಪರಿಷತ್ನ 7 ಸ್ಥಾನಗಳಿಗೆ 8 ಅಭ್ಯರ್ಥಿಗಳು ಕಣದಲ್ಲಿದ್ದು ಅಖಾಡ ಕುತೂಹಲ ಮೂಡಿಸಿದೆ.
ಮಿತ್ರ ಪಕ್ಷ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಅವರಿಗೆ ಬಿಜೆಪಿ ತನ್ನ ಹೆಚ್ಚುವರಿ ಮತಗಳನ್ನು ವರ್ಗಾಯಿಸಲು ತೀರ್ಮಾನಿಸಿ ತಂತ್ರ ಹೆಣೆದಿರುವುದು ಆಡಳಿತಾರೂಢ ಕಾಂಗ್ರೆಸ್ಗೆ ಸವಾಲಾಗಿ ಪರಿಣಮಿಸಿದೆ.
ಸದಸ್ಯತ್ವದಿಂದ ಉಚ್ಛಾಟನೆ
ಶಿಸ್ತು ಉಲ್ಲಂಘನೆ ಆರೋಪದ ಮೇಲೆ ಬಿಜೆಪಿಯಿಂದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರಬೈಲು ಶಿವರಾಂ ಹೆಬ್ಬಾರ್ ಮತ್ತು ಎಸ್.ಟಿ.ಸೋಮಶೇಖರ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಅವಧಿಗೆ ಉಚ್ಛಾಟನೆ ಮಾಡಲಾಗಿದೆ.
ಈ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್, ಈಗಾಗಲೇ ಶಿವರಾಂ ಹೆಬ್ಬಾರ್ ಮತ್ತು ಸೋಮಶೇಖರ್ ಜೊತೆ ನಿರಂತರ ಸಂಪರ್ಕದಲ್ಲಿದೆ.
ಉಚ್ಛಾಟಿತರಿಗೆ ಬಿಜೆಪಿ ವಿಪ್ ನೀಡಲು ಸಾಧ್ಯವಿಲ್ಲದ ತಾಂತ್ರಿಕ ಅಂಶದ ಆಧಾರದ ಮೇಲೆ ಇವರ ಮತ ಗಳಿಸಲು ಶಿವಕುಮಾರ್ ಪ್ರಯತ್ನಕ್ಕೆ ತಿರುಗೇಟು ನೀಡಲು ಬಿಜೆಪಿ ಮುಂದಾಗಿದೆ.
ಸೂಚಿಸಿದ ಅಭ್ಯರ್ಥಿಗೆ ಮತ
ಬಿಜೆಪಿ ಚಿನ್ಹೆ ಮತ್ತು ಬಿ ಫಾರಂ ಮೇಲೆ ಚುನಾವಣೆ ಗೆದ್ದಿರುವ ಮೂವರ ಉಚ್ಚಾಟನೆ ಆದೇಶ ಹಿಂಪಡೆದು ಪರಿಷತ್ ಚುನಾವಣೆಯಲ್ಲಿ ತಾವು ಸೂಚಿಸಿದ ಅಭ್ಯರ್ಥಿಗೆ ಮತ ಹಾಕುವಂತೆ ವಿಪ್ ನೀಡಲು ಚಿಂತನೆ ನಡೆಸಿದೆ.
ಮಿತ್ರ ಪಕ್ಷ ಜೆಡಿಎಸ್ ಅಭ್ಯರ್ಥಿಗೆ ಈ ಮತಗಳನ್ನು ಕೊಡಿಸುವ ತಂತ್ರಕ್ಕೆ ಶಿವಕುಮಾರ್ ಪ್ರತಿತಂತ್ರ ಹೆಣೆದಿದ್ದು ಚುನಾವಣಾ ಅಖಾಡ ಕುತೂಹಲ ಮೂಡಿಸಿದೆ.
ಚುನಾವಣಾ ಅಖಾಡದಲ್ಲಿ ಕಾಂಗ್ರೆಸ್ನಿಂದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ತಿಪ್ಪಣ್ಣ ಕಮಕನೂರು, ವಿ.ಕೆ.ಮೋಹನ್, ಶಿವಣ್ಣ ಮಳವಳ್ಳಿ ಮತ್ತು ವಿನಯ್ ಕಾರ್ತಿಕ್, ಬಿಜೆಪಿಯಿಂದ ಲಿಂಗರಾಜ ಪಾಟೀಲ್, ರಘು ಕೌಟಿಲ್ಯ ಮತ್ತು ಜೆಡಿಎಸ್ನಿಂದ ಗೋವಿಂದರಾಜು ಇದ್ದಾರೆ.


