ಬೆಂಗಳೂರು:ರಾಜ್ಯದ ಪ್ರತಿಯೊಂದು ಶಾಲೆಯಲ್ಲಿ ಕಡ್ಡಾಯವಾಗಿ ಪರಿಸರ, ಹವಾಮಾನ ವೈಪರೀತ್ಯ ಜಾಗೃತಿ ಕ್ಲಬ್ ರಚನೆಗೆ ಆದೇಶಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.
ವಿಶ್ವ ಪರಿಸರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಮ್ಯಾರಥಾನ್ಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ಶಾಲೆಯಲ್ಲಿ ಕನಿಷ್ಠ 25 ವಿದ್ಯಾರ್ಥಿಗಳನ್ನು ಒಳಗೊಂಡ ಜಾಗೃತಿ ಕ್ಲಬ್ ರಚನೆ ಮಾಡಬೇಕು, ಪ್ರಕೃತಿ ಉಳಿಸುವ ದೊಡ್ಡ ಹೋರಾಟ ಹಾಗೂ ವಿದ್ಯಾರ್ಥಿಗಳಲ್ಲಿ ಪರಿಸರ ಅರಿವು ಮೂಡಿಸಬೇಕು, ಮರ ಬೆಳೆಸಲು ಒಂದೊಂದು ಶಾಲೆ ಆಯಾ ಪ್ರದೇಶಗಳನ್ನು ದತ್ತು ಪಡೆಯಬೇಕು ಎಂದರು.
ಹಸಿರು ಮತ್ತು ಸ್ವಚ್ಚತೆ
ಹಸಿರು ಮತ್ತು ಸ್ವಚ್ಚತೆ ಸರ್ಕಾರದ ಧ್ಯೇಯ, ಮುಂದಿನ ಪೀಳಿಗೆಗೆ ಇದರ ಅರಿವು ಮೂಡಿಸುವುದು ಕರ್ತವ್ಯವಾಗಿದೆ, ಕರ್ನಾಟಕದ ದೊಡ್ಡ ಆಸ್ತಿ ನಮ್ಮ ಪ್ರಕೃತಿ, ಪರಿಸರದಿಂದ ಪ್ಲಾಸ್ಟಿಕ್ ನಿರ್ಮೂಲನೆ ನಮ್ಮ ಉದ್ದೇಶ ಮತ್ತು ಜವಾಬ್ದಾರಿಯಾಗಬೇಕು.
ಪ್ರತಿಯೊಬ್ಬ ವಿದ್ಯಾರ್ಥಿ ಒಂದು ಸಸಿ ದತ್ತು ಪಡೆಯಬೇಕು, ರಾಜ್ಯಾದ್ಯಂತ 50 ಸಾವಿರಕ್ಕೂ ಹೆಚ್ಚು ಮಕ್ಕಳು ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.
ದೆಹಲಿ, ಅಹಮದಾಬಾದ್ನಲ್ಲಿ ಎರಡು ದಿನಗಳ ಹಿಂದೆ 49 ಡಿಗ್ರಿವರೆಗೆ ಉಷ್ಣಾಂಶವಿತ್ತು, ಆಗ ಬೆಂಗಳೂರಲ್ಲಿ ಉಷ್ಣಾಂಶ 22 ರಿಂದ 23 ಡಿಗ್ರಿ ಇತ್ತು, ಇದೇ ನಮ್ಮ ಕರ್ನಾಟಕದ ಹಾಗೂ ಬೆಂಗಳೂರಿನ ಆಸ್ತಿ ಎಂದರು.
ಮನುಷ್ಯ ಪರಿಸರದ ಭಾಗ
ಮನುಷ್ಯನ ಜೀವನ ಪದ್ಧತಿ ಪ್ರಕೃತಿಯೊಂದಿಗೆ ಬೆಸೆದುಕೊಂಡಿದೆ, ನಾವೆಲ್ಲ ಪರಿಸರದ ಒಂದು ಭಾಗ, ಶುದ್ಧ ಗಾಳಿ, ನೀರು, ಪರಿಸರ ನಿರ್ಮಾಣ ನಮ್ಮೆಲ್ಲರ ಅತಿದೊಡ್ಡ ಜವಾಬ್ದಾರಿ.
ಪರಿಸರ ಉಳಿಸುವ ಅರಿವು ಯುವಜನಾಂಗಕ್ಕೆ ಬರಬೇಕು, ಪರಿಸರ ನಮ್ಮ ಮನೆ, ಅದನ್ನು ನಾಶ ಮಾಡದಂತೆ ನಾವೆಲ್ಲರೂ ಹೆಜ್ಜೆ ಹಾಕಬೇಕಿದೆ.
ಸುಮಾರು 5 ಸಾವಿರಕ್ಕೂ ಹೆಚ್ಚು ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ವಿಧಾನಸೌಧದ ಸುತ್ತಲೂ ನಡಿಗೆ ಮೂಲಕ ಜನರಲ್ಲಿ ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸಿದ್ದಾರೆ, ಶಾಲಾ ದಿನಗಳಲ್ಲಿ ನಾನು ಸಹಾ ಇಂತಹ ಕಾರ್ಯಕ್ರಮಗಳ ಭಾಗವಾಗಿದ್ದೆ, ಪರಿಸರ ದಿನಾಚರಣೆ ಮುಂದಿನ ಪೀಳಿಗೆಗಾಗಿ ಎಂದರು.
ಜಾಗೃತಿ ಕಾರ್ಯಕ್ರಮ
ವಿದ್ಯಾರ್ಥಿ ಹಾಗೂ ಯುವಸಮುದಾಯದಲ್ಲಿ ಪರಿಸರ ಪ್ರಜ್ಞೆ ಬೆಳೆಸಲು ಹಲವು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಅವರು ವಿದ್ಯಾರ್ಥಿಗಳೊಂದಿಗೆ “ಹಸಿರು ಉಳಿಸಿ, ಮರ ಬೆಳೆಸಿ, ಕಸ ತ್ಯಜಿಸಿ, ಮರ ಬೆಳೆಸಿ” ಎಂಬ ಘೋಷಣೆ ಕೂಗಿದರು.

