ಹಾಸನ:ಬೆರಳೆಣಿಕೆಯಷ್ಟು ಪೋಲಿಸ್ ಅಧಿಕಾರಿಗಳನ್ನು ಇಟ್ಟುಕೊಂಡು ರಾಜಕೀಯ ವಿರೋಧಿಗಳನ್ನು ಧಮನ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಹೊರಟಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಡಾ.ಜಿ.ಪರಮೇಶ್ವರ್ ಅವರನ್ನು ಗೃಹ ಸಚಿವರೆಂದು ಬಿಂಬಿಸಿಕೊಂಡು ಅವರ ಅರಿವಿಗೆ ಬಾರದಂತೆ ಕೆಲವು ಸಚಿವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ವಿರೋಧಿಗಳ ಧಮನಕ್ಕೆ ಹೊರಟಿದ್ದಾರೆ.
ಗೃಹ ಸಚಿವರು ಇದ್ದಾರಾ
ಈ ರಾಜ್ಯದಲ್ಲಿ ಗೃಹ ಸಚಿವರು ಎನ್ನುವರು ಇದ್ದಾರಾ ಎಂದು ಪ್ರಶ್ನಿಸಿದ ಅವರು, ಕಳೆದ ಆರೇಳು ತಿಂಗಳಿಂದ ಹಲವಾರು ಪ್ರಕರಣಗಳು ನಡೆಯುತ್ತಿವೆ, ಕರ್ನಾಟಕಕ್ಕೆ ಭವಿಷ್ಯದಲ್ಲಿ ಅತ್ಯಂತ ಕೆಟ್ಟ ದಿಗಳು ಕಾದಿವೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ವೈಷಮ್ಯ, ದ್ವೇಷ ಬೆಳೆಯಲು ಸಿದ್ದರಾಮಯ್ಯ ಸರ್ಕಾರ ಬೀಜ ಬಿತ್ತನೆ ಮಾಡಿದೆ, ಮುಂದೆಯೂ ಸಹಾ ಇಂತದ್ದೇ ಕೆಟ್ಟ ಪರಿಸ್ಥಿತಿ ಮುಂದುವರೆಯಲಿದೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.
ರಾಜ್ಯದಲ್ಲಿ ಪೋಲಿಸ್ ವ್ಯವಸ್ಥೆ ಇಡೀ ದೇಶಕ್ಕೆ ಮಾದರಿಯಾಗಿತ್ತು, ನಮ್ಮ ಪೂರ್ವಿಕರು ಉತ್ತಮ ವಾತಾವರಣ ರೂಪಿಸಿದ್ದರು, ನಮ್ಮ ಪೋಲಿಸ್ ಎಂದರೆ, ರಾಷ್ಟ್ರದಲ್ಲಿ ಗೌರವ ಇತ್ತು, ದುರದೃಷ್ಟವೆಂದರೆ, ಅದೆಲ್ಲವನ್ನೂ ಸರ್ವ ನಾಶ ಮಾಡಲು ಈ ಸರ್ಕಾರ ಹೊರಟಿದೆ, ಪೋಲಿಸ್ ಗೌರವ ಮಣ್ಣುಪಾಲು ಮಾಡುವಲ್ಲಿ ಮುಂದಾಗಿದೆ.
ಪೊಲೀಸ್ ಅಧಿಕಾರಿಗಳು ಸಸ್ಪೆಂಡ್
ಸಿ.ಟಿ.ರವಿ ಪ್ರಕರಣದಲ್ಲಿ ಬೆಳಗಾವಿ ಪೊಲೀಸರು ನಡೆದುಕೊಂಡ ರೀತಿಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಅವರು, ಬಿಜೆಪಿ ಸ್ನೇಹಿತರು ಸರಿಯಾದ ರೀತಿಯಲ್ಲಿ ಕಾನೂನು ಹೋರಾಟ ಮಾಡಿದರೆ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲಾ ಪೊಲೀಸ್ ಅಧಿಕಾರಿಗಳು ಸಸ್ಪೆಂಡ್ ಆಗಲಿದ್ದಾರೆ.
ರಾಜ್ಯಸಭೆಯಲ್ಲಿನ ಅಮಿತ್ ಷಾ ಹೇಳಿಕೆ ಬಗ್ಗೆ ರಾಜ್ಯ ವಿಧಾನಸಭೆಯಲ್ಲಿ ಚರ್ಚೆ ಮಾಡಿದ್ದಾರೆ, ರಾಜ್ಯಸಭೆಯಲ್ಲಿ ಪ್ರಾರಂಭವಾದ ವಿಷಯ ಆ ಸದನಕ್ಕೆ ಸಂಬಂಧಪಟ್ಟಿದ್ದು, ಅಮಿತ್ ಷಾ ಅವರು ವಿಧಾನ ಪರಿಷತ್ ಸದಸ್ಯರೆ ಎಂದು ಖಾರವಾಗಿ ಪ್ರಶ್ನಿಸಿದರು.
ಸಿ.ಟಿ.ರವಿ ಅವರನ್ನು ರಾತ್ರಿಯೆಲ್ಲಾ ಸುತ್ತಿಸಬೇಕಿತ್ತಾ, ಅವರು ಒಬ್ಬ ಜನಪ್ರತಿನಿಧಿ, ಬಂಧಿಸುವುದಿದ್ದರೆ ನೇರವಾಗಿ ಬೆಂಗಳೂರಿನ ಜನಪ್ರತಿನಿಧಿ ಕೋರ್ಟ್ಗೆ ಕರೆದುಕೊಂಡು ಬರಬಹುದಿತ್ತು, ರಾತ್ರಿಯೆಲ್ಲಾ ಸುತ್ತಿಸಬೇಕಾದ ಅವಶ್ಯಕತೆ ಏನಿತ್ತು, ಇದಕ್ಕೆಲ್ಲ ಯಾರು ಡೈರೆಕ್ಷನ್ ಕೊಟ್ಟವರು.
ಪ್ರತಿಫಲ ಎದುರಿಸಬೇಕಾಗುತ್ತದೆ
ಮಂತ್ರಿಯೊಬ್ಬರ ಚಿತಾವಣೆಯಿಂದ ಯಾವ ಅಧಿಕಾರಿಗಳು ಸಿ.ಟಿ.ರವಿಗೆ ಮಾನಸಿಕವಾಗಿ ಹಿಂಸೆ ಕೊಟ್ಟಿದ್ದಾರೋ ಅವರು ಅದರ ಪ್ರತಿಫಲ ಎದುರಿಸಬೇಕಾಗುತ್ತದೆ ಎಂದರು.
ಮಾಜಿ ಸಚಿವ ವಿನಯ್ ಕುಲಕರ್ಣಿ ಪ್ರಕರಣವನ್ನು ಏನು ಮಾಡಿದಿರಿ, ಕಾಂಗ್ರೆಸ್ ನಾಯಕ ಗುರಪ್ಪ ನಾಯ್ಡ ಮೇಲೆ ಶಿಕ್ಷಕರೊಬ್ಬರು ದೂರು ಕೊಟ್ಟರಲ್ಲ, ಆ ದೂರು ಏನಾಯಿತು, ರಾಜ್ಯದಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಗಮನಿಸುತ್ತಿದ್ದೇನೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಾಜಕೀಯ ವಿರೋಧಿಗಳಿಗೆ ಹೇಗೆಲ್ಲಾ ಕಿರುಕುಳ ನೀಡಲಾಗುತ್ತಿದೆ ಎಂಬುದನ್ನು ನಾನು ಬಲ್ಲೆ, ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ರಾಜಕಾರಣ ಯಾವ ದಿಕ್ಕಿನಲ್ಲಿ ಸಾಗಬಹುದು ಎನ್ನುವುದಕ್ಕೆ ಕಾಂಗ್ರೆಸ್ನವರು ವೇದಿಕೆ ಸಿದ್ಧ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.