ಷಡ್ಯಂತ್ರ ಅರಿಯದಿದ್ದರೆ ಜೀವಮಾನದಲ್ಲೇ ವಿಧಾನಸಭೆ ಪ್ರವೇಶಿಸಲಾಗದು
ಬೆಂಗಳೂರು:ದೆಹಲಿ ಬಿಜೆಪಿ ನಾಯಕರ ರಾಜಕೀಯ ಷಡ್ಯಂತ್ರದಿಂದ ಎಚ್ಚೆತ್ತುಕೊಳ್ಳದಿದ್ದರೆ ಜೀವಮಾನದಲ್ಲೇ ವಿಧಾನಸಭೆ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಶಾಸಕರಿಗೆ ಕಿವಿಮಾತು ಹೇಳಿದ್ದಾರೆ.
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಬಿಡದಿಯ ರೆಸಾರ್ಟ್ ಒಂದರಲ್ಲಿ ಬಿಡಾರ ಹೂಡಿರುವ ಪಕ್ಷದ ಶಾಸಕರನ್ನು ಎರಡು ಬಾರಿ ಉದ್ದೇಶಿಸಿ ಮಾತನಾಡಿರುವ ಮುಖ್ಯಮಂತ್ರಿ, ಕಾಂಗ್ರೆಸ್ನ ಪಾರಂಪರಿಕ ಮತಗಳನ್ನು ಕದಿಯಲು ಬಿಜೆಪಿ ಬೃಹತ್ ಯೋಜನೆಯನ್ನೇ ರೂಪಿಸಿದೆ ಎಂದರು.
ಮತಗಳನ್ನು ಕಸಿಯುವ ಹುನ್ನಾರ
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ನೆಪದಲ್ಲಿ ನಿಮ್ಮ ಮತಗಳನ್ನು ಕಸಿಯಲು ಹೊರಟಿದೆ, ಇದನ್ನೇ ಮುಂದಿಟ್ಟುಕೊಂಡು ನನ್ನನ್ನೂ ಕನಕಪುರ ಕ್ಷೇತ್ರದಲ್ಲಿ ಸೋಲಿಸುವ ಹುನ್ನಾರ ನಡೆದಿದೆ.
ನನಗೆ ಎಲ್ಲಾ ಮಾಹಿತಿ ತಿಳಿದಿದ್ದು, ನೀವು ನಿಮ್ಮ ಕ್ಷೇತ್ರಗಳಲ್ಲಿ ಬಿಡಾರ ಹೂಡಿ ಅಭಿವೃದ್ಧಿ ಜೊತೆಗೆ ನಿಮ್ಮ ಬೆಂಬಲಿತ ಮತಗಳನ್ನು ಉಳಿಸಿಕೊಳ್ಳಲು ಗಮನ ಕೊಡಿ.
ಎಚ್ಚರ ತಪ್ಪಿದರೆ ನಿಮ್ಮ ಶಾಸಕ ಸ್ಥಾನ ಇಲ್ಲಿಗೇ ಕೊನೆಯಾಗುತ್ತದೆ, ಕೇಂದ್ರ ಸರ್ಕಾರ ಮತ ಕದಿಯಲು ದೊಡ್ಡ ಹುನ್ನಾರ ನಡೆಸಿದೆ.

ಪರ್ಯಾಯ ಮಾರ್ಗ ಕಂಡುಕೊಂಡಿದ್ದೇವೆ
ಕೇಂದ್ರದ ಇಂತಹ ಕೃತ್ಯಗಳನ್ನು ತಲೆಕೆಳಗೆ ಮಾಡಲು ನಾವೂ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿದ್ದೇವೆ.
ಸರ್ಕಾರದ ಜೊತೆ ನೀವು ಕೈಜೋಡಿಸಿ ಕ್ಷೇತ್ರದಲ್ಲಿ ಕೆಲಸ ಮಾಡಿದರೆ, ನಮ್ಮ ಬೆಂಬಲಿತ ಮತಗಳನ್ನು ಉಳಿಸಿಕೊಳ್ಳಲು ಸಾಧ್ಯ.
ನಾನು ಎರಡು-ಮೂರು ಬಾರಿ ಗೆದ್ದಿದ್ದೇನೆ, ಮುಂದಿನ ಚುನಾವಣೆಯಲ್ಲೂ ನನ್ನದೇ ಗೆಲುವು ಎಂದುಕೊಂಡು ಮೈ ಮರೆತರೆ ಬಿಜೆಪಿ ಷಡ್ಯಂತ್ರಕ್ಕೆ ಬಲಿಯಾಗುತ್ತೀರಾ ಎಂದು ಎಚ್ಚರಿಸಿದರು.
ಬಿಜೆಪಿ ಅಧಿಕಾರ ಹಿಡಿದಿದೆ
ಬಿಹಾರ, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಇದೇ ಮಾರ್ಗ ಅನುಸರಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಬಲಿಷ್ಠ ನಾಯಕಿ ಮಮತಾ ಬ್ಯಾನರ್ಜಿ ಅವರನ್ನೇ ಬಿಜೆಪಿ ಧೂಳೀಪಟ ಮಾಡಿದೆ, ಅದರ ಮುಂದೆ ನೀವು ಯಾವ ಲೆಕ್ಕ.
ನಿಮ್ಮನ್ನು ಇಲ್ಲಿಗೆ ಕರೆಸಿರುವ ಮುಖ್ಯ ಉದ್ದೇಶ ಇದನ್ನು ಗಮನಕ್ಕೆ ತರುವುದಾಗಿತ್ತು, ಜೊತೆಗೆ ನಮ್ಮ ಒಗ್ಗಟ್ಟಿನ ಪ್ರದರ್ಶನವನ್ನು ಗುರುವಾರ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ತೋರಿಸಬೇಕಿದೆ ಎಂದಿದ್ದಾರೆ.


