ಬೆಂಗಳೂರು:ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟ ವಿಸ್ತರಣೆ ಮಾಡಿದ ನಂತರ ಅಸಮಾಧಾನಗೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ರಾತ್ರಿ ನಗರದ ತಾರಾ ಹೋಟೆಲ್ ಒಂದರಲ್ಲಿ ತಮ್ಮ ಆಪ್ತ ಸಚಿವರೊಂದಿಗೆ ಗೌಪ್ಯ ಸಭೆ ನಡೆಸಿದ್ದಾರೆ.
ಮೈಸೂರಿನ ವಿಶ್ವ ನೀಡಂ ಜೋಡಿ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಿರುವ ಮನೆಯ ಗೃಹ ಪ್ರವೇಶ ಕಾರ್ಯ ಮುಗಿಸಿ, ಸಂಜೆ ನಗರಕ್ಕೆ ಹಿಂತಿರುಗಿದ ಸಿದ್ದರಾಮಯ್ಯ, ಸಚಿವರಾದ ಬಸವರಾಜ ರಾಯರೆಡ್ಡಿ, ಬೈರತಿ ಸುರೇಶ್ ಸೇರಿದಂತೆ ಕೆಲವು ಮಂತ್ರಿಗಳ ಜೊತೆ ಸಮಾಲೋಚನೆ ನಡೆಸಿದರು.
ಮೊಗಸಾಲೆಯಲ್ಲಿ ಭಾರೀ ಚರ್ಚೆ
ನವೆಂಬರ್ ತಿಂಗಳಲ್ಲಿ ಅಹಿಂದ ಸಂಘಟನೆಗೆ ಚಾಲನೆ ನೀಡಲು ನಿರ್ಧರಿಸಿರುವ ಸಿದ್ದರಾಮಯ್ಯ, ಏಕಾಏಕಿ, ಆಪ್ತರೊಂದಿಗೆ ಮಾತನಾಡಿರುವುದು ವಿಧಾನಸಭೆಯ ಮೊಗಸಾಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಯಿತು.
ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕೆಲವರನ್ನು ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳಬಾರದು ಎಂದು ವರಿಷ್ಠರಿಗೆ ಸಲಹೆ ಮಾಡಿದ್ದರೂ ಅದನ್ನು ಅವರು ಲೆಕ್ಕಿಸಿರಲಿಲ್ಲ.
ಅಲ್ಲದೆ, ಎ.ಎಸ್.ಪೊನ್ನಣ್ಣ, ಬಸವರಾಜ ನೀಲಪ್ಪ ಶಿವಣ್ಣನವರ್ ಸೇರಿದಂತೆ ಕೆಲವರನ್ನು ಮಂತಿಮಂಡಲಕ್ಕೆ ತೆಗೆದುಕೊಳ್ಳುವಂತೆ ಹೆಸರಿಸಿದ್ದರು.
ಅಸಮಾಧಾನ ಬಹಿರಂಗ
ಆದರೆ, ಇವರ ಶಿಫಾರಸುಗಳಿಗೆ ವರಿಷ್ಠರು ಮನ್ನಣೆ ನೀಡಲಿಲ್ಲ, ಇದೇ ಕಾರಣಕ್ಕೆ ಸಿದ್ದರಾಮಯ್ಯ, ಲೋಕಭವನದ ಗಾಜಿನಮನೆಯಲ್ಲಿ ನಡೆದ ಸಂಪುಟ ವಿಸ್ತರಣೆ ಸಮಾರಂಭಕ್ಕೆ ಗೈರಾಗುವ ಮೂಲಕ ತಮ್ಮ ಅಸಮಾಧಾನ ಬಹಿರಂಗಪಡಿಸಿದ್ದರು.
ಈ ಬೆಳವಣಿಗೆ ನಂತರ ಮುಖ್ಯಮಂತ್ರಿ ಅವರು, ಸಿದ್ದರಾಮಯ್ಯ ಅವರನ್ನು ಎರಡು-ಮೂರು ಬಾರಿ ಭೇಟಿ ಮಾಡಿ ಮಾತುಕತೆ ನಡೆಸಿ, ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದ್ದರು.
ವಿಸ್ತರಣೆ ನಂತರ ಸಿದ್ದರಾಮಯ್ಯ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡದಿದ್ದರೂ, ತಮ್ಮನ್ನು ಭೇಟಿ ಮಾಡಲು ಬಂದ ಸಚಿವರು ಮತ್ತು ಶಾಸಕರಿಗೆ ನನ್ನದೇನಿಲ್ಲ, ಎಲ್ಲವೂ ಮುಖ್ಯಮಂತ್ರಿ ಅವರದೇ, ಅವರ ಬಳಿ ಹೋಗಿ ಎನ್ನುತ್ತಿದ್ದರು.
ವರಿಷ್ಠರಿಗೆ ಎಚ್ಚರಿಕೆ ಗಂಟೆ
ಇದೀಗ ಸಿದ್ದರಾಮಯ್ಯ ಗೌಪ್ಯ ಸಭೆ ನಡೆಸಿದ್ದಾರೆ, ಇದರ ವಿವರ ಬಹಿರಂಗೊಳ್ಳದಿದ್ದರೂ, ಮುಖ್ಯಮಂತ್ರಿ ಮತ್ತು ಎಐಸಿಸಿ ವರಿಷ್ಠರಿಗೆ ಎಚ್ಚರಿಕೆ ಗಂಟೆಯಾಗಿದೆ.
ಸಿದ್ದರಾಮಯ್ಯ ಈ ಹಿಂದೆ ಕೆಲವು ರಾಜಕೀಯ ಸನ್ನಿವೇಶಗಳಲ್ಲಿ ಇಂತಹ ಗೌಪ್ಯ ಸಭೆಗಳನ್ನು ನಡೆಸಿದಾಗಲೆಲ್ಲಾ ರಾಜ್ಯದ ರಾಜಕೀಯ ಚಿತ್ರಣವೇ ಬದಲಾಗಿದೆ.


