ಬೆಂಗಳೂರು:ಕಾವೇರಿ ಜಲ ವಿವಾದ ಹಾಗೂ ಮೇಕೆದಾಟು ಯೋಜನೆ ಕುರಿತು ದ್ವಿಪಕ್ಷೀಯ ಮಾತುಕತೆಗೆ ಕರ್ನಾಟಕಕ್ಕೆ ಆಗಮಿಸುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರಿಗೆ ಅದ್ದೂರಿ ಸ್ವಾಗತ ನೀಡಲು ಕರ್ನಾಟಕ ಸರ್ಕಾರ ಸಿದ್ಧತೆ ನಡೆಸಿದೆ.
ವಿಜಯ್, ಆಗಸ್ಟ್ 3ರಂದು ಒಂದು ದಿನದ ರಾಜ್ಯ ಪ್ರವಾಸ ಕೈಗೊಂಡು ವಿಧಾನಸೌಧದಲ್ಲಿ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಜಲ ವಿವಾದ ಪರಿಹಾರ ಕುರಿತಂತೆ ಮಾತುಕತೆ ನಡೆಸಲಿದ್ದಾರೆ.
ವಿಧಾನಸೌಧ ಶೃಂಗಾರ
ಈ ಸಭೆಗಾಗಿ ಇಡೀ ವಿಧಾನಸೌಧದ ಡಿಪಿಆರ್ ಮತ್ತು ಲೋಕೋಪಯೋಗಿ ಇಲಾಖೆ ಸ್ವಚ್ಛತೆ ಮತ್ತು ಶೃಂಗಾರ ಕಾಮಗಾರಿ ಕೈಗೊಂಡಿದೆ.
ವಿಧಾನಸೌಧದ 3ನೇ ಮಹಡಿಯಲ್ಲಿನ ಸಮ್ಮೇಳನ ಸಭಾಂಗಣವನ್ನೇ ಅದ್ದೂರಿಯಾಗಿ ಶೃಂಗರಿಸಲಾಗುತ್ತಿದೆ.
ಉಭಯ ರಾಜ್ಯಗಳ ಇಬ್ಬರು ಮುಖ್ಯಮಂತ್ರಿಗಳು, ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳೂ ಸೇರಿದಂತೆ 25 ಮಂದಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರವೇಶ ನಿಷಿದ್ಧ
ಇವರನ್ನು ಹೊರತುಪಡಿಸಿ ಉಳಿದವರಿಗೆ ಅಂದು ವಿಧಾನಸೌಧ ಪ್ರವೇಶ ನಿಷಿದ್ಧ, ಸಭೆಗಾಗಿ ದುಂಡುಮೇಜಿನ ಮಾದರಿಯಲ್ಲಿ ಆಸನ ವ್ಯವಸ್ಥೆ ಮಾಡಲಾಗುತ್ತಿದೆ.
ವಿಧಾನಸೌಧದ ಪೂರ್ವ ದ್ವಾರದಿಂದ ವಿಜಯ್ ಪ್ರವೇಶಕ್ಕೆ ಸಮ್ಮೇಳನ ಸಭಾಂಗಣದವರೆಗೆ ಸಂಪೂರ್ಣ ಕೆಂಪು ಹಾಸುಗಂಬಳಿಯಿಂದ ಶೃಂಗರಿಸಲಾಗುತ್ತಿದೆ.
ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಕುಳಿತುಕೊಳ್ಳುವ ಆಸನದ ಹಿಂಬದಿಯಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ಅಧಿಕೃತ ಲಾಂಛನ ಒಳಗೊಂಡ ಧ್ವಜಗಳನ್ನು ಅಳವಡಿಸಲಾಗುತ್ತಿದೆ.

ಮೇಕೆದಾಟು ಯೋಜನೆ
ಕಾವೇರಿ ವಿವಾದಕ್ಕಿಂತ ಮಿಗಿಲಾಗಿ ಮೇಕೆದಾಟು ಯೋಜನೆ ಕುರಿತು ವಿಜಯ್ ನಮ್ಮ ಮುಖ್ಯಮಂತ್ರಿ ಅವರನ್ನು ಸಂಪರ್ಕಿಸಿ ಮಾತುಕತೆಗೆ ಬರುವುದಾಗಿ ತಿಳಿಸಿದ್ದರು.
ತದನಂತರ ತಮಿಳುನಾಡು ಸರ್ಕಾರದ ಮುಖ್ಯಕಾರ್ಯದರ್ಶಿ ಅವರು, ಕರ್ನಾಟಕದ ಮುಖ್ಯಕಾರ್ಯದರ್ಶಿ ಅವರಿಗೆ ಪತ್ರ ಬರೆದು, ತಮ್ಮ ರಾಜ್ಯದ ಮುಖ್ಯಮಂತ್ರಿ, ಸಚಿವರು ಹಾಗೂ ಅಧಿಕಾರಿಗಳ ತಂಡ ಮಾತುಕತೆಗೆ ಬರುತ್ತಿರುವುದಾಗಿ ತಿಳಿಸಿದ್ದರು.
ವಿಜಯ್ ಕಾರ್ಯಾಲಯದ ಸಂದೇಶ ಬರುತ್ತಿದ್ದಂತೆ ಸ್ವತಃ ಮುಖ್ಯಮಂತ್ರಿ ಮೇಲ್ವಿಚಾರಣೆ ವಹಿಸಿಕೊಂಡು, ಸಮ್ಮೇಳನ ಸಭಾಂಗಣವನ್ನು ಬೇರೆ ಯಾವ ಕಾರ್ಯಕ್ರಮಕ್ಕೂ ಬಳಸದಂತೆ ಹಾಗೂ ಸಭಾಂಗಣವನ್ನು ಅದ್ದೂರಿಯಾಗಿ ಶೃಂಗರಿಸಲು ಸೂಚಿಸಿದರು.
ಗೌರವಯುತ ಸ್ವಾಗತ
ಅಲ್ಲದೆ, ಅತಿಥಿಗಳನ್ನು ಅತ್ಯಂತ ಗೌರವಯುತವಾಗಿ ಬರಮಾಡಿಕೊಳ್ಳಲು ಅಗತ್ಯ ಸಿದ್ಧತೆ ಮಾಡುವಂತೆ ಮುಖ್ಯಕಾರ್ಯದರ್ಶಿ ಅವರಿಗೆ ಮುಖ್ಯಮಂತ್ರಿ ಆದೇಶಿಸಿದರು.
ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಈ ಹಿಂದೆ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಎರಡು ಬಾರಿ ಹಾಗೂ ಜಯಲಲಿತಾ ಒಂದು ಬಾರಿ ಕರ್ನಾಟಕಕ್ಕೆ ಆಗಮಿಸಿ ಬೆಂಗಳೂರಿನಲ್ಲಿ ರಾಜ್ಯದ ಅಂದಿನ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದರು.

ದ್ವಿಪಕ್ಷೀಯ ಮಾತುಕತೆ
ಕರುಣಾನಿಧಿ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡರೆ, ಜಯಲಲಿತಾ ಶಕ್ತಿಸೌಧಕ್ಕೆ ಬರಲು ನಿರಾಕರಿಸಿದ ಹಿನ್ನೆಲೆಯಲ್ಲಿ ಎಚ್ಎಎಲ್ ವಿಮಾನ ನಿಲ್ದಾಣ ಸಮೀಪದ ಪಂಚತಾರಾ ಹೋಟೆಲ್ ಒಂದರಲ್ಲಿ ಸಿದ್ಧಪಡಿಸಿದ್ದ ವೇದಿಕೆಗೆ ಆಗಮಿಸಿ ದ್ವಿಪಕ್ಷೀಯ ಮಾತುಕತೆಯಲ್ಲಿ ಪಾಲ್ಗೊಂಡಿದ್ದರು.
ಲೀಲಾ ಪ್ಯಾಲೇಸ್ನಲ್ಲಿ ನಡೆದ ಈ ಸಭೆಗೆ ಜಯಲಲಿತಾ ತಾವು ಕುಳಿತುಕೊಳ್ಳುವ ಮುಖ್ಯಮಂತ್ರಿ ಆಸನವನ್ನೇ ವಿಶೇಷ ವಿಮಾನದಲ್ಲಿ ತರಿಸಿಕೊಂಡಿದ್ದನ್ನು ಸ್ಮರಿಸಬಹುದು.


