ಬೆಂಗಳೂರು:ಮುಂಗಾರು ಕೊರತೆ ಹಿನ್ನೆಲೆಯಲ್ಲಿ ಕೃಷಿಗೆ ಮತ್ತು ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ಮೋಡ ಬಿತ್ತನೆಗೆ ಸರ್ಕಾರ ತೀರ್ಮಾನಿಸಿದೆ.
ಯೋಜನೆ ಅನುಷ್ಟಾನಕ್ಕೆ 28.52 ಕೋಟಿ ರೂ. ಬಿಡುಗಡೆ ಮಾಡಿ, ಮುಂದಿನ 60 ದಿನ, 200 ಗಂಟೆ ಮೋಡ ಬಿತ್ತನೆ ಮಾಡಲಿದೆ.
ಪ್ರದೇಶ ಗುರುತಿಸಿ ಕೃತಕ ಮಳೆ
ರಾಜ್ಯದ ಯಾವ ಭಾಗದಲ್ಲಿ ಮಳೆ ಕೊರತೆ ಇದೆಯೋ, ಅಂತಹ ಪ್ರದೇಶಗಳನ್ನು ಗುರುತಿಸಿ ಕೃತಕ ಮಳೆ ತರಿಸಲು ತೀರ್ಮಾನಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ವೈಜ್ಞಾನಿಕ ಮತ್ತು ತಾಂತ್ರಿಕ ವಿಧಾನಗಳ ಮೂಲಕ ಮಳೆ ಕೊರತೆ ನೀಗಿಸಲು ಮುಂದಾಗಿದ್ದೇವೆ ಎಂದರು.
ಕರಾವಳಿ, ಮಲೆನಾಡು ಹಾಗೂ ಮುಂಬೈ ಕರ್ನಾಟಕದ ಕೆಲವು ಪ್ರದೇಶ ಹೊರತುಪಡಿಸಿ ರಾಜ್ಯದ ಉಳಿದೆಡೆ ವಾಡಿಕೆಗಿಂತ ಶೇ.50ರಿಂದ ಶೇ.60ರಷ್ಟು ಮಳೆ ಕೊರತೆ ಆಗಿದೆ.
ಮೇವಿನ ಕೊರತೆ ಉಲ್ಬಣ
ಮಳೆ ಕೊರತೆಯಿಂದ ಬೆಳೆಗಳು ಒಣಗಿವೆ, ಇದೇ ಪರಿಸ್ಥಿತಿ ಮುಂದುವರೆದರೆ, ಕುಡಿಯುವ ನೀರು ಹಾಗೂ ಮೇವಿನ ಕೊರತೆಯೂ ಉಲ್ಬಣವಾಗಲಿದೆ.
ಮುನ್ನಚ್ಚರಿಕೆಯಾಗಿ ಜಲಮೂಲ ಹೆಚ್ಚಿಸುವ ಉದ್ದೇಶದಿಂದ ಕೃತಕ ಮಳೆಗೆ ಮೊರೆ ಹೋಗಿದ್ದೇವೆ.
ಈ ಹಿಂದೆಯೂ ರಾಜ್ಯದಲ್ಲಿ ಹಲವು ಬಾರಿ ಇಂತಹ ಪ್ರಯೋಗಗಳು ನಡೆದಿವೆ, ಆದರೆ, ಈ ಬಾರಿ ನಾವು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಬರ ಪೀಡಿತ ಪ್ರದೇಶಗಳಲ್ಲಿ ಮಳೆ ತರಿಸಲು ಕಾರ್ಯಕ್ರಮ ರೂಪಿಸಿದ್ದೇವೆ ಎಂದರು.
ತಾಂತ್ರಿಕ-ವೈಜ್ಞಾನಿಕ ಅಂಶ
ಮೋಡ ಬಿತ್ತನೆ ಕಾರ್ಯಾಚರಣೆಯ ತಾಂತ್ರಿಕ ಮತ್ತು ವೈಜ್ಞಾನಿಕ ಅಂಶಗಳನ್ನು ಸ್ವತಂತ್ರವಾಗಿ ಪ್ರಮಾಣೀಕರಿಸಲು ಕರ್ನಾಟಕ ನೀರಾವರಿ ನಿಗಮದಲ್ಲಿ ಪರಿಣಿತರು ಇಲ್ಲ.
ಈ ಹಿನ್ನೆಲೆಯಲ್ಲಿ ತಾಂತ್ರಿಕ ಉಸ್ತುವಾರಿ ಜವಾಬ್ದಾರಿಯನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವಹಿಸಿಕೊಳ್ಳಲಿದೆ.
ಆಡಳಿತಾತ್ಮಕ ಮತ್ತು ಬಿಲ್ ಪಾವತಿ ಸೇರಿದಂತೆ ಹಣಕಾಸು ವಿಷಯಗಳನ್ನು ಕರ್ನಾಟಕ ನೀರಾವರಿ ನಿಗಮ ನಿಯಮಾನುಸಾರ ನಿರ್ವಹಿಸಲಿದೆ ಎಂದರು.


