ಬೆಂಗಳೂರು:ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ ತೇರ್ಗಡೆ ಆದವರಿಗೆ ಮಾತ್ರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂದು ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಗೆ ಹೋಗಿ ಕೇಳಿದ ತಕ್ಷಣ ಸಚಿವರಾಗಲು ಸಾಧ್ಯವಿಲ್ಲ, ಪಕ್ಷ ಮತ್ತು ಸರ್ಕಾರಕ್ಕೆ ಅನುಕೂಲ ಆಗುವಂತಹ ವ್ಯಕ್ತಿಗಳಿಗೆ ಮಾತ್ರ ಮಂತ್ರಿ ಸ್ಥಾನ ದೊರೆಯಲಿದೆ ಎಂದರು.
ದೆಹಲಿ ಪಟ್ಟಿಗೆ ಬದ್ಧರಾಗಿರಬೇಕು
ಕಾಂಗ್ರೆಸ್ನ ದೆಹಲಿ ನಾಯಕರು ಈಗಾಗಲೇ ಆಂತರಿಕ ಸಮೀಕ್ಷೆ ನಡೆಸಿ, ಯಾರಿಗೆ ಅವಕಾಶ ನೀಡಬೇಕೆಂಬ ಪಟ್ಟಿ ಸಿದ್ಧಪಡಿಸಿದ್ದಾರೆ, ಆ ಪಟ್ಟಿಯನ್ನಷ್ಟೇ ರಾಜ್ಯದ ನಾಯಕರಿಗೆ ನೀಡಲಿದ್ದು, ಅದಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು.
ಸರ್ಕಾರ ರಚನೆ ಸಂದರ್ಭದಲ್ಲೇ ನನಗೆ ಅವಕಾಶ ಸಿಗಲಿದೆ ಎಂಬ ವಿಶ್ವಾದಲ್ಲಿದ್ದೆ, ಆದರೆ, ನಿರಾಸೆಯಾಯಿತು.
ಸಂಪುಟ ವಿಸ್ತರಣೆ ವೇಳೆ ನಾನು ಮಂತ್ರಿ ಆಗುತ್ತೇನೆ ಎಂಬ ವಿಶ್ವಾವಿದೆ, ಆದರೆ, ನನ್ನ ವಿರುದ್ಧ ನಮ್ಮ ಸಮಾಜದವರಿಂದಲೇ ದೊಡ್ಡ ಪಿತೂರಿ ನಡೆದಿದೆ.
ತಪ್ಪಾಗಿದ್ದರೆ ಕ್ಷಮೆಯಾಚಿಸುತ್ತೇನೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಾಗಲೀ, ಪಕ್ಷಕ್ಕಾಗಲೀ ದ್ರೋಹ ಬಗೆದಿಲ್ಲ, ಒಂದು ವೇಳೆ ನನ್ನಿಂದ ತಪ್ಪಾಗಿದ್ದರೆ ಕ್ಷಮೆಯಾಚಿಸುತ್ತೇನೆ.
ಈಗಾಗಲೇ ಮುಖ್ಯಮಂತ್ರಿ ಶಿವಕುಮಾರ್, ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಷ್ಟ್ರೀಯ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೊಪಾಲ್ ಬಳಿ ಕ್ಷಮೆಯಾಚಿಸಿದ್ದೇನೆ.
ನನ್ನ ಬೆಳವಣಿಗೆ ಸಹಿಸುತ್ತಿಲ್ಲ
ರಾಜಕೀಯದಲ್ಲಿ ತಮ್ಮ ಸಮುದಾಯದವ ಬೆಳೆಯುತ್ತಿದ್ದಾನೆ ಎಂದರೆ ಸಹಿಸುವುದಿಲ್ಲ, ಇದು ಮುಸ್ಲಿಂ ಸಮುದಾಯದಲ್ಲಿ ಮಾತ್ರವಲ್ಲ ಎಲ್ಲ ಸಮುದಾಯದಲ್ಲೂ ಇದೇ ಕಥೆ.
ಅದರಲ್ಲೂ ಮುಸ್ಲೀಮರಲ್ಲಿ ಇನ್ನೊಬ್ಬ ಬೆಳೆಯುವುದನ್ನು ಸಹಿಸುವುದಿಲ್ಲ, ನನ್ನ ವಿರುದ್ಧ ನಿರಂತರ ಪಿತೂರಿ ನಡೆಯುತ್ತಿದೆ, ಅವರಿಗೆ ಒಳ್ಳೆಯದಾಗಲಿ ಎಂದು ಬಯಸುತ್ತೇನೆ ಎಂದರು.


