ಬೆಂಗಳೂರು:ಆದಾಯ ಮೂಲಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ದೋಷಾರೋಪಣೆ ಸಲ್ಲಿಕೆಗೆ ಅನುಮತಿ ಕೋರಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರಿಗೆ ಲೋಕಾಯುಕ್ತ ಮನವಿ ಸಲ್ಲಿಸಿದೆ.
2005ರಿಂದ 2025ರವರೆಗೆ ಅವರ ಆಸ್ತಿ ದುಪ್ಪಟ್ಟಾಗಿದ್ದು, ಈ ಅವಧಿಯಲ್ಲಿ 25 ಕೋಟಿ ರೂ. ಮೌಲ್ಯದ ಆಸ್ತಿ ಅಕ್ರಮ ಗಳಿಕೆ ಆಗಿದೆ ಎಂದು ಆರೋಪಿಸಲಾಗಿದೆ.
ಐಎಂಎ ಹಗರಣ
ಐಎಂಎ ಹಗರಣ ಸಂಬಂಧ ಜಾರಿನಿರ್ದೇಶನಾಲಯ (ಇ.ಡಿ.) ನಡೆಸಿದ ತನಿಖೆಯಲ್ಲಿ ಜಮೀರ್ ಪಾತ್ರ ಇದೆ ಎಂಬುದು ದಾಖಲೆಗಳಿಂದ ಕಂಡುಬಂದಿತ್ತು.
ತಮಗೆ ದೊರೆತ ಮಾಹಿತಿ ಆಧಾರದ ಮೇಲೆ ಇ.ಡಿ. ಜಮೀರ್ ಅವರ ಕಚೇರಿ ಮತ್ತು ನಿವಾಸಗಳ ಮೇಲೆ ದಾಳಿ ನಡೆಸಿ ಕೆಲವು ದಾಖಲೆಪತ್ರಗಳನ್ನು ವಶ ಪಡಿಸಿಕೊಂಡಿತ್ತು.
ತನಿಖೆ ವೇಳೆ ಆದಾಯ ಮೂಲಕ್ಕಿಂತ ಹೆಚ್ಚು ಸಂಪತ್ತು ಗಳಿಸಿದ್ದಾರೆ ಎಂಬುದಾಗಿ ಎಸಿಬಿ ತನಿಖಾ ಸಂಸ್ಥೆಗೆ ಪ್ರಕರಣ ವರ್ಗಾಯಿಸಿ ತನಿಖೆ ನಡೆಸುವಂತೆ ರಾಜ್ಯ ಸರ್ಕಾರ ಸೂಚಿಸಿತ್ತು.
ಲೋಕಾಯುಕ್ತ ಮರುಸ್ಥಾಪನೆ
ಎಸಿಬಿ ತನಿಖೆ ನಡೆಸಿ ಪ್ರಕರಣ ಅಂತ್ಯಗೊಳಿಸುವಷ್ಟರಲ್ಲಿ ಅಂದಿನ ಬಿಜೆಪಿ ಸರ್ಕಾರ ಎಸಿಬಿ ರದ್ದು ಮಾಡಿ ಲೋಕಾಯುಕ್ತವನ್ನು ಮರುಸ್ಥಾಪಿಸಿತ್ತು.
ಪ್ರಕರಣ ಕುರಿತು ಲೋಕಾಯುಕ್ತ ಅಧಿಕಾರಿಗಳು ದೀರ್ಘಕಾಲ ತನಿಖೆ ನಡೆಸಿ, ಇದೀಗ ದೊರೆತ ಸಾಕ್ಷ್ಯಾಧಾರಗಳ ಮೇಲೆ ಜಮೀರ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಗೆ ಅನುಮತಿ ಕೋರಿದ್ದಾರೆ.
ಸಿದ್ದರಾಮಯ್ಯ ಸಂಪುಟದಲ್ಲಿ 3 ವರ್ಷ ವಸತಿ ಮತ್ತು ವಕ್ಫ್ ಖಾತೆ ಸಚಿವರಾಗಿದ್ದ ಸಂದರ್ಭದಲ್ಲಿ ಪ್ರಕರಣದ ತನಿಖೆ ಮಂದಗತಿಯಲ್ಲಿತ್ತು.
ಬದಲಾದ ರಾಜಕೀಯ ಪರಿಸ್ಥಿತಿ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಂಡಿದ್ದು, ಇದೀಗ ರಾಜ್ಯಪಾಲರ ಅಂಗಳದಲ್ಲಿದೆ.


