ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರ ವಹಿಸಿಕೊಂಡು 50 ದಿನಗಳು ಕಳೆದರೂ ಪೂರ್ಣ ಸರ್ಕಾರ ರಚನೆ ಮಾಡಲು ಸಾಧ್ಯವಾಗಿಲ್ಲ.
ಸಂಪುಟದಲ್ಲಿ ಖಾಲಿರುವ 20 ಸ್ಥಾನಗಳನ್ನು ಭರ್ತಿ ಮಾಡಿ, ಸರ್ಕಾರದ ವೇಗಕ್ಕೆ ಚಾಲನೆ ನೀಡಲು ಮುಖ್ಯಮಂತ್ರಿಯವರು ಎರಡು ಮೂರು ಬಾರಿ ಮಂತ್ರಿಮಂಡಲ ವಿಸ್ತರಣೆಗೆ ವರಿಷ್ಠರ ಬಳಿ ಪ್ರಯತ್ನ ನಡೆಸಿದರೂ ದೆಹಲಿ ನಾಯಕರಿಂದ ಹಸಿರು ನಿಶಾನೆ ದೊರೆತಿಲ್ಲ.
ಬೆಂಗಳೂರು: ಮಂತ್ರಿಮಂಡಲ ವಿಸ್ತರಣೆಯಾಗದ ಹಿನ್ನೆಲೆಯಲ್ಲಿ ಆಗಸ್ಟ್ 7 ರಿಂದ ಆರಂಭಗೊಳ್ಳಬೇಕಿದ್ದ ವಿಧಾನಮಂಡಲದ ಮುಂಗಾರು ಅಧಿವೇಶನವನ್ನು ಮುಂದೂಡಲಾಗಿದೆ.
ಮಂತ್ರಿಮಂಡಲಕ್ಕೆ ಸೇರ್ಪಡೆಗೊಳ್ಳುವವರ ಪಟ್ಟಿ ಅಂತಿಮಗೊಂಡು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಅಂಗಳದಲ್ಲಿದೆ.
ಖರ್ಗೆ ಅವರು ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಅವರ ಅನುಮತಿ ದೊರಕಿಸಿಕೊಳ್ಳದೆ, ಶಿವಕುಮಾರ್ಗೆ ಹಸಿರು ನಿಶಾನೆ ತೋರಿಲ್ಲ.
ಕಳೆದ ಜುಲೈ15ರಂದು ಮಂತ್ರಿಮಂಡಲ ವಿಸ್ತರಣೆ ಮಾಡಲು ಎಲ್ಲಾ ಸಿದ್ದತೆ ನಡೆಸಿದ್ದ ಮುಖ್ಯಮಂತ್ರಿಯವರಿಗೆ ವರಿಷ್ಠರಿಂದ ಅನುಮತಿ ದೊರೆಯಲಿಲ್ಲ. ಇದರ ನಡುವೆ ಆಗಸ್ಟ್ 7 ರಿಂದ ವಿಧಾನಮಂಡಲದ ಅಧಿವೇಶನ ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದ್ದಾದರೂ, ಅಧಿಕೃತ ಸಂದೇಶವನ್ನು ವಿಧಾನಮಂಡಲದ ಕಾರ್ಯದರ್ಶಿಯವರಿಗೆ ನೀಡಿರಲಿಲ್ಲ.
ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದರಿಂದ ಆಗಸ್ಟ್ 7 ರ ಬದಲು 17ಕ್ಕೆ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನ ಕರೆಯುವ ಬಗ್ಗೆ ಮುಖ್ಯಮಂತ್ರಿಯವರು ಚಿಂತನೆ ಮಾಡಿದ್ದಾರೆ.
ಈ ಮಧ್ಯೆ ಎಐಸಿಸಿ ರಾಜಕೀಯ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ಹೊಣೆ ಹೊತ್ತ ರಣದೀಪ್ಸಿಂಗ್ ಸುರ್ಜೆವಾಲ್ ಪಕ್ಷದ ಕಾರ್ಯನಿಮಿತ್ತ, ರಾಜ್ಯ ಪ್ರವಾಸ ಕೈಗೊಂಡಿದ್ದು, ಅವರ ಜೊತೆಯು ಶಿವಕುಮಾರ್ ವಿಸ್ತರಣೆ ಸಂಬಂಧ ಮತ್ತೆ ಚರ್ಚೆ ಮಾಡಿದ್ದಾರೆ.
ರಾಜ್ಯದಲ್ಲಿ ತಲೆದೋರಿರುವ ತೀವ್ರ ಬರಗಾಲ ಎದುರಿಸಲು ಪೂರ್ಣ ಪ್ರಮಾಣದ ಮಂತ್ರಿಮಂಡಲ ಅಗತ್ಯವಿದೆ. ಮಂತ್ರಿಗಳಿಲ್ಲದೆ, ವಿಧಾನಮಂಡಲದ ಅಧಿವೇಶನ ನಡೆಸಲು ಸಾಧ್ಯವಾಗುತ್ತಿಲ್ಲ. ನೀವು ರಾಹುಲ್ಗಾಂಧಿ ಅವರ ಮನವೊಲಿಸಿ, ಸಿದ್ಧವಿರುವ ಪಟ್ಟಿಗೆ ಅನುಮತಿ ದೊರಕಿಸಿಕೊಟ್ಟರೆ ಜುಲೈ ೨೭ ರಂದೇ ವಿಸ್ತರಣೆ ಮಾಡಲು ಸಾಧ್ಯವಾಗುತ್ತದೆ ಎಂದು ವೇಣುಗೋಪಾಲ್ ಮತ್ತು ಸುರ್ಜೆವಾಲ್ ಅವರಿಗೆ ಮುಖ್ಯಮಂತ್ರಿಯವರು ಮನವರಿಕೆ ಮಾಡಿದ್ದಾರೆ.
ಮುಖ್ಯಮಂತ್ರಿಯವರ ಮನವಿಗೆ ಸ್ಪಂದಿಸಿರುವ ವೇಣುಗೋಪಾಲ್ ಅವರು, ಖರ್ಗೆ ಮತ್ತು ರಾಹುಲ್ಗಾಂಧಿ ಅವರ ಜೊತೆ ವಿಷಯ ಪ್ರಸ್ತಾಪಿಸಿ, ನಿಮ್ಮ ಸಹಾಯಕ್ಕೆ ಬರುವುದಾಗಿ ಭರವಸೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.


