ಬೆಂಗಳೂರು:ಎಸ್ಸಿ, ಎಸ್ಟಿ ಸಭೆ ನಡೆಸಿದ ಬಗ್ಗೆ ಆತಂಕವಿದೆ ಎಂಬುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಲ್ಲಿಯೂ ಹೇಳಿಲ್ಲ, ಎಲ್ಲಾ ಮಾಧ್ಯಮ ಸೃಷ್ಠಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಅನೇಕ ವಿಶ್ಲೇಷಣೆಗಳಿಗೆ ಉತ್ತರಿಸಲು ಆಗುವುದಿಲ್ಲ, ಒಬ್ಬೊಬ್ಬರು ಒಂದೊಂದು ರೀತಿ ವಿಶ್ಲೇಷಣೆ ಮಾತನಾಡುತ್ತಾರೆ, ಡಿ.ಕೆ.ಶಿವಕುಮಾರ್ ತಮಗೆ ಆತಂಕವಿದೆ ಎಂಬುದಾಗಿ ಎಲ್ಲಿಯಾದರೂ ಹೇಳಿದ್ದಾರೆಯೇ, ಸುಮ್ಮನೆ ಹೇಳಬೇಡಿ, ನಿನ್ನೆ ಇಡೀ ದಿನ ಅವರೊಂದಿಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ, ಪತ್ರಿಕಾಗೋಷ್ಠಿಯನ್ನೂ ನಡೆಸಿದ್ದೇವೆ, ನನಗೆ ನಿಮ್ಮ ಆತಂಕ ಇದೆ ಅಂತ ಅವರು ಹೇಳೇ ಇಲ್ಲ.
ನಂಬಿಕೆ ಪ್ರಶ್ನೆ ಬರುವುದಿಲ್ಲ
ನಮ್ಮ ಮೇಲೆ ಎಐಸಿಸಿಗೆ ನಂಬಿಕೆ ಇಲ್ಲವೆಂಬ ಪ್ರಶ್ನೆ ಬರುವುದಿಲ್ಲ, ಮಾಧ್ಯಮಗಳೇ ಬೆಳಗ್ಗೆ ಒಂದು, ಸಂಜೆ ಒಂದು ನಂಬಿಕೆ ಪ್ರಶ್ನೆ ಹುಟ್ಟು ಹಾಕುತ್ತಿವೆ.
ಸಭೆ ಬಗ್ಗೆ ಯಾರು ಆತಂಕಕ್ಕೆ ಒಳಗಾಗಿದ್ದಾರೆ, ನನಗೆ ಗೊತ್ತಿರುವ ಹಾಗೇ ಯಾವ ಆತಂಕನೂ ಇಲ್ಲ, ಯಾರೂ ಆತಂಕ ಪಡುವ ಅಗತ್ಯತೆಯೂ ಇಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದೇನೆ, ಪಕ್ಷದಿಂದ ಹೊರತಾಗಿ ಸಮಾವೇಶ ಮಾಡುತ್ತೇವೆ ಎಂಬುದಾಗಿ ನಾನು ಎಲ್ಲೂ ಹೇಳಿಲ್ಲ.
ಎಸ್ಸಿ, ಎಸ್ಟಿ ಸಮಾವೇಶ ಕುರಿತು ಕರೆದಿದ್ದ ಸಭೆ ಮುಂದೂಡಲು ಅನೇಕ ಕಾರಣಗಳಿವೆ, ಎಐಸಿಸಿ ವರಿಷ್ಠರು ಭಾಗವಹಿಸುವುದಾಗಿ ತಿಳಿಸಿದ್ದರಿಂದ ಮುಂದೂಡಲಾಗಿದೆ.
ಗೌಪ್ಯ ಸಭೆ ಏನೂ ಇಲ್ಲ
ಸಭೆ ಕುರಿತು ಕಾಂಗ್ರೆಸ್ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ತಮ್ಮೊಂದಿಗೆ ಮಾಹಿತಿ ಬಯಸಿದಾಗ, ’ಗೌಪ್ಯ ಸಭೆ ಏನೂ ಇಲ್ಲ, ನಮ್ಮ ಸಮಸ್ಯೆಗಳ ಕುರಿತು ಚರ್ಚಿಸಲು ಸಭೆ ಸೇರುತ್ತಿದ್ದೇವೆ, ನೀವೂ ಬನ್ನಿ’ ಎಂದಾಗ, ದಿನಾಂಕ ಸೂಚಿಸುವುದಾಗಿ ತಿಳಿಸಿದ್ದಾರೆ, ದಿನಾಂಕ ತಿಳಿಸಿದ ನಂತರ ಮತ್ತೆ ಸಭೆ ನಿಗದಿ ಪಡಿಸುತ್ತೇವೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆ ಅಜೆಂಡ ಏನಿದೆ ಎಂಬುದು ಗೊತ್ತಿಲ್ಲ, ಪಕ್ಷದಲ್ಲಿ ಯಾವ ಗೊಂದಲವೂ ಇಲ್ಲ.
ದೆಹಲಿಯಲ್ಲಿ ಎಐಸಿಸಿ ಕಚೇರಿ ನಿರ್ಮಾಣಕ್ಕೆ ೨೦೦೯ರಲ್ಲಿ ಅಡಿಗಲ್ಲು ಹಾಕಲಾಗಿತ್ತು, ಕಟ್ಟಡ ನಿರ್ಮಾಣ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು, ಈಗ ಉದ್ಘಾಟನೆಗೆ ಸಿದ್ಧವಾಗಿದೆ, ಜನವರಿ ೧೫ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇವೆ ಎಂದರು.
ನಕ್ಸಲರ ಶರಣಾಗತಿ ತಪ್ಪೇನಿದೆ
ನಕ್ಸಲರು ಮುಖ್ಯಮಂತ್ರಿ ಕಚೇರಿಗೆ ಬಂದು ಶರಣಾಗುವುದರಲ್ಲಿ ತಪ್ಪೇನಿದೆ, ಮುಖ್ಯಮಂತ್ರಿ ಮುಂದೆ ಶರಣಾದಾಗ ನಕ್ಸಲ್ ಚಟುವಟಿಕೆಗೆ ಯುವಜನರು ಬರಬಾರದು ಎಂಬ ಸಂದೇಶ ಇಡೀ ಸಮಾಜಕ್ಕೆ ತಲುಪುತ್ತದೆ.
ನಕ್ಸಲರ ಪರಿವರ್ತನೆಗೆ ಸರ್ಕಾರ ಅವಕಾಶ ಕೊಟ್ಟಿದೆ, ಅದರಲ್ಲಿ ತಪ್ಪೇನಿದೆ, ಬಿಜೆಪಿ ಶಾಸಕ ಸುನೀಲ್ ಕ್ಷೇತ್ರದಲ್ಲಿ ನಕ್ಸಲ್ ಚಟುವಟಿಕೆ ಜಾಸ್ತಿ ಇದೆ, ಎಎನ್ಎಫ್ ಕಾರ್ಕಳದಲ್ಲಿ ಇದೆ.
ನಕ್ಸಲರು ಶರಣಾದಾಗ ಅವರ ಬಳಿ ಶಸ್ತ್ರಾಸ್ತ್ರಗಳು ಇರಲಿಲ್ಲ, ಶಸ್ತ್ರಾಸ್ತ್ರಗಳನ್ನು ಬಿಟ್ಟು ಬಂದಿದ್ದಾರೆ, ಎಲ್ಲಿ ಎಸೆದು ಬಂದಿದ್ದಾರೆ ಎಂಬ ಕುರಿತು ಪೊಲೀಸರು ತನಿಖೆ ನಡೆಸಲಿದ್ದಾರೆ, ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಶೇ.೯೯ರಷ್ಟು ಕೊನೆಗೊಂಡಿದೆ, ಶರಣಾಗತ ನಕ್ಸಲರಲ್ಲಿ ತಮಿಳುನಾಡು, ಕೇರಳ ರಾಜ್ಯದವರೂ ಇದ್ದಾರೆ.
ಬೇರೆ ರಾಜ್ಯಗಳಲ್ಲೂ ಪ್ರಕರಣಗಳು
ಶರಣಾದ ನಕ್ಸಲರ ಮೇಲೆ ಬೇರೆ ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿವೆ, ಆ ರಾಜ್ಯ ಸರ್ಕಾರಗಳೂ ತೀರ್ಮಾನ ಕೈಗೊಳ್ಳಬೇಕಿದ್ದು, ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಬಂಧಪಟ್ಟ ರಾಜ್ಯಗಳ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ ಎಂದರು.
ತಿರುಪತಿಯಲ್ಲಿ ಕಾಲ್ತುಳಿತದಿಂದ ಭಕ್ತರು ಸಾವನ್ನಪ್ಪಿರುವ ಘಟನೆ ದುರದೃಷ್ಟಕರ, ಈ ರೀತಿ ಆಗಬಾರದಿತ್ತು, ಮೃತರ ಕುಟುಂಬದವರಿಗೆ ಭಗವಂತನು ದುಃಖ ಭರಿಸುವ ಶಕ್ತಿ ಕರುಣಿಸಲಿ, ಘಟನೆಯಲ್ಲಿ ಕರ್ನಾಟಕದವರೂ ಇದ್ದರೆಂಬ ಮಾಹಿತಿ ಇಲ್ಲ ಎಂದರು.