ಬೆಂಗಳೂರು:ಕರ್ನಾಟಕ ರೈಲ್ವೇಗೆ ಕೇಂದ್ರ ಬಜೆಟ್ನಲ್ಲಿ 7,564 ಕೋಟಿ ರೂ. ಅನುದಾನ ನೀಡಲಾಗಿದ್ದು, ರಾಜ್ಯದಲ್ಲಿ 1,652 ಕಿ.ಮೀ. ಹೊಸ ರೈಲ್ವೇ ಮಾರ್ಗ ನಿರ್ಮಾಣವಾಗಿದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ರಾಜಧಾನಿ ಬೆಂಗಳೂರು ನಗರದ ಮೇಲಿನ ಒತ್ತಡ ಕಡಿಮೆ ಮಾಡಲು ಸಬ್ ಅರ್ಬನ್ ರೈಲ್ವೇ ಯೋಜನೆಗೆ 15,762 ಕೋಟಿ ರೂ. ಕೊಡಲಾಗಿದೆ, 15,611 ಕೋಟಿ ರೂ. ಮೆಟ್ರೋ ಯೋಜನೆಗೆ ನೀಡಲಾಗಿದೆ.
ಮತ್ತಷ್ಟು ರೈಲುಗಳು
ಅಮೃತ್ ಸ್ಟೇಷನ್ ಯೋಜನೆಯಡಿ ರಾಜ್ಯದ 61 ರೈಲ್ವೇ ನಿಲ್ದಾಣಗಳ ಆಧುನೀಕರಣ ಮಾಡಲಾಗುತ್ತಿದೆ, ಈಗಾಗಲೇ ಕರ್ನಾಟಕದಲ್ಲಿ 10 ವಂದೇ ಭಾರತ್ ರೈಲುಗಳು ಸಂಚರಿಸುತ್ತಿದ್ದು, ಮತ್ತಷ್ಟು ರೈಲುಗಳು ಬರಲಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್ಡಿಎ ಸರ್ಕಾರ ರೈಲ್ವೇ ವಲಯದಲ್ಲಿ 51,479 ಕೋಟಿ ರೂ.ನಷ್ಟು ಬಂಡವಾಳ ಹೂಡಿದೆ, ಯುಪಿಎ ಆಡಳಿತಾವಧಿಯಲ್ಲಿ ಕೇವಲ 850 ಕೋಟಿ ರೂ. ನೀಡಲಾಗಿತ್ತು ಎಂದರು.
ಬೆಂಗಳೂರು ಸಮೀಪ ಮೊಬೈಲ್ ಉತ್ಪಾದನಾ ಕಂಪನಿ ಆರಂಭವಾಗಲಿದೆ, ಇದರಿಂದ 40 ಸಾವಿರ ಉದ್ಯೋಗ ಸೃಷ್ಟಿಯಾಗುವ ಗುರಿ ಹೊಂದಲಾಗಿದೆ, ಮುಂದಿನ ಬಾರಿ ನಗರಕ್ಕೆ ಬಂದಾಗ ಈ ಕಂಪನಿಗೆ ಭೇಟಿ ಕೊಡುತ್ತೇನೆ.
ಉದ್ಯೋಗ ಸೃಷ್ಟಿಯೇ ಗುರಿ
ಉತ್ಪಾದನಾ ವಲಯಕ್ಕೆ ಬಜೆಟ್ನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ, ಉದ್ಯೋಗ ಸೃಷ್ಟಿಯೇ ಇದರ ಗುರಿ, ಮೊಬೈಲ್ ಫೋನ್, ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್, ಫುಟ್ವೇರ್ ವಲಯಗಳಿಗೆ ಬಜೆಟ್ ಪುಷ್ಟಿ ನೀಡಿದೆ ಎಂದರು.
ಕಳೆದ ೬೦ ವರ್ಷಗಳಲ್ಲಿ ಆಗದಿರುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ, ಒಂದು ಮತ್ತು ಎರಡನೇ ಅವಧಿಯಲ್ಲಿ ಮಾಡಿ ತೋರಿಸಿದ್ದಾರೆ, ದೇಶದ ಯಾವ ಭಾಗಕ್ಕೆ ಹೋದರೂ ಅಭಿವೃದ್ಧಿ ಕಾರ್ಯ ಕಾಣುತ್ತದೆ.
ಲೋಕಸಭೆಯಲ್ಲಿ ಮಂಡಿಸಲಾದ 2025-26ನೇ ಸಾಲಿನ ಕೇಂದ್ರ ಮುಂಗಡಪತ್ರದಲ್ಲಿ ಆದಾಯ ತೆರಿಗೆ ರಿಯಾಯಿತಿ ಮಿತಿಯನ್ನು 12 ಲಕ್ಷ ರೂ.ವರೆಗೆ ಹೆಚ್ಚಿಸಲಾಗಿದೆ, ಇದರಿಂದ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಿದೆ.
ಹೊಸ ಆಯಾಮ
ಯುಪಿಎ ಆಡಳಿತಾವಧಿಯಲ್ಲಿ ಭಾರತದ ಆರ್ಥಿಕತೆ ಬಹಳ ಕೆಟ್ಟ ಸ್ವರೂಪದಲ್ಲಿತ್ತು, 2014ರಲ್ಲಿ ಬ್ಯಾಂಕಿಂಗ್ ವಲಯ ಉತ್ತಮವಾಗಿರಲಿಲ್ಲ, ಪ್ರಧಾನಿ ಮೋದಿ ಹೊಸ ಆಯಾಮ ನೀಡಿದರು.
ವರ್ಷದಿಂದ ವರ್ಷಕ್ಕೆ ದೇಶದ ರಾಷ್ಟ್ರೀಯ ಹೆದ್ದಾರಿ, ರೈಲ್ವೇ ಹಾಗೂ ನಾಗರಿಕ ವಿಮಾನಯಾನ ವಲಯಗಳಲ್ಲಿ ಅಭಿವೃದ್ಧಿ ಆಗಿದೆ.
ಕೇಂದ್ರ ಸರ್ಕಾರದ ಆಡಳಿತಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ, ಮೋದಿ ದೂರದೃಷ್ಟಿ ಯೋಜನೆಗಳಿಗೆ ಜನರ ಬೆಂಬಲ ಸಿಕ್ಕಿದೆ, ಜನಧನ್, ಉಜ್ವಲಾ, ಜಲಜೀವನ್ ಯೋಜನೆಗಳು ಜನರ ಬದುಕಿನಲ್ಲಿ ದೊಡ್ಡ ಬದಲಾವಣೆ ತಂದಿವೆ, ಮೂಲಸೌಕರ್ಯ ವೃದ್ಧಿ, ಶಿಕ್ಷಣ ಅಭಿವೃದ್ಧಿ, ರೈಲ್ವೇ ಯೋಜನೆಗಳು ಜನರ ಬದುಕಿನ ಗತಿ ಬದಲಿಸಿವೆ ಎಂದರು.
5ಜಿ ನೆಟ್ವರ್ಕ್
ಹತ್ತು ವರ್ಷಗಳ ಹಿಂದೆ ಕಾಲ್ ಡ್ರಾಪ್ ದೊಡ್ಡ ಚರ್ಚೆ ಆಗಿತ್ತು, ಈಗ ಉತ್ತಮ 5ಜಿ ನೆಟ್ವರ್ಕ್ ಇದೆ, ಕಳೆದ ಹತ್ತು ವರ್ಷದಿಂದ ವಿವಿಗಳು, ಐಐಎಂ, ಐಐಟಿ, ಮೆಡಿಕಲ್ ಕಾಲೇಜುಗಳ ಸಂಖ್ಯೆ ದುಪ್ಪಟ್ಟಾಗಿವೆ.
ಬಡ, ಮಧ್ಯಮ ವರ್ಗದ ಮೇಲೆ ಬಜೆಟ್ ಕೇಂದ್ರೀಕರಿಸಲಾಗಿದೆ, ಕಿಸಾನ್ ಸಮ್ಮಾನ್ ನಿಧಿಯಂತಹ ರೈತ ಕಲ್ಯಾಣ ಯೋಜನೆಗಳು ಬದಲಾವಣೆಯ ಸಾಕ್ಷಿಯಾಗಿವೆ, ಸಣ್ಣ, ಅತಿ ಸಣ್ಣ ಕೈಗಾರಿಕೆಗಳಿಗೆ ದೊಡ್ಡ ನಿರೀಕ್ಷೆ ಹಾಗೂ ಭರವಸೆ ಎನ್ಡಿಎ ಸರ್ಕಾರದಿಂದ ಲಭಿಸಿದೆ, ದೇಶ ದೊಡ್ಡ ಆರ್ಥಿಕ ವ್ಯವಸ್ಥೆ ಸೃಷ್ಟಿಸಿದೆ, ಹಣದುಬ್ಬರಕ್ಕೆ ಕಡಿವಾಣ ಬಿದ್ದಿದೆ.
ಮುಂದಿನ ವರ್ಷದ ವೇಳೆಗೆ ಭಾರತ 356 ಲಕ್ಷ ಕೋಟಿ ರೂ. ಆರ್ಥಿಕತೆ ಹೊಂದಲಿದೆ, ಅಮೆರಿಕ, ಫ್ರಾನ್ಸ್, ಇಂಗ್ಲೆಂಡ್ಗೆ ಹೋಲಿಸಿದರೆ ನಮ್ಮ ಆರ್ಥಿಕತೆ ಉತ್ತಮವಾಗಿದೆ, ಉತ್ಪಾದನಾ ವಲಯಕ್ಕೂ ಬಜೆಟ್ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.