ಬೆಂಗಳೂರು:ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಖುದ್ದು ವಿಚಾರಣೆಗೆ ಹಾಜರಾಗುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ 1ನೇ ತ್ವರಿತಗತಿ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್ಗೆ ಹೈಕೋರ್ಟ್ ತಡೆ ನೀಡಿದೆ.
ಮಾರ್ಚ್ 15 ರಂದು ನ್ಯಾಯಾಲಯಕ್ಕೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿರುವುದು ಯಡಿಯೂರಪ್ಪ ಅವರಿಗೆ ರಿಲೀಫ್ ಸಿಕ್ಕಂತಾಗಿದೆ.
ಅಂತಹ ಘಟನೆ ನಡೆದಿಲ್ಲ
ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿ, 2024ರ ಫೆಬ್ರವರಿ 2ರಂದು ಯಡಿಯೂರಪ್ಪ ಅವರು ಅಪ್ರಾಪ್ತ ಬಾಲಿಕಿಯೊಂದಿಗೆ ಅನುಚಿತವಾಗಿ ವರ್ತಸಿದರೆಂಬ ಆರೋಪವಿದೆ, ಈ ಬಗ್ಗೆ ಒಂದು ತಿಂಗಳ ಬಳಿಕ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ, ಸ್ಥಳದಲ್ಲಿದ್ದ ಸಾಕ್ಷಿಗಳು ಅಂತಹ ಘಟನೆ ನಡೆದಿಲ್ಲ ಎಂದಿದ್ದಾರೆ, ಬಾಲಕಿ ಮತ್ತು ಆಕೆಯ ತಾಯಿ ಹೇಳಿಕೆ ಮೇಲೆ ಆರೋಪಪಟ್ಟಿ ದಾಖಲಿಸಲಾಗಿದೆ ಎಂದರು.
ಸಂತ್ರಸ್ತೆ ಬಾಲಕಿ ತಾಯಿ ಮೊಬೈಲ್ನಲ್ಲಿದ್ದ ಸಂಭಾಷಣೆಯನ್ನು ಯಡಿಯೂರಪ್ಪ ಅಳಿಸಿಲ್ಲ, ಪೊಲೀಸರು ಪ್ರಕರಣದಲ್ಲಿ ನಮೂದಿಸಿರುವ ವಿಧಿಗಳು ದೂರುದಾರರಿಗೆ ಅನ್ವಯವಾಗುತ್ತವೆ.
ಒಂದು ತಿಂಗಳು 12 ದಿನ ತಡವಾಗಿ ಪೊಕ್ಸೊ ಮೊಕದ್ದಮೆ ದಾಖಲಿಸಲಾಗಿದೆ, ಘಟನೆ ನಡೆದಿದ್ದರೆ, ಯಾರೂ ಇಷ್ಟು ತಡವಾಗಿ ದೂರು ದಾಖಲಿಸುತ್ತಿರಲಿಲ್ಲ.
ಸಮನ್ಸ್ ರದ್ದುಪಡಿಸಿ
ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್ ಮಧ್ಯಂತರ ರಿಲೀಫ್ ನೀಡಿತ್ತು, ಅಲ್ಲದೆ, ಖುದ್ದು ಹಾಜರಾತಿಯಿಂದಲೂ ಹೈಕೋರ್ಟ್ ವಿನಾಯಿತಿ ನೀಡಿತ್ತು, ಸಮನ್ಸ್ ರದ್ದುಪಡಿಸಿ ಹೊಸದಾಗಿ ಪರಿಶೀಲನೆಗೆ ಆದೇಶಿಸಲಾಗಿತ್ತು.
ಇದೀಗ ವಿಶೇಷ ಕೋರ್ಟ್ ಕಾಗ್ನಿಜೆನ್ಸ್ ಪಡೆದು ಸಮನ್ಸ್ ಜಾರಿಗೊಳಿಸಿದೆ ಎಂದು ವಾದ ಮಂಡಿಸಿದರು.
ಯಡಿಯೂರಪ್ಪ ವಕೀಲರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಡ್ವೊಕೇಟ್ ಜನರಲ್, ಹೈಕೋರ್ಟ್ ಸೂಚನೆಯಂತೆ ವಿಶೇಷ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ, ಸಮನ್ಸ್ಗೆ ತಡೆ ನೀಡಬಾರದು ಎಂದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರ ಪೀಠ, ಯಡಿಯೂರಪ್ಪ ಅರ್ಜಿ ವಿಚಾರಣೆಯ ಅಗತ್ಯವಿದೆ ಎನ್ನುವ ಮೂಲಕ ಸಮನ್ಸ್ ಆದೇಶಕ್ಕೆ ತಡೆ ನೀಡಿದರಲ್ಲದೆ, ಖುದ್ದು ಹಾಜರಾತಿಯಿಂದಲೂ ವಿನಾಯಿತಿ ನೀಡಿದರು.