ಬೆಂಗಳೂರು:ಕೇರಳಂ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ನ ವಿ.ಡಿ.ಸತೀಶನ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕರ್ನಾಟಕದಲ್ಲೂ ಅಧಿಕಾರ ಹಸ್ತಾಂತರ ಸಂಬಂಧ ಚಟುವಟಿಕೆಗಳು ಪಕ್ಷದ ಉನ್ನತ ಮಟ್ಟದಲ್ಲಿ ತೀವ್ರಗೊಂಡಿವೆ.
ಕಳೆದ ಮೂರು ದಿನಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದ ಸಚಿವರುಗಳು ಸತತವಾಗಿ ಸಭೆಗಳನ್ನು ನಡೆಸುತ್ತಿದ್ದಾರೆ.
ಜಾರ್ಜ್ ನಿವಾಸದಲ್ಲಿ ಸಭೆ
ಕೇರಳಂನಲ್ಲಿ ಸತೀಶನ್ ಪ್ರಮಾಣವಚನ ಕಾರ್ಯಕ್ರಮ ಮುಗಿಸಿಕೊಂಡು ನಗರಕ್ಕೆ ಹಿಂತಿರುಗಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕೆಲವು ಸಚಿವರು ವಿಮಾನ ನಿಲ್ದಾಣ ಸಮೀಪವಿರುವ ಸಚಿವ ಕೆ.ಜೆ.ಜಾರ್ಜ್ ಅತಿಥಿ ಗೃಹದಲ್ಲಿ ರಾಜ್ಯ ಕಾಂಗ್ರೆಸ್ ನಾಯಕತ್ವ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸಿದ್ದಾರೆ.
ಜಾರ್ಜ್ ನಿವಾಸದಲ್ಲಿ ಖರ್ಗೆ ಅವರು ಸಚಿವರೊಂದಿಗೆ ಸಮಾಲೋಚನೆ ನಂತರ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಜೊತೆ ಪ್ರತ್ಯೇಕ ಕೊಠಡಿಯಲ್ಲಿ ಮುಖಾಮುಖಿ ಚರ್ಚೆ ನಡೆಸಿದ್ದಾರೆ.
ಈ ವೇಳೆ ತಾವು ಅಧಿಕಾರ ಬಿಟ್ಟುಕೊಡಲು ಸಿದ್ಧ ಆದರೆ, ರಾಹುಲ್ ಗಾಂಧಿ ಅವರಿಂದ ನನಗೆ ಸಂದೇಶ ಬರಬೇಕೆಂದು ಸಿದ್ದರಾಮಯ್ಯ ಮತ್ತೊಮ್ಮೆ ತಮ್ಮ ಹಳೆಯ ಪಟ್ಟನ್ನೇ ಮುಂದಿಟ್ಟಿದ್ದಾರೆ.
ಸಿದ್ದರಾಮಯ್ಯ ಕಠಿಣ ನಿಲುವು
ಸಿದ್ದರಾಮಯ್ಯ ಅವರ ಕಠಿಣ ನಿಲುವಿನ ನಂತರ ಖರ್ಗೆ, ಎಐಸಿಸಿ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರಿಗೆ ದೂರವಾಣಿ ಕರೆ ಮಾಡಿ, ಕೇರಳಂ ಸಮಸ್ಯೆ ಬಗೆಹರಿಯಿತು, ಅದೇ ರೀತಿ ಕರ್ನಾಟಕ ಕಾಂಗ್ರೆಸ್ನಲ್ಲಿನ ಗೊಂದಲ ನಿವಾರಣೆಗೆ ರಾಹುಲ್ ಗಾಂಧಿ ಅವರೊಂದಿಗೆ ಸಮಯ ನಿಗದಿ ಮಾಡಿ ಎಂದು ತಿಳಿಸಿದ್ದಾರೆ.
ಕರ್ನಾಟಕದ ಸಮಸ್ಯೆಯನ್ನು ದೀರ್ಘಕಾಲ ಎಳೆಯದೆ ಆದಷ್ಟು ಶೀಘ್ರ ಇತ್ಯರ್ಥಗೊಳಿಸಬೇಕಿದೆ, ತಪ್ಪಿದರೆ ನಾವೇ ಗೊಂದಲಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ.
ಕರ್ನಾಟಕದ ಬಗ್ಗೆ ಒಂದು ತೀರ್ಮಾನಕ್ಕೆ ಬರೋಣ ಎಂದು ಖರ್ಗೆ ಹೇಳುತ್ತಿದ್ದಂತೆ, ಆದಷ್ಟು ಶೀಘ್ರವೇ ಸಮಯ ನಿಗದಿ ಮಾಡುವುದಾಗಿ ವೇಣುಗೋಪಾಲ್ ಅತ್ತ ಕಡೆಯಿಂದ ಭರವಸೆ ನೀಡಿದ್ದಾರೆ.
ಮುಖ್ಯಮಂತ್ರಿ ಆಪ್ತರ ಸಭೆ
ಈ ಬೆಳವಣಿಗೆ ನಂತರವೇ ಮಂಗಳವಾರ ಬೆಳಗ್ಗೆ ಮತ್ತು ರಾತ್ರಿ ಮುಖ್ಯಮಂತ್ರಿ ಆಪ್ತರು ಪ್ರತ್ಯೇಕ ಸಭೆ ನಡೆಸಿದ್ದಲ್ಲದೆ, ಇಂದು ಬೆಳಗ್ಗೆ ಮತ್ತೆ ಜಾರ್ಜ್ ನಿವಾಸದಲ್ಲಿ ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ಮಾಡಿದರು.
ಸಭೆ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿ ಅವರನ್ನು ಸಂಪರ್ಕಿಸಿದ ಸಚಿವರು, ಸಿದ್ದರಾಮಯ್ಯ ಅವರನ್ನು ನಿಗೂಢ ಸ್ಥಳವೊಂದಕ್ಕೆ ಕರೆಸಿಕೊಂಡು ಚರ್ಚಿಸಿದರು.
ಇದರ ಬೆಳವಣಿಗೆ ಬೆನ್ನಲ್ಲೇ ಶಿವಕುಮಾರ್ ರಾಷ್ಟ್ರಮಟ್ಟದ ಆಂಗ್ಲ ವಾಹಿನಿಯೊಂದಕ್ಕೆ ಮಾಹಿತಿ ನೀಡಿ, ನನ್ನನ್ನು ಮತ್ತು ಮುಖ್ಯಮಂತ್ರಿ ಅವರನ್ನು ಎಐಸಿಸಿ ನಾಯಕರು ಶೀಘ್ರದಲ್ಲೇ ಮಾತುಕತೆಗೆ ಕರೆಯಲಿದ್ದಾರೆ ಎಂದಷ್ಟೇ ತಿಳಿಸಿದರು.


