ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯಲ್ಲಿ ಕುಳಿತು ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ, ಕುತಂತ್ರ ಮತ್ತು ಷಡ್ಯಂತ್ರ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಮುಖ್ಯಮಂತ್ರಿ ದೊಡ್ಡ ಮನಸ್ಸು ಮಾಡಿ, ಮುಜುಗರ ಬಿಟ್ಟು ಕೇಂದ್ರ ಸರ್ಕಾರ ಕರೆದ 16ನೇ ಹಣಕಾಸು ಆಯೋಗ ಸಭೆಯಲ್ಲಿ ಭಾಗವಹಿಸಿ, ರಾಜ್ಯದ ಪರ ವಿಚಾರಮಂಡನೆ ಮಾಡಿದ್ದಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಗ್ಯಾರಂಟಿಗಳ ಅನುಷ್ಠಾನಕ್ಕೆ ಹಣ ಇಲ್ಲ
ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿಯೇ ಅಥವಾ ಕಾಂಗ್ರೆಸ್ ಮುಖ್ಯಮಂತ್ರಿಯೇ ಎಂಬ ಸಂಶಯ ಮೂಡುತ್ತಿದೆ, ಗ್ಯಾರಂಟಿಗಳ ಅನುಷ್ಠಾನಕ್ಕೆ ಹಣ ಕ್ರೋಡೀಕರಿಸಲು ರಾಜ್ಯ ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ.
ಹಣಕಾಸು ಇಲ್ಲದೆ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ, ಕೇಂದ್ರದ ಮೇಲೆ ಆರೋಪ ಮಾಡುತ್ತಿದ್ದಾರೆ, ತೆರಿಗೆ ರೂಪದಲ್ಲಿ ಕರ್ನಾಟಕ 100 ರೂ. ಕೊಟ್ಟರೆ ಕೇವಲ 13 ರೂ. ವಾಪಸು ಬರುತ್ತದೆ ಎಂಬುದು ಅರ್ಧಸತ್ಯ.
ಕೇಂದ್ರದ ಅನುದಾನ ರಾಜ್ಯದಲ್ಲಿ ಸದ್ಬಳಕೆ ಆಗುತ್ತಿಲ್ಲ, ಕೇಂದ್ರ ಸರ್ಕಾರದ ಯೋಜನೆಗಳಿಗೆ ಕತ್ತರಿ ಹಾಕುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ, ತನ್ನ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ ಎಂದರು.
ವರದಿ ಅನುಷ್ಠಾನ ಆಗಲಿಲ್ಲ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜು ವರದಿ ಅನುಷ್ಠಾನಕ್ಕೆ ತರುವುದಾಗಿ ಹೇಳಿದ್ದರು, 4-5 ಕ್ಯಾಬಿನೆಟ್ ಸಭೆ ನಡೆದರೂ ಅನುಷ್ಠಾನ ಆಗಲಿಲ್ಲ.
ವರದಿ ಸಿದ್ಧಪಡಿಸಿ 10 ವರ್ಷ ಕಳೆದಿದೆ, ಅಂಕಿ-ಅಂಶಗಳು ಅವೈಜ್ಞಾನಿಕವಾಗಿವೆ, ಸಮೀಕ್ಷೆ ಹೊಸದಾಗಿ ನಡೆಸಲು ತೀರ್ಮಾನಿಸಲಾಗಿದೆ.
ವರದಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಸಚಿವರು ವಿರೋಧ ವ್ಯಕ್ತಪಡಿಸಿದ್ದರು, ಈಗ ಜ್ಞಾನೋದಯವಾಗಿದೆ.
ವಿಷಯಾಂತರ ಮಾಡಲು ಜಾತಿಗಣತಿ
ಆರ್ಸಿಬಿ ವಿಜಯೋತ್ಸವದ ಕಾಲ್ತುಳಿತದಲ್ಲಿ 11 ಕ್ರೀಡಾಭಿಮಾನಿಗಳು ಮೃತಪಟ್ಟ ಘಟನೆಯಿಂದ ವಿಷಯಾಂತರ ಮಾಡಲು ಜಾತಿಗಣತಿ ಪ್ರಸ್ತಾಪಿಸಿದರೂ ಏನೂ ಮಾಡಲು ಸಾಧ್ಯವಾಗಲಿಲ್ಲ.
ಕೇಂದ್ರ ಸರ್ಕಾರ ಜನಗಣತಿ ಜೊತೆ, ಜಾತಿ ಜನಗಣತಿಯನ್ನೂ ನಡೆಸುವುದಾಗಿ ಈಗಾಗಲೇ ಘೋಷಿಸಿದೆ, ಜಾತಿಗಣತಿ ನಡೆಸುವ ಅಧಿಕಾರ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದೇ ಎಂಬ ಅನುಮಾನಗಳು ಹೆಚ್ಚಾಗಿವೆ.
ಈ ವಿಷಯದಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಸಲು ಹೀಗೆ ಮಾಡುತ್ತಿದ್ದು, ತಾರ್ಕಿಕ ಅಂತ್ಯಕ್ಕೆ ಒಯ್ಯುವ ಮನಸ್ಸು ಸಿದ್ದರಾಮಯ್ಯ ಅವರಿಗೆ ಇಲ್ಲ.
ಹಿಂದೂಗಳೇ ಟಾರ್ಗೆಟ್
ಕೋಮು ನಿಗ್ರಹ ದಳ ರಚನೆ ಉದ್ದೇಶ ಹಿಂದೂಗಳನ್ನು ಟಾರ್ಗೆಟ್ ಮಾಡಿ, ಬಿಜೆಪಿ ಕಾರ್ಯಕರ್ತರನ್ನು ಬೆದರಿಸುವ ಷಡ್ಯಂತ್ರವಾಗಿದೆ.
ಇಂತಹ ಬೆದರಿಕೆಗಳಿಗೆ ಬಿಜೆಪಿ ಬಗ್ಗುವುದಿಲ್ಲ, ಸರ್ಕಾರದ ದಬ್ಬಾಳಿಕೆ ಕುತಂತ್ರ ಎದುರಿಸುತ್ತೇವೆ ಎಂದರು.

