ಬೆಂಗಳೂರು:ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿಜಯೋತ್ಸವ ಸಂದರ್ಭದಲ್ಲಿ ನೂಕುನುಗ್ಗಲಿನ ಕಾಲ್ತುಳಿತದಿಂದ ಉಂಟಾದ ಸಾವು-ನೋವುಗಳಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇರ ಹೊಣೆ ಎಂದಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಅವರನ್ನು ತಕ್ಷಣವೇ ಮಂತ್ರಿಮಂಡಲದಿಂದ ಕಿತ್ತೊಗೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ತಡರಾತ್ರಿ ದೆಹಲಿಯ ತಮ್ಮ ಸರ್ಕಾರಿ ನಿವಾಸದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಎಲ್ಲಾ ದುರಂತಗಳಿಗೆ ಶಿವಕುಮಾರ್ ನೇರ ಹೊಣೆ ಎಂದಿದ್ದಾರೆ.
ಕರ್ನಾಟಕದಲ್ಲಿ ಮೂರ್ಖರ ಆಡಳಿತ
ಕರ್ನಾಟಕದಲ್ಲಿ ಉದ್ಧಟತನದ ಮೂರ್ಖರ ಆಡಳಿತ ನಡೆಯುತ್ತಿದೆ ಎಂದು ಕಿಡಿಕಾರಿದ ಕುಮಾರಸ್ವಾಮಿ, ಇಂತಹ ಅನಾಹುತವನ್ನು ಸಹಿಸಲು ಸಾಧ್ಯವಿಲ್ಲ, ಮುಖ್ಯಮಂತ್ರಿ ಅವರಿಗೆ ನಿಜವಾಗಿ ಧೈರ್ಯ, ತಾಕತ್ತು ಮತ್ತು ನಾಯಕತ್ವ ಇದ್ದರೆ, ಕೂಡಲೇ ಶಿವಕುಮಾರ್ ಅವರನ್ನು ಸಂಪುಟದಿಂದ ವಜಾ ಮಾಡಬೇಕು.
ಆರ್ಸಿಬಿಯ ಐಪಿಎಲ್-2025ರ ಜಯವನ್ನು ತಮ್ಮ ಸಾಧನೆ ಎಂಬುದಾಗಿ ಬಿಂಬಿಸಿಕೊಳ್ಳಲು ನಡೆಸಿದ ಯತ್ನದ ದುಷ್ಫಲ ಇದಾಗಿದೆ.
ಕ್ರೀಡಾಂಗಣದ ಬಳಿ ನಾಲ್ಕು ಹೆಣಗಳು ಬಿದ್ದಾಗಲೂ ವಿಧಾನಸೌಧದ ಮೆಟ್ಟಿಲ ಮೇಲೆ ವಿಜಯೋತ್ಸವ ಆಚರಿಸಿದ ಮೂರ್ಖ ಸರ್ಕಾರ.
ಸಾವಿನಲ್ಲೂ ವಿಜಯೋತ್ಸವ
ಹೊರಗಡೆ ಕ್ರೀಡಾಭಿಮಾನಿಗಳ ಹೆಣಗಳು ಬಿದ್ದು ಜನ ನೋವಿನಿಂದ ಚೀರುತ್ತಿದ್ದರೆ, ಶಿವಕುಮಾರ್, ಕ್ರೀಡಾಂಗಣದ ಒಳಗೆ ಟ್ರೋಫಿ ಎತ್ತಿಕೊಂಡು ಅದಕ್ಕೆ ಮುತ್ತಿಟ್ಟು ವಿಜಯೋತ್ಸವ ಆಚರಿಸುತ್ತಿದ್ದರು.
ಆ ವೇಳೆಗೆ 11 ಮಂದಿ ಸಾವಿಗೀಡಾಗಿ 40ಕ್ಕೂ ಹೆಚ್ಚು ಗಾಯಾಳುಗಳು ಸಾವಿನೊಂದಿಗೆ ಹೋರಾಟ ನಡೆಸುತ್ತಿದ್ದಾಗಲೂ, ಈ ವ್ಯಕ್ತಿ ತಾನೇ ಆಟವಾಡಿ ಟ್ರೋಫಿ ಗೆದ್ದಂತೆ ವಿಜೃಂಭಿಸುತ್ತಿದ್ದರು.
ಶ್ರಮಪಟ್ಟು ಆಟವಾಡಿ ಟ್ರೋಫಿ ಗೆದ್ದ ಕ್ರೀಡಾಪಟುಗಳಿಗೇ ಪ್ರಶಸ್ತಿ ಎತ್ತಿಹಿಡಿಯಲು ಸಾಧ್ಯವಾಗಿರಲಿಲ್ಲ.
ಕನಕಪುರ ಬೆಂಬಲಿಗರ ಪಡೆ
ಕನಕಪುರದ ತನ್ನ ಬೆಂಬಲಿಗರ ಪಡೆಯೊಂದಿಗೆ ವಿಮಾನ ನಿಲ್ದಾಣಕ್ಕೆ ತೆರಳಿ ಆಟಗಾರರನ್ನು ಸ್ವಾಗತಿಸಿದ ಪರಿ ಏನು, ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಅವರ ಕೈಗೆ ಕನ್ನಡದ ಬಾವುಟ ನೀಡಿ ವಿಜೃಂಭಿಸಿದ್ದೇನು.
ಆ ನಂತರ ಬೆಂಗಾವಲು ಪಡೆಯೊಂದಿಗೆ ಅವರನ್ನು ಕರೆತಂದಿದ್ದು, ಯಾವುದಾದರೂ ಒಂದು ಕಡೆ ವಿಜಯೋತ್ಸವ ಆಚರಣೆ ನಿಗದಿ ಪಡಿಸಿದ್ದರೆ, ಇಂತಹ ದುರಂತ ಸಂಭವಿಸುತ್ತಿರಲಿಲ್ಲ.
ಸ್ವಪ್ರತಿಷ್ಠೆಗಾಗಿ ಶಿವಕುಮಾರ್ 11 ಕ್ರೀಡಾಭಿಮಾನಿಗಳ ಜೀವ ಬಲಿ ಪಡೆದರು, ಯಾವುದೇ ಮುಂಜಾಗ್ರತಾ ಕ್ರಮಗಳಿಲ್ಲದೆ ಕಾರ್ಯಕ್ರಮ ಆಯೋಜಿಸಿದ ದುಷ್ಪರಿಣಾಮ ಇದು.
ನೆಪ ಮಾತ್ರಕ್ಕೆ ಗೃಹ ಸಚಿವ
ನೆಪ ಮಾತ್ರಕ್ಕೆ ಡಾ.ಜಿ.ಪರಮೇಶ್ವರ್ ಗೃಹ ಸಚಿವರಾಗಿದ್ದಾರೆ, ಮುಖ್ಯಮಂತ್ರಿ, ಕೂಳಿತುಕೋ ಎಂದರೆ ಕೂರುತ್ತಾರೆ, ನಿಲ್ಲು ಎಂದರೆ ನಿಲ್ಲುತ್ತಾರೆ ಎಂದು ಮೂದಲಿಸಿದರು.
ವರನಟ ಡಾ.ರಾಜ್ಕುಮಾರ್ ನಿಧನರಾದಾಗ ಕಾಂಗ್ರೆಸ್ ಗೂಂಡಾಗಳು ಅಂದಿನ ನನ್ನ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಗಲಭೆ ನಡೆಸಿದ್ದರು, ಅನಿವಾರ್ಯವಾಗಿ ಗೋಲಿಬಾರ್ ಮಾಡಬೇಕಾಯಿತು.
ನನ್ನ 2ನೇ ಬಾರಿ ಮುಖ್ಯಮಂತ್ರಿ ಅವಧಿಯಲ್ಲಿ ನಟ ಅಂಬರೀಶ್ ನಿಧನರಾದಾಗ ಲಕ್ಷಾಂತರ ಅಭಿಮಾನಿಗಳು ಸೇರಿದ್ದರು, ಆದರೆ, ಎಲ್ಲೂ ಗಲಭೆ ಆಗಲಿಲ್ಲ ಎಂದರು.

