ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷೆಯಂತೆ ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಹೆಜ್ಜೆ ಇಟ್ಟಿದ್ದು, ಕಳೆದ 11 ವರ್ಷಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಪರಿವರ್ತನೆ ತರಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಪ್ರತಿಪಾದಿಸಿದ್ದಾರೆ.
ಬೆಂಗಳೂರು ಉತ್ತರ ತಾಲ್ಲೂಕಿನ ನಗರೂರಿನ ಬಿಜಿಎಸ್ ಎಂಸಿಎಚ್ ಆವರಣದಲ್ಲಿ ವಿವಿ ಕ್ಯಾಂಪಸ್ ಉದ್ಘಾಟಿಸಿ ಮಾತನಾಡಿದ ಅವರು, ನರೇಂದ್ರ ಮೋದಿ 26 ವರ್ಷಗಳ ಹಿಂದೆ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಬಡವರಿಗೆ ಆರೋಗ್ಯ ಚಿಕಿತ್ಸಾ ವೆಚ್ಚ ಭರಿಸುವುದು ಬಹುದೊಡ್ಡ ಸವಾಲು ಎಂದು ಚಿಂತಿತರಾಗಿದ್ದರು, ಆ ಸವಾಲನ್ನು ಇದೀಗ ಕೇಂದ್ರ ಸರ್ಕಾರ ಸಾಕಾರಗೊಳಿಸಿದೆ, 60 ಕೋಟಿ ಜನರಿಗೆ ಪ್ರಧಾನಮಂತ್ರಿ ಆಯುಷ್ಮಾನ್ ಆರೋಗ್ಯ ವಿಮಾ ಯೋಜನೆಯಡಿ ಪ್ರತಿ ವರ್ಷ ಐದು ಲಕ್ಷ ರೂ. ಮೊತ್ತದಷ್ಟು ಉಚಿತ ಚಿಕಿತ್ಸೆ ದೊರೆಯುತ್ತಿದೆ ಎಂದರು.
ಪ್ರಧಾನಮಂತ್ರಿ ಜನೌಷಧಿ ಮಳಿಗೆಗಳಲ್ಲಿ ರಿಯಾಯಿತಿ ದರದಲ್ಲಿ ಔಷಧಿಗಳನ್ನು ಒದಗಿಸುತ್ತಿದ್ದೇವೆ, ಮಗುವಿನ ಗರ್ಭಾವಸ್ಥೆಯಿಂದ ಬೆಳೆದುದೊಡ್ಡವರಾಗುವ ತನಕ ಮಿಷನ್ ಇಂದ್ರ ಧನುಷ್ ಸೇರಿದಂತೆ ಹಲವು ಆರೋಗ್ಯ ಯೋಜನೆಗಳಡಿ ಆರೋಗ್ಯಪೂರ್ಣ ಸಮಾಜ ನಿರ್ಮಿಸಲಾಗುತ್ತಿದೆ.
ದೇಶದಲ್ಲಿ ನುರಿತ ವೈದ್ಯಕೀಯ ಸಿಬ್ಬಂದಿ
ಯೋಗ, ಯೋಗಕ್ಷೇಮ, ಲಸಿಕೆ ನೀಡುವ ಮೂಲಕ ಆರೋಗ್ಯವಂತ ವ್ಯಕ್ತಿಗಳನ್ನು ನಿರ್ಮಿಸಲು ಒತ್ತು ನೀಡಲಾಗಿದೆ, 2014ಕ್ಕೂ ಮುನ್ನ ದೇಶದಲ್ಲಿ 7 ಏಮ್ಸ್ ಗಳಿದ್ದವು, ಇದೀಗ ಅವುಗಳ ಸಂಖ್ಯೆ 23ಕ್ಕೆ ಏರಿಕೆಯಾಗಿದೆ, ವೈದ್ಯಕೀಯ ಕಾಲೇಜುಗಳ ಸಂಖ್ಯೆ 357೭ ರಿಂದ 780ಕ್ಕೆ, ವೈದ್ಯಕೀಯ ಸೀಟುಗಳ ಸಂಖ್ಯೆ 51 ಸಾವಿರದಿಂದ 1.18 ಲಕ್ಷ, ಪಿಜಿ ಸೀಟುಗಳು 31 ಸಾವಿರದಿಂದ 74 ಸಾವಿರಕ್ಕೆ ಏರಿಕೆಯಾಗಿದೆ, ಈ ಕ್ರಮಗಳಿಂದ ದೇಶದಲ್ಲಿ ನುರಿತ ವೈದ್ಯಕೀಯ ಸಿಬ್ಬಂದಿ ಪ್ರಮಾಣ ವೃದ್ಧಿಸಿದೆ ಎಂದರು.
ಆದಿ ಚುಂಚನಗಿರಿ ಮಠಕ್ಕೆ 1800 ವರ್ಷಗಳ ಹಿನ್ನೆಲೆಯಿದೆ, ಈ ಭವ್ಯ ಪರಂಪರೆಯನ್ನು ಡಾ.ನಿರ್ಮಲನಾನಂದನಾಥ ಸ್ವಾಮೀಜಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ, ಸೇವೆ, ಶಿಕ್ಷಣ, ಸಮರ್ಪಣೆಯಂತಹ ಉನ್ನತ ಮೌಲ್ಯಗಳನ್ನು ಪರಿಪಾಲಿಸುತ್ತಿದ್ದಾರೆ, ಬಡವರಿಗೆ ಉಚಿತ ಚಿಕಿತ್ಸೆ, ಅನ್ನದಾನ, ಶಿಕ್ಷಣ, ಆರೋಗ್ಯ, ರಕ್ಷಣೆ, ಆಧ್ಯಾತ್ಮಿಕತೆ, ಅನುಕಂಪ, ಅನುಬಂಧ ಎಂಬ ಆಧಾರಸ್ತಂಭಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಸೇವಾ ಮನೋಭಾವ, ನಮ್ಮ ಸಂಸ್ಕೃತಿ, ಧರ್ಮ ರಕ್ಷಣೆ ಜೊತೆಗೆ ಸಮಾಜವನ್ನು ಜೋಡಿಸುವ ಏಕತೆಯ ಕೆಲಸ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ, ಆಧುನಿಕ ಶಿಕ್ಷಣ ನೀಡುವ ಮೂಲಕ ಸಮಾಜ ಮತ್ತು ವಿಶ್ವದಲ್ಲಿ ಗೌರವಸ್ಥಾನ ದೊರಕಿಸಿಕೊಡುತ್ತಿದ್ದಾರೆ, ಇಲ್ಲಿ ಆತ್ಮ ಉತ್ಥಾನದ ಕೆಲಸ ನಡೆಯುತ್ತಿದ್ದು, ವೈಯಕ್ತಿಕ ಮತ್ತು ಸಮಾಜದ ಆತ್ಮ ಸುಧಾರಿಸುವ ಕಾರ್ಯವೂ ನಿರಂತರವಾಗಿ ಸಾಗಿದೆ.
ನ್ಯಾಕ್ಪ್ಲಸ್ ಮಾನ್ಯತೆ
ಆದಿಚುಂಚನಗಿರಿ ಮಹಾಸಂಸ್ಥಾನಕ್ಕೆ ಮಹೋನ್ನತ ಸ್ಥಾನ ತಂದುಕೊಟ್ಟ ಬಾಲಗಂಗಾಧರನಾಥ ಸ್ವಾಮೀಜಿ ಅವರನ್ನು ಸ್ಮರಿಸಲೇಬೇಕು, ಅವರು 40 ವರ್ಷಗಳಲ್ಲಿ ಹಲವಾರು ಆಸ್ಪತ್ರೆಗಳನ್ನು ನಿರ್ಮಿಸಿದ್ದು, ಅನಾಥಾಲಯ, ವಿದ್ಯಾಸಂಸ್ಥೆಗಳನ್ನು ಕಟ್ಟಿದ್ದಾರೆ, ಈ ಪರಂಪರೆ ಮುಂದುವರೆಯಲಿ, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗೆ ನ್ಯಾಕ್ಪ್ಲಸ್ ಮಾನ್ಯತೆ ದೊರೆತಿರುವುದು ಇಲ್ಲಿನ ಶಿಕ್ಷಣ ಗುಣಮಟ್ಟಕ್ಕೆ ಸೂಕ್ತ ನಿದರ್ಶನವಾಗಿದೆ.
ಬಡ ಮತ್ತು ಮಧ್ಯಮ ವರ್ಗದ ಜನರನ್ನು ಒಗ್ಗೂಡಿಸಿ ಡಾ.ನಿರ್ಮಲಾನಂದ ಸ್ವಾಮೀಜಿ ಕರ್ಮಯೋಗಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದರು.
ಡಾ.ನಿರ್ಮಲಾನಂದ ಸ್ವಾಮೀಜಿ ಮಾತನಾಡಿ, 1974ರಲ್ಲಿ ಸರಿಯಾದ ಆರೋಗ್ಯ ಸೇವೆ ಸಿಗದೇ ನಮ್ಮ ಗುರುಗಳು ದೇಹ ತ್ಯಾಗ ಮಾಡಿದಾಗ ನಮ್ಮ ಹಿಂದಿನ ಗುರುಗಳು ಮಾಡಿದ ಸಂಕಲ್ಪದಿಂದ ಹಲವಾರು ಆರೋಗ್ಯ, ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಸಾಧ್ಯವಾಯಿತು, ವಿವಿ ಸ್ಥಾಪನೆ ಮೂಲಕ ಬಾಲಗಂಗಾಧರನಾಥ ಸ್ವಾಮೀಜಿ ಕನಸು ನನಸಾಗಿದೆ ಎಂದರು.
ಪರಂಪರೆ ಉಳಿಸಬೇಕಾಗಿದೆ
ಅಮಿತ್ ಷಾ ದೊಡ್ಡ ಶಕ್ತಿ, ಮರ ಹಣ್ಣು, ಹೂವು ನೀಡಬೇಕಾದರೆ ಮರದ ಬೇರುಗಳು ಆಳವಾಗಿರಬೇಕಾಗುತ್ತದೆ, ಹಾಗೆಯೇ ಅಮಿತ್ ಷಾ ಗಟ್ಟಿತನದ ನಾಯಕರು, ನಮ್ಮ ದೇಶದ ಸಂಸ್ಕೃತಿ, ಪರಂಪರೆ ಶ್ರೇಷ್ಠವಾದದ್ದು, ಭಾರತ ಉಳಿದರೆ ಅಳಿಯುವರಾರು, ಭಾರತ ಅಳಿದರೆ ಉಳಿಯುವವರು ಯಾರು ಎಂಬ ಮಾತು ಅಕ್ಷರಶಃ ಸತ್ಯ, ನಮ್ಮಲ್ಲಿರುವ ಶತಮಾನಗಳ ಜ್ಞಾನ ಸಂಪತ್ತು ಮತ್ತು ಪರಂಪರೆ ಉಳಿಸಬೇಕಾಗಿದೆ ಎಂದರು.
ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ನೇತೃತ್ವದಲ್ಲಿ ದೇಶದ ಅಭಿವೃದ್ಧಿಗೆ ನಾವೆಲ್ಲರೂ ಕಠಿಣ ಪರಿಶ್ರಮದಿಂದ ಕೆಲಸ ಮಾಡುತ್ತಿದ್ದೇವೆ, ನಮ್ಮ ಇಲಾಖೆ ಸಮಸ್ಯೆಗಳಿಗೆ ಅಮಿತ್ ಷಾ ಸಲಹೆ ನೀಡಿ ಮಾರ್ಗದರ್ಶನ ಮಾಡುತ್ತಿದ್ದಾರೆ.
ಕರ್ನಾಟಕದ ಹಲವಾರು ಸಮಸ್ಯೆಗಳನ್ನು ನಾವು ಒಂದೊಂದಾಗಿ ಬಗೆಹರಿಸುತ್ತೇವೆ, ರಾಜ್ಯಕ್ಕೆ ಹೆಚ್ಚಿನ ಕೊಡುಗೆ ನೀಡಿದ ಮಠ ಇದಾಗಿದ್ದು, ಲಕ್ಷಾಂತರ ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಟ್ಟಿದೆ ಎಂದರು.
ಮಹತ್ವದ ಕೊಡುಗೆ
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮಾತನಾಡಿ, ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು, ಅಪಘಾತ ಮತ್ತು ಕ್ಯಾನ್ಸರ್ ಆಸ್ಪತ್ರೆ ಆರಂಭಿಸುವುದು ನಮ್ಮ ಗುರಿಯಾಗಿದೆ, ರಾಜ್ಯದಲ್ಲಿ ಶರಣ ಪರಂಪರೆ ಮುಂದುವರೆಸಿಕೊಂಡು ಹೋಗುತ್ತಿದ್ದು, ಮಠ, ಮಂದಿರಗಳು ಅನ್ನದಾನ, ಅಕ್ಷರ ದಾಸೋಹದ ಮೂಲಕ ಮಹತ್ವದ ಕೊಡುಗೆ ನೀಡುತ್ತಿವೆ ಎಂದರು.
ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ನಮ್ಮ ಪೀಠದ ಶ್ರೇಯೋಭಿವೃದ್ಧಿಗೆ ಆದಿಚುಂಚನಗಿರಿ ಮಠದ ಕೊಡುಗೆ ಅನನ್ಯ, ನಮ್ಮ ಗುರುಪೀಠವನ್ನು ಶಾಖಮಠದಂತೆ ಪೋಷಿಸಿ ಬೆಳೆಸುತ್ತಿದ್ದು, ಇದಕ್ಕಾಗಿ ನಾವು ಸದಾಕಾಲ ಋಣಿಯಾಗಿರುತ್ತೇವೆ, ನಮ್ಮ ಸಮಾಜವನ್ನು ಮುಖ್ಯವಾಹಿನಿಗೆ ತರುತ್ತೇವೆ, ಮಾದಿಗ ಸಮುದಾಯಕ್ಕೆ ಕೇಂದ್ರ ಸರ್ಕಾರ ಮೀಸಲಾತಿ ಕಲ್ಪಿಸಬೇಕು, ಈ ಹೊಸ ವಿವಿ ನಮ್ಮ ನಾಡಿಗೆ ಬಹುದೊಡ್ಡ ಕೊಡುಗೆಯಾಗಿದೆ ಎಂದರು.

