90 ದಿನದೊಳಗೆ ವರದಿ ಪಡೆಯಲು ನಿರ್ಧಾರ
ಬೆಂಗಳೂರು : ರಾಜ್ಯದಲ್ಲಿ ಮತ್ತೊಮ್ಮೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ (ಜನಗಣತಿ) ಸಮೀಕ್ಷೆ ನಡೆಸುವ ಮಹತ್ವದ ನಿರ್ಧಾರವನ್ನು ಇಂದಿಲ್ಲಿ ಸೇರಿದ್ದ ಸಚಿವ ಸಂಪುಟ ಸಭೆ ಕೈಗೊಂಡಿದೆ.
ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂತರಾಜ್ ಅಧ್ಯಕ್ಷರಾಗಿದ್ದಾಗ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ವರದಿ ಸಲ್ಲಿಸಿ 10 ವರ್ಷ ಕಳೆದಿರುವುದರಿಂದ ಹಿಂದುಳಿದ ವರ್ಗಗಳ ಕಾಯಿದೆ ಸೆಕ್ಷನ್ 11ರ ಪ್ರಕಾರ 10 ವರ್ಷದ ಬಳಿಕ ಹೊಸ ಸಮೀಕ್ಷೆ ನಡೆಸಬೇಕೆಂಬುದಾಗಿ ತಿಳಿಸಲಾಗಿದೆ ಎಂದರು.
ಕಾಂಗ್ರೆಸ್ ವರಿಷ್ಠರ ಒತ್ತಡಕ್ಕೆ ಮಣಿದು ಹೊಸ ಸಮೀಕ್ಷೆ ನಡೆಸುತ್ತಿದ್ದೇವೆ ಎಂಬುದನ್ನು ತಳ್ಳಿಹಾಕಿದ ಮುಖ್ಯಮಂತ್ರಿ, ಹಿಂದುಳಿದ ವರ್ಗಗಳ ಆಯೋಗದ ಕಾನೂನಿನ ಪ್ರಕಾರ ಈ ನಿರ್ಧಾರ ಕೈಗೊಂಡಿದ್ದೇವೆ.
ಮಾಜಿ ಅಡ್ವೋಕೇಟ್ ಜನರಲ್ ಮಧುಸೂಧನ್ ನಾಯಕ್ ಅವರನ್ನು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇನ್ನೆರಡು-ಮೂರು ದಿನಗಳಲ್ಲಿ ಉಳಿದ ಸದಸ್ಯರ ನೇಮಕ ಮಾಡಲಾಗುವುದು, ಗೆಜೆಟ್ ಅಧಿಸೂಚನೆ ಹೊರಡಿಸಿದ ನಂತರದ 90 ದಿನಗಳೊಳಗೆ ವರದಿ ನೀಡುವಂತೆ ತಿಳಿಸಲಾಗುವುದು.
ಕಾಂತರಾಜ್ ವರದಿಯನ್ನು ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಹಾರಿಕೆ ಉತ್ತರ ನೀಡಿದ ಮುಖ್ಯಮಂತ್ರಿ, ಕಾನೂನಿನ ಪ್ರಕಾರ ಹೊಸ ಸಮೀಕ್ಷೆ ಮಾಡುತ್ತಿದ್ದೇವೆ 2001ರ ಜನಗಣತಿ ಪ್ರಕಾರ ರಾಜ್ಯದಲ್ಲಿ 6.11 ಕೋಟಿ ಜನಸಂಖ್ಯೆ ಇತ್ತು, 2015ರಲ್ಲಿ 6.35 ಕೋಟಿ ಜನಸಂಖ್ಯೆ ಇದೆ ಎಂಬುದಾಗಿ ಅಂದಾಜಿಸಲಾಗಿತ್ತು. ನಾನು ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಅಂದರೆ 2015ರಲ್ಲಿ ಜಾತಿಗಣತಿ ನಡೆಸಲು ಆಯೋಗವನ್ನು ಕೋರಲಾಗಿತ್ತು.
2015ರಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿ ಬಗ್ಗೆ ಸರ್ವೆ ನಡೆಸಲಾಗಿತ್ತು, 54 ಮಾನದಂಡ ಇಟ್ಟುಕೊಂಡು ಮನೆ ಮನೆಗೆ ತೆರಳಿ ಸರ್ವೆ ಮಾಡಿ ವರದಿ ಪಡೆದಿದ್ದೆವು. 1.60 ಲಕ್ಷ ಸಿಬ್ಬಂದಿ ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು. ಆಯೋಗ 5.98 ಕೋಟಿ ಜನರ ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆದರೆ, ಅಂತಿಮ ವರದಿ ಶಿಫಾರಸು ಸಲ್ಲಿಸುವ ವೇಳೆಗೆ ನಾನು ಅಧಿಕಾರದಲ್ಲಿ ಇರಲಿಲ್ಲ, ನಂತರ ಬಂದಂತಹ ಸರ್ಕಾರಗಳು ವರದಿ ಸ್ವೀಕರಿಸಿರಲಿಲ್ಲ ಎಂದು ಹೇಳಿದರು.
ನಂತರ ಕಾಂತರಾಜು ಸರ್ವೆ ದತ್ತಾಂಶ ಪಡೆದು ಜಯಪ್ರಕಾಶ್ ಹೆಗ್ಡೆ ವರದಿ ನೀಡಿದರು, 2024ರ ಫೆಬ್ರವರಿ 29ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವರದಿ ಕುರಿತು ಚರ್ಚಿಸಲಿಲ್ಲ. ಬಳಿಕ ವರದಿ ಸ್ವೀಕರಿಸಿ 2025ರಲ್ಲಿ ಸಂಪುಟದ ಮುಂದೆ ಮಂಡಿಸಲಾಯಿತು. ಸಚಿವರು ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ ಎಂದರು.
ಮೂರ್ನಾಲ್ಕು ಸಚಿವ ಸಂಪುಟ ಸಭೆಗಳಲ್ಲಿ ಚರ್ಚೆ ಮಾಡಿದ್ದೆವು. ವರದಿ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ಇಂದು ವಿಶೇಷ ಸಂಪುಟ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ 10 ವರ್ಷಗಳ ಹಿಂದಿನ ವರದಿ ಜಾರಿಗೊಳಿಸುವುದರಿಂದ ಎಲ್ಲರಿಗೂ ನ್ಯಾಯ ದೊರಕಿಸಲು ಸಾಧ್ಯವಿಲ್ಲ. ಅಲ್ಲದೆ, ಕಾನೂನಿನಲ್ಲೂ ಇದಕ್ಕೆ ಅವಕಾಶ ಇಲ್ಲವೆಂದ ನಂತರ ಮರುಸಮೀಕ್ಷೆ ನಡೆಸಲು ಸಂಪುಟ ತೀರ್ಮಾನ ಮಾಡಿದೆ.
ತೆಲಂಗಾಣ ಸರ್ಕಾರ 70 ದಿನಗಳಲ್ಲಿ ಸಮೀಕ್ಷೆ ನಡೆಸಿ ವರದಿ ಅನುಷ್ಟಾನಗೊಳಿಸಿದೆ. ನಾವೂ ಸಹಾ 90 ದಿನಗಳಲ್ಲಿ ಸಮೀಕ್ಷೆ ನಡೆಸಿ, ಹಿಂದುಳಿದ ವರ್ಗದವರನ್ನು ಗುರುತಿಸಿ ನ್ಯಾಯ ಕಲ್ಪಿಸಲಾಗುವುದು.
ಯಾವ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಸಬಹುದು ಅಥವಾ ಕೈಬಿಡಬಹುದು ಎಂಬ ನಿರ್ಧಾರ ಕೈಗೊಳ್ಳುವ ಪರಮಾಧಿಕಾರ ಆಯೋಗದ್ದಾಗಿರುತ್ತದೆ ಎಂದು ವಿವರಿಸಿದರು.

