ಬೆಂಗಳೂರು:ಅತಿ ಶೀಘ್ರವೇ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಹೆಸರು ಘೋಷಣೆ ಆಗಲಿದೆ ಎಂದು ರಾಜ್ಯ ಘಟಕದ ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷ, ಕಳೆದ ಒಂದೂವರೆ ವರ್ಷದಲ್ಲಿ ಯಶಸ್ವಿಯಾಗಿ ಪಕ್ಷ ಸಂಘಟನೆ ಮಾಡಿರುವ ವಿಶ್ವಾಸ ನನ್ನಲ್ಲಿ, ಕಾರ್ಯಕರ್ತರಲ್ಲಿ ಹಾಗೂ ಮುಖಂಡರಲ್ಲೂ ಇದೆ, ಎಲ್ಲರಿಗೂ ಒಳ್ಳೆಯದಾಗಲಿದೆ ಎಂದರು.
ನೇಮಕಾತಿ ಗೊಂದಲವಿಲ್ಲ
ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕಾತಿ ವಿಚಾರದಲ್ಲಿ ಗೊಂದಲಗಳಿದ್ದು ಮುಂದೂಡಲಾಗುತ್ತಿದೆ ಎಂಬುದು ಸತ್ಯವಲ್ಲ, ಅತಿ ಶೀಘ್ರದಲ್ಲಿ ಕರ್ನಾಟಕ ಸೇರಿದಂತೆ ಆರೇಳು ರಾಜ್ಯಗಳ ಅಧ್ಯಕ್ಷರ ಹೆಸರು ಘೋಷಣೆ ಆಗಲಿದೆ.
ನಂತರ ರಾಷ್ಟ್ರೀಯ ಅಧ್ಯಕ್ಷರ ಘೋಷಣೆ ಆಗಲಿದೆ, ಕರ್ನಾಟಕಕ್ಕೆ ಮಾತ್ರ ಅಧ್ಯಕ್ಷರ ಘೋಷಣೆ ಆಗುತ್ತಿಲ್ಲ, ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿಕೆ ಅರ್ಧ ಸತ್ಯದಿಂದ ಕೂಡಿದೆ.
ಬಿಜೆಪಿ ಬೂದಿ ಮುಚ್ಚಿದ ಕೆಂಡದಂತಿದೆ ಎಂಬ ಸದಾನಂದಗೌಡ ಹೇಳಿಕೆ ನಾನು ಒಪ್ಪುವುದಿಲ್ಲ, ಪಕ್ಷದಲ್ಲಿ ಸಣ್ಣಪುಟ್ಟ ವ್ಯತ್ಯಾಸ ಇರುವುದು ಸಹಜ ಎಂದರು.
ಭಾರೀ ಬೆಳವಣಿಗೆ ಬರೀ ಕಲ್ಪನೆ
ವೈಯಕ್ತಿಕ ಕಾರಣಕ್ಕಾಗಿ ನಾನು ದೆಹಲಿಗೆ ಹೋಗಿದ್ದೆ, ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿಲ್ಲ, ರಾಜ್ಯದ ಕೆಲವು ಹಿರಿಯ ನಾಯಕರೂ ಹೋಗಿದ್ದಾರೆ, ಕೆಲವರು ಇನ್ನೂ ವಾಪಸ್ ಬರಬೇಕಿದೆ, ಕರ್ನಾಟಕಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಭಾರೀ ಬೆಳವಣಿಗೆಗಳು ಆಗುತ್ತಿವೆ ಎಂಬುದು ಬರೀ ಕಲ್ಪನೆ.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ದೆಹಲಿಗೆ ಹೋಗಬಾರದು, ನಮ್ಮ ಮುಖಂಡರನ್ನು ಭೇಟಿ ಮಾಡಬಾರದು ಎಂದರೆ ಆಗುತ್ತದೆಯೇ ಎಂದು ನಕ್ಕರು.
ವಿರೋಧ ಪಕ್ಷದ ನಾಯಕರಾಗಿ ಬಹಳ ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ, ಶಾಸಕರಿಗೂ ತೃಪ್ತಿ ಇದೆ, ಮಾಧ್ಯಮದಲ್ಲಿ ಮಾತ್ರ ವಿಪಕ್ಷ ನಾಯಕರ ಬದಲಾವಣೆ ಚರ್ಚೆ ನಡೆದಿದೆ, ಇದು ಸರಿಯಲ್ಲ, ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ.
ಸಣ್ಣಪುಟ್ಟ ಅಭಿಪ್ರಾಯ
ಹಿಂದಿನಿಂದ ಅಸಮಾಧಾನ ತೋಡಿಕೊಳ್ಳುತ್ತಿದ್ದವರು, ಪಕ್ಷ ವಿರೋಧಿ ಚಟುವಟಿಕೆ ಮಾಡಿದವರೂ ಹೊರಗಿದ್ದಾರೆ, ಇನ್ನೂ ಕೆಲವರು ತಮ್ಮ ಸಣ್ಣಪುಟ್ಟ ಅಭಿಪ್ರಾಯ ತಿಳಿಸಿದ್ದಾರೆ.
ಏನೇ ಸಮಸ್ಯೆಗಳಿದ್ದರೂ ಬಗೆಹರಿಸಿಕೊಳ್ಳುವ ಚರ್ಚೆ ನಡೆಸಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಜವಾಬ್ದಾರಿ ತೆಗೆದುಕೊಂಡಿದ್ದಾರೆ, ಎಲ್ಲವೂ ಸರಿಯಾಗಲಿದೆ, ಆತಂಕ ಪಡುವ ಯಾವುದೇ ವಿಚಾರ ಇಲ್ಲ ಎಂದರು.
ರಾಜ್ಯದ ಜನ ಕಾಂಗ್ರೆಸ್ ಸರ್ಕಾರಕ್ಕೆ ಛೀ, ಥೂ ಎಂದು ಉಗಿಯುತ್ತಿದ್ದಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನಿತ ಶಾಸಕರಾದ ಬಿ.ಆರ್.ಪಾಟೀಲ್, ರಾಜುಕಾಗೆ ಅವರನ್ನು ಕರೆದು ಮಾತನಾಡಿದಾಕ್ಷಣ ಎಲ್ಲವೂ ಸರಿಯಾಗಿದೆ ಎಂಬ ಅರ್ಥವೇ.
ವಸತಿ ಸಚಿವರ ಉಡಾಫೆ
ಬಿ.ಆರ್.ಪಾಟೀಲ್ ಒಬ್ಬ ಹಿರಿಯ ಶಾಸಕರು, ಬಡವರಿಗೆ ಮನೆ ಕೊಡಲು 10 ಸಾವಿರ ರೂ. ಲಂಚ ಕೇಳುತ್ತಿರುವ ಕುರಿತು ನೇರ ಆರೋಪ ಮಾಡಿದ್ದಾರೆ, ಇದಕ್ಕೆ ವಸತಿ ಸಚಿವರು ಉಡಾಫೆಯಾಗಿ ಉತ್ತರಿಸಿದ್ದಾರೆ.
ಇವರ ಯೋಗ್ಯತೆಗೆ ಅಭಿವೃದ್ಧಿ ಕೆಲಸ ಮಾಡಲು ಆಗುತ್ತಿಲ್ಲ, ಅತಿವೃಷ್ಠಿಯಿಂದ ರೈತರು ಪರದಾಡುತ್ತಿದ್ದಾರೆ, ರಸಗೊಬ್ಬರ ಸರಿಯಾಗಿ ಪೂರೈಕೆ ಆಗುತ್ತಿಲ್ಲ, ಬಿತ್ತನೆ ಬೀಜವೂ ಸಿಗುತ್ತಿಲ್ಲ.
ಈ ಸಮಸ್ಯೆಗಳನ್ನು ಗಮನಿಸುವ ಬದಲು ಹುಡುಗಾಟಿಕೆ, ಭ್ರಷ್ಟಾಚಾರ ಮಾಡಿಕೊಂಡು, ಅಧಿಕಾರದ ಅಮಲಿನಲ್ಲಿ ತೇಲುತ್ತಿದ್ದಾರೆ, ಇವರ ದರ್ಬಾರ್ ಬಹಳ ದಿನ ನಡೆಯದು ಎಂದರು.
ಪ್ರಜಾಪ್ರಭುತ್ವದ ಕಗ್ಗೊಲೆ
50 ವರ್ಷಗಳ ಹಿಂದೆ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದರು, ಎಲ್ಲರ ಹಕ್ಕುಗಳನ್ನು ಕಿತ್ತುಕೊಂಡು ಅನೇಕ ಹೋರಾಟಗಾರರನ್ನು ಜೈಲಿಗೆ ಅಟ್ಟಿದ್ದರು, ಮಾಧ್ಯಮಗಳ ಮೇಲೂ ದಬ್ಬಾಳಿಕೆ ಮಾಡಿದ್ದರು.
ಅಂತಹ ಕರಾಳ ದಿನಗಳು ಮತ್ತೆ ಮರುಕಳಿಸಬಾರದು ಎಂಬ ಆಶಯದೊಂದಿಗೆ ತುರ್ತು ಪರಿಸ್ಥಿತಿ ವಿರೋಧಿ ದಿನ ಆಚರಿಸಲಾಗುತ್ತಿದೆ ಎಂದರು.
ಸಾಮಾಜಿಕ ಜಾಲತಾಣದಲ್ಲಿ ನಕಲಿ ಸುದ್ದಿ ಹರಡುವವರು ಹಾಗೂ ಇಂತಹ ಟ್ವೀಟ್ ಮಾಡಿದವರ ವಿರುದ್ಧ ಎಫ್ಐಆರ್ ದಾಖಲಿಸಿ, ಜೈಲಿಗಟ್ಟುವ, ದಂಡ ವಿಧಿಸುವ ಗೂಂಡಾಗಿರಿಯಂತಹ ಗೊಡ್ಡು ಬೆದರಿಕೆ ಹಾಗೂ ದಬ್ಬಾಳಿಕೆಗೆ ಹೆದರುವ ಪ್ರಶ್ನೆಯೇ ಇಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೂರು ಎಫ್ಐಆರ್ ದಾಖಲಿಸಲಿ, ನಾವು, ನಮ್ಮ ಕಾರ್ಯಕರ್ತರು ಎದುರಿಸಲು ಸಿದ್ಧ ಎಂದರು.

