ಜೂನ್ ೨೩ರಂದು ಹಾಜರಾಗುವುದಾಗಿ ಪತ್ರ
ಬೆಂಗಳೂರು : ವಂಚನೆ ಆರೋಪಿ ಐಶ್ವರ್ಯಗೌಡ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರ, ಮಾಜಿ ಸಂಸದ ಡಿ.ಕೆ.ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ನೋಟಿಸ್ ನೀಡಿದೆ.
ಚಿನ್ನಾಭರಣ ಅಂಗಡಿ ಮಾಲಿಕರಿಗೆ ಕೋಟ್ಯಂತರ ರೂ. ವಂಚನೆ ವೇಳೆ ಸುರೇಶ್ ಹೆಸರನ್ನು ಬಳಸಿದ್ದ ಆರೋಪ ಐಶ್ವರ್ಯ ಗೌಡ ಮೇಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೋಲಿಸರು ತನಿಖೆ ನಡೆಸಿ, ಐಶ್ವರ್ಯ ಗೌಡ ಅವರನ್ನು ಬಂಧಿಸಿದ್ದರು.
ಕೋಟ್ಯಂತರ ರೂ. ಚಿನ್ನಾಭರಣ ವ್ಯವಹಾರಕ್ಕೆ ಸಂಬಂಧಿಸಿದಂತೆ ಇ.ಡಿ. ತನಿಖೆ ನಡೆಸುತ್ತಿದ್ದು, ಐಶ್ವರ್ಯ ನೀಡಿದ ಸುಳಿವು ಮತ್ತು ದಾಖಲೆ ಆಧರಿಸಿ ಸುರೇಶ್ ವಿಚಾರಣೆಗೆ ನೋಟಿಸ್ ನೀಡಿದೆ. ಜೂನ್ ೧೯ರಂದು ವಿಚಾರಣೆಗೆ ಬರುವಂತೆ ಸಮನ್ಸ್ ಜಾರಿ ಮಾಡಿದ್ದು, ಸುರೇಶ್ ಅಂದು ತಮಗೆ ಪೂರ್ವ ನಿಗದಿತ ಕಾರ್ಯಕ್ರಮ ಇರುವುದರಿಂದ ಜೂನ್ ೨೩ರಂದು ಹಾಜರಾಗುವುದಾಗಿ ಪತ್ರ ಬರೆದಿದ್ದಾರೆ.
ಈ ಮಧ್ಯೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಸುರೇಶ್, ತಮಗೂ ಐಶ್ವರ್ಯಗೌಡ ಚಿನ್ನಾಭರಣ ವಂಚನೆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ, ಅವರು ನಮ್ಮ ಕ್ಷೇತ್ರದವರಾಗಿದ್ದರಿಂದ ಒಂದೆರಡು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೆ ಎಂದರು.
ಐಶ್ವರ್ಯ ಗೌಡ ಮತ್ತು ತಮ್ಮ ನಡುವೆ ಯಾವುದೇ ಹಣಕಾಸಿನ ವ್ಯವಹಾರ ಇಲ್ಲ. ಇ.ಡಿ. ವಿಚಾರಣೆಗೆ ಕರೆದಿದ್ದು, ಏನು ಕೇಳುವರೆಂಬುದನ್ನು ಈಗಲೇ ಹೇಳಲಾಗದು. ಇ.ಡಿ. ವಿಚಾರಣೆಗೆ ಹಾಜರಾಗುವೆ, ಅವರು ಪ್ರಶ್ನೆಗಳನ್ನು ಕೇಳಿದ ನಂತರವಷ್ಟೇ ವಿಷಯ ಏನೆಂದು ತಿಳಿಯಲಿದೆ, ಅಲ್ಲಿವರೆಗೆ ಏನನ್ನೂ ಹೇಳಲಾಗದು ಎಂದು ಹೇಳಿದರು.
ಈ ಮಧ್ಯೆ, ಸಹೋದರ ಡಿ.ಕೆ.ಸುರೇಶ್ ಅವರಿಗೆ ಇ.ಡಿ. ಸಮನ್ಸ್ ಕುರಿತು ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇ.ಡಿ. ಸಮನ್ಸ್ ಬಂದಾಗ ನಮ್ಮ ಬ್ರದರ್ ಇರಲಿಲ್ಲ, ಮನೆಗೆ ಅಂಟಿಸಿ ಹೋಗ್ತೀವಿ ಎಂದರಂತೆ. ನಾನು ರಿಸೀವ್ ಮಾಡಿಕೊಳ್ಳಿ ಎಂದಿದ್ದೇನೆ. ನಮ್ಮ ಬ್ರದರ್ ಮತ್ತು ನಮ್ಮ ಹೆಸರು ಮಿಸ್ಯ್ಯೂಸ್ ಆಗ್ತಿದೆ ಅಂತ ಹೇಳಿದ್ರು, ಇದರ ಇನ್ವೆಸ್ಟಿಗೇಷನ್ ಆಗಬೇಕು ಅಂತ ರಿಕ್ವೆಸ್ಟ್ ಲೆಟರ್ ಕೊಟ್ಟಿದ್ದಾರೆ, ಪೋಲಿಸ್ನವರಿಗೆ ಕಂಪ್ಲೈಂಟ್ ಕೂಡ ಕೊಟ್ಟಿದ್ದಾರೆ.
ನಮ್ಮ ಬ್ರದರ್ ಇ.ಡಿ. ಮುಂದೆ ಹಾಜರಾಗಿ ತನಿಖೆಗೆ ಸಹಕರಿಸುತ್ತಾರೆ. ಇದೇ ರೀತಿ ಮೂರ್ನಾಲ್ಕು ಜನರಿಗೆ ಮೋಸ ಆಗಿದೆ. ನಮ್ಮ ಹೆಸರು ಹೇಳಿ, ಸಿಸ್ಟರ್ ಅಂತ ಹೇಳಿದ್ದಾರೆ. ಇದರ ತನಿಖೆ ಆಗಬೇಕು ಅಂತಲೂ ಹೇಳಿದ್ದೇವೆ. ನಾವು ಇ.ಡಿ.ಗೆ ಸಹಕಾರ ಕೊಡಲು ಸಿದ್ಧರಿದ್ದೇವೆ, ನಾವು ಈ ದೇಶದ ಕಾನೂನಿಗೆ ಗೌರವ ಕೊಡುತ್ತೇವೆ, ವಿಚಾರಣೆಗೆ ಸಹಕಾರ ಕೊಡುತ್ತೇವೆ. ಸಮಾಜಕ್ಕೆ ಮೋಸ ಮಾಡುವ ಜನರ ವಿರುದ್ಧ ಕ್ರಮಕ್ಕೆ ಸಹಕಾರ ನೀಡಲು ಬದ್ಧರಾಗಿದ್ದೇವೆ. ಜನರಿಗೆ ನ್ಯಾಯ ಒದಗಿಸೋದು ನಮ್ಮ ಕರ್ತವ್ಯ ಎಂದರು.

