ಬೆಂಗಳೂರು:ಸ್ವಪ್ರತಿಷ್ಠೆಗಾಗಿ 11 ಮಂದಿ ಕ್ರೀಡಾಭಿಮಾನಿಗಳ ಬಲಿ ತೆಗೆದುಕೊಂಡು ಕೆಟ್ಟ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕಿತ್ತೊಗೆದು ಹೊಸಬರನ್ನು ನೇಮಕ ಮಾಡಿ ಎಂದು ಕಾಂಗ್ರೆಸ್ ವರಿಷ್ಠರಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಆಗ್ರಹಿಸಿದ್ದಾರೆ.
ಮಿತ್ರ ಪಕ್ಷ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರೊಂದಿಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವರಿಷ್ಠರಿಗೆ ಮಾನ ಮರ್ಯಾದೆ ಎಂಬುದಿದ್ದರೆ ಮೊದಲು ಈ ಇಬ್ಬರನ್ನು ಬದಲಾವಣೆ ಮಾಡಲಿ ಎಂದರು.
ಕೇವಲ ವ್ಯಕ್ತಿ ಪ್ರತಿಷ್ಠೆ
ಕರ್ನಾಟಕ ಚಿನ್ನದಂತಹ ಸುಭಿಕ್ಷ ರಾಜ್ಯ, ಇಂತಹ ನಾಡಿನಲ್ಲಿ ಯಾವುದೇ ಅಭಿವೃದ್ಧಿ ಕೈಗೊಳ್ಳದೆ, ಕೇವಲ ವ್ಯಕ್ತಿ ಪ್ರತಿಷ್ಠೆ ಬೆಳೆಸಿಕೊಳ್ಳುತ್ತಿರುವ ಇವರಿಂದ ನಿಮ್ಮ ಪಕ್ಷಕ್ಕೆ ಕಪ್ಪು ಚುಕ್ಕೆ ಅಂಟಿಕೊಳ್ಳಲಿದೆ.
ಬೆಂಗಳೂರಿನಲ್ಲಿ ಸಂಭವಿಸಿದ ಮಹಾ ದುರಂತದ ನಡುವೆಯೂ ಇವರನ್ನು ಯಾವ ಕಾರಣಕ್ಕೆ ಮುಂದುವರೆಸಿದ್ದೀರಿ, ಇವರುಗಳಿಗೆ ನೋಟಿಸ್ ನೀಡಿ ಉತ್ತರ ಪಡೆಯುವ ತಾಕತ್ತು ಇಲ್ಲವೆ ಎಂದು ಹರಿಹಾಯ್ದರು.
ಕ್ರೀಡಾಭಿಮಾನಿಗಳು ಕಾಲ್ತುಳಿತಕ್ಕೆ ಒಳಗಾಗಿ ಸಾವು-ನೋವಿನಿಂದ ಬಳಲುತ್ತಿದ್ದಾಗ ನಿಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಜನಾರ್ದನ ಹೋಟೆಲ್ಗೆ ತೆರಳಿ ಮೊಮ್ಮಗನ ಜೊತೆ ಮಸಾಲೆ ದೋಸೆ ತಿನ್ನುತ್ತಿದ್ದರು.
ಮಸಾಲೆ ದೋಸೆ ಸವಿಯುತ್ತಿದ್ದರು
ನರಳಾಟ, ಚೀರಾಟ ಇಡೀ ದೇಶದಲ್ಲಿ ಪ್ರತಿಧ್ವನಿಸುತ್ತಿದ್ದರೂ, ಇದರ ಪರಿವೆಯೇ ಇಲ್ಲದೆ ಮಸಾಲೆ ದೋಸೆ ಸವಿಯುತ್ತಿದ್ದರು, ಇದು ನಿಮ್ಮ ಮುಖ್ಯಮಂತ್ರಿ ಕಾರ್ಯವೈಖರಿ ಎಂದರು.
ಸಂಭ್ರಮಾಚರಣೆ ಮತ್ತು ರೋಡ್ ಶೋ ನಡೆಸಲು ಪೋಲಿಸ್ ಇಲಾಖೆ ಅವಕಾಶ ಸಾಧ್ಯವಿಲ್ಲ ಎಂಬುದಾಗಿ ಕ್ರಿಕೆಟ್ ಸಂಸ್ಥೆ ಮತ್ತು ಸರ್ಕಾರಕ್ಕೆ ತಿಳಿಸಿದ್ದರೂ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಪ್ರತಿಷ್ಠೆಗಾಗಿ ವಿಜಯೋತ್ಸವ ನಡೆಸಿ ಅಮಾಯಕರ ಬಲಿ ಪಡೆದರು.
ಸ್ವತಃ ಪೋಲಿಸ್ ಕಮೀಷನರ್ ಅವರೇ ಕೆಎಸ್ಸಿಎ ಮತ್ತು ವಿಧಾನಸೌಧದ ಬಳಿ ಸಂಭ್ರಮಾಚರಣೆಗೆ ಅವಕಾಶ ಇಲ್ಲ ಎಂಬುದಾಗಿ ನೇರವಾಗಿ ಮುಖ್ಯಮಂತ್ರಿ ಅವರಿಗೆ ಹೇಳಿದ್ದಾರೆ.
ದಿಕ್ಕುತಪ್ಪಿಸಿದ ಗೋವಿಂದ ರಾಜು
ಆದರೆ, ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿ ಅವರ ಜೊತೆ ಸದಾ 24 ಗಂಟೆ ಅಂಟಿಕೊಂಡೇ ಇರುವ ಗೋವಿಂದ ರಾಜು ಪಟ್ಟು ಹಿಡಿದು, ಸಿದ್ದರಾಮಯ್ಯ ಅವರ ದಿಕ್ಕುತಪ್ಪಿಸಿ, ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಮಾರಂಭ ನಡೆಸಿದರು.
ಕೆಎಸ್ಸಿಎ ಬಳಿ ಮಧ್ಯಾನ್ಹ 3-10ಕ್ಕೆ ಒಬ್ಬ ವ್ಯಕ್ತಿ ಕಾಲ್ತುಳಿತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದರು, ಅದರ ಮಾಹಿತಿಯನ್ನು ಸರ್ಕಾರಕ್ಕೆ ತಲುಪಿಸಲಾಯಿತಾದರೂ, ಅದನ್ನೂ ಕಡೆಗಣಿಸಿ ಮೆಟ್ಟಿಲುಗಳ ಮೇಲೆ ಸಮಾರಂಭ ನಡೆಸಿದರು.
ವಿಜಯೋತ್ಸವ ಸಾಧ್ಯವಿಲ್ಲ ಎಂಬುದಾಗಿ ಸರ್ಕಾರಕ್ಕೆ ಸಲಹೆ ನೀಡಿದ್ದ ಪೋಲಿಸ್ ಕಮೀಷನರ್ ಬಿ.ದಯಾನಂದ್ ಅವರನ್ನು ಸಂಪುಟ ಸಭೆಯಲ್ಲಿ ಪಟ್ಟುಹಿಡಿದು ಅಮಾನತು ಮಾಡಿಸಿದರು, ಇದರಲ್ಲಿ ಗೋವಿಂದ ರಾಜು ಪಾತ್ರವಿದೆ.
ಹೈಕೋರ್ಟ್ ಚಾಟಿ
ರಾಜ್ಯ ಹೈಕೋರ್ಟ್ ಚಾಟಿ ಬೀಸುತ್ತಿದ್ದಂತೆ ಎಚ್ಚೆತ್ತ ಮುಖ್ಯಮಂತ್ರಿ, ಏನು ಮಾಡಬೇಕೆಂದು ತೋಚದೆ, ಮಾಜಿಸ್ಟ್ರೇಟ್ರಿಂದ ವಿಚಾರಣೆ, ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರಿಂದ ವಿಚಾರಣೆ ಅಲ್ಲದೆ, ಸಿಐಡಿ ತನಿಖೆಗೂ ಆದೇಶ ಮಾಡಿದರು.
ಅಲ್ಲದೆ, ತಮ್ಮ ತಪ್ಪು ಮುಚ್ಚಿಕೊಳ್ಳಲು ಅಮಾಯಕ ಪೋಲಿಸ್ ಅಧಿಕಾರಿಗಳನ್ನು ಅಮಾನತು ಮಾಡಿದಿರಿ, ಈಗ ಮೂರರಲ್ಲಿ ಯಾವ ತನಿಖೆ ನಡೆಸಿ ಕ್ರಮಕೈಗೊಳ್ಳುತ್ತೀರಿ ಎಂದು ಪ್ರಶ್ನಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಆರ್ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆಯ ಕಾಲ್ತುಳಿತದಿಂದ ಸಂಭವಿಸಿದ 11 ಮಂದಿ ಸಾವಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಆರೋಪಿ ನಂಬರ್ 1
ದುರಂತಕ್ಕೆ ಸಂಬಂಧಿಸಿದಂತೆ ಎಫ್ಐಆರ್ನಲ್ಲಿ ಕೆಎಸ್ಸಿಎ, ಆರ್ಸಿಬಿ ಮತ್ತು ಡಿಎನ್ಎ ಸಂಸ್ಥೆಗಳನ್ನು ಆರೋಪಿಗಳಾಗಿ ಹೆಸರಿಸಿದ್ದಾರೆ, ಆದರೆ, ನಿಜ ಸಂಗತಿಯೆಂದರೆ, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿ ನಂಬರ್ 1, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪಿ ನಂಬರ್ 2 ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆರೋಪಿ ನಂಬರ್ 3 ಎಂದರು.
ರಾಜ್ಯ ಹೈಕೋರ್ಟ್ ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಿಕೊಂಡ ನಂತರ ಎಚ್ಚೆತ್ತುಕೊಂಡ ಸರ್ಕಾರ, ಪೊಲೀಸ್ ಅಧಿಕಾರಿಗಳನ್ನು ಹರಕೆಯ ಕುರಿ ಮಾಡಿದೆ.
ಮುಖ್ಯಮಂತ್ರಿ ರಾತ್ರಿ ಪತ್ರಿಕಾಗೋಷ್ಠಿ ನಡೆಸಿ, ಬೆಂಗಳೂರು ಪೋಲಿಸ್ ಕಮೀಷನರ್ ಸೇರಿದಂತೆ 5 ಅಧಿಕಾರಿಗಳನ್ನು ಅಮಾನತು ಮಾಡುವ ಮೂಲಕ ದುರ್ಘಟನೆಗೆ ರಾಜ್ಯ ಸರ್ಕಾರದಿಂದ ತಪ್ಪಾಗಿದೆ ಎಂಬುದನ್ನು ಒಪ್ಪಿಕೊಂಡಂತಾಗಿದೆ.
ಬೇಹುಗಾರಿಕಾ ದಳದ ವೈಫಲ್ಯ
ಸಂಭ್ರಮಾಚರಣೆ ಸಮಾರಂಭಕ್ಕೆ 30 ರಿಂದ 40 ಸಾವಿರ ಜನರು ಬರುವ ನಿರೀಕ್ಷೆ ಇಟ್ಟುಕೊಂಡಿದ್ದೆವು, 2ರಿಂದ 3 ಲಕ್ಷ ಜನರನ್ನು ನಿರೀಕ್ಷೆ ಮಾಡಿರಲಿಲ್ಲ ಎನ್ನುವ ಮೂಲಕ ಬೇಹುಗಾರಿಕಾ ದಳದ ವೈಫಲ್ಯವನ್ನೂ ಸ್ವತಃ ಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ.
’ಐಪಿಎಲ್ ಫೈನಲ್ ಪಂದ್ಯದಲ್ಲಿ ಗೆದ್ದು ಬೀಗಿದ ಹೆಮ್ಮೆಯ ಆರ್ಸಿಬಿ ತಂಡಕ್ಕೆ ಅಭಿನಂದನೆ, ರಾಜ್ಯ ಹೆಮ್ಮೆ ಪಡುವ ಕೆಲಸವನ್ನು ಆರ್ಸಿಬಿ ತಂಡ ಮಾಡಿದೆ, ಇವರನ್ನು ಸಂಜೆ 4 ಗಂಟೆಗೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಅಭಿನಂದಿಸಲಿದ್ದೇವೆ, ಈ ಐತಿಹಾಸಿಕ ಕ್ಷಣದಲ್ಲಿ ನೀವೂ ಭಾಗಿಯಾಗಿ’ ಎಂದು ಸ್ವತಃ ಮುಖ್ಯಮಂತ್ರಿಗಳೇ ಸಾಮಾಜಿಕ ಜಾಲತಾಣದ ಮೂಲಕ ಕರೆ ಕೊಟ್ಟಿದ್ದರು.
ಐಪಿಎಲ್ ಫೈನಲ್ ಪಂದ್ಯಕ್ಕೆ ಮೊದಲೇ ಕೆಎಸ್ಸಿಎ, ಆರ್ಸಿಬಿ ಮತ್ತು ಡಿಎನ್ಎ ಏಜೆನ್ಸಿ ಕಡೆಯಿಂದ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಗೆ ಅನುಮತಿಗೆ ಹೋಗಿದ್ದಾಗ ಲಕ್ಷಗಟ್ಟಲೆ ಅಭಿಮಾನಿಗಳು ಬರುವ ಕಾರಣ ನಾಳೆಯೇ ಸಂಭ್ರಮಾಚರಣೆಗೆ ಅನುಮತಿ ಕೊಡಲಾಗದು ಎಂಬುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು.
ಪೊಲೀಸ್ ಅನುಮತಿ ಕೊಟ್ಟಿರಲಿಲ್ಲ
ಸಂಭ್ರಮಾಚರಣೆಗೆ ಪೊಲೀಸ್ ಇಲಾಖೆ ಅನುಮತಿ ಕೊಟ್ಟಿರಲಿಲ್ಲ, ವಿಧಾನಸೌಧದ ಬಳಿ ಸಮಾರಂಭ ನಡೆಸಲು ರಾಜ್ಯ ಸರ್ಕಾರಕ್ಕೆ ಯಾರು ಅನುಮತಿ ಕೊಟ್ಟರು.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅನುಮತಿ ಕೊಟ್ಟಿರಲಿಲ್ಲ, ಕಾನೂನುಬಾಹಿರ ಕಾರ್ಯಕ್ರಮ ನಡೆದಿದೆ ಎಂಬುದಾಗಿ ಎಫ್ಐಆರ್ ಮಾಡಲಾಗಿದೆ, ಅನುಮತಿ ಇಲ್ಲದಿದ್ದರೂ ಉಪಮುಖ್ಯಮಂತ್ರಿ ಶಿವಕುಮಾರ್ ಚಿನ್ನಸ್ವಾಮಿ ಸ್ಟೇಡಿಯಂಗೆ ತೆರಳಿ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ, ಕಪ್ ಹಿಡಿದು ಮುತ್ತಿಕ್ಕುವ ಕೆಲಸ ಹೇಗೆ ಮಾಡಿದರು ಎಂದರು.
ವಿಜಯೋತ್ಸವ ಸರ್ಕಾರಕ್ಕೆ ಏಕೆ ಬೇಕಿತ್ತು ಎಂಬುದಾಗಿ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ, ಆರ್ಸಿಬಿ ಗೆಲುವು ಸಾಧಿಸಿದೆ, ಅದಕ್ಕೆ ಸರ್ಕಾರದ ಸಂಭ್ರಮಾಚರಣೆ ಏಕೆ ಎಂಬ ಪ್ರಶ್ನೆ ಮಾಡಿದ್ದಾರೆ ಎಂದರು.
ಜನರ ಹಿತಕ್ಕಾಗಿ ಬಿಜೆಪಿ ರಾಜಕೀಯ
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ರಾಜ್ಯದ ಜನರ ಹಿತಕ್ಕಾಗಿ ಬಿಜೆಪಿ ರಾಜಕೀಯ ಮಾಡುತ್ತದೆ ಎಂದರು.
ಕ್ರಿಕೆಟ್ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗೆ ಎಬಿಸಿಡಿನೂ ಗೊತ್ತಿಲ್ಲ, ಟ್ರೋಫಿ ಆಟಗಾರರ ಕೈಯಲ್ಲಿ ಇರಲಿಲ್ಲ, ಇವರ ಕೈಯಲ್ಲೇ ಇತ್ತು, ವರ್ಷಾನುಗಟ್ಟಲೇ ತಯಾರಿ ಮಾಡಿ ಆಟ ಆಡಿದ್ದು ಅವರು, ಆಟಗಾರರೂ ಬೇಜಾರಾಗಿ ಹೊರಟು ಹೋದರು, ವಿರಾಟ್ ಕೊಹ್ಲಿ, ಆರ್ಸಿಬಿ ತಂಡದ್ದು ಇದರಲ್ಲಿ ತಪ್ಪಿಲ್ಲ ಎಂದರು.


