ಬೆಂಗಳೂರು:ವರ್ಷಾಂತ್ಯಕ್ಕೆ ರಾಜ್ಯ ಕಾಂಗ್ರೆಸ್ ಆಡಳಿತದಲ್ಲಿ ಮಹತ್ತರ ಬದಲಾವಣೆ ಆಗಲಿದೆ, ಆದರೆ, ಸಿದ್ದರಾಮಯ್ಯ ನಾಯಕತ್ವಕ್ಕೆ ಯಾವುದೇ ಧಕ್ಕೆ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಇಂದಿಲ್ಲಿ ಬಾಂಬ್ ಸಿಡಿಸಿದ್ದಾರೆ.
ಸತೀಶ್ ಅವರ ಹೇಳಿಕೆಯನ್ನು ಸಿದ್ದರಾಮಯ್ಯ ಆಪ್ತ ಸಚಿವರುಗಳಾದ ಕೆ.ಎನ್.ರಾಜಣ್ಣ ಮತ್ತು ಜಮೀರ್ ಅಹಮದ್ ಖಾನ್ ಬೆಂಬಲಿಸಿ ಮಾತನಾಡಿದ್ದಾರೆ.
ಮುಖ್ಯಮಂತ್ರಿ ಗೌಪ್ಯ ಸಭೆ
ಈ ಮಧ್ಯೆ ದೆಹಲಿಯಿಂದ ಹಿಂದಿರುಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ನಡೆಯಬೇಕಿದ್ದ ಮೈಸೂರು ದಸರಾ ಉನ್ನತಮಟ್ಟದ ಸಭೆ ಸೇರಿದಂತೆ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದು ಮಾಡಿ, ತಮ್ಮ ಆಪ್ತ ಸಚಿವರು ಮತ್ತು ಹಿರಿಯ ಶಾಸಕರೊಂದಿಗೆ ಗೌಪ್ಯ ಸಭೆ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ವರ್ಷಾಂತ್ಯಕ್ಕೆ ಬದಲಾವಣೆ ಆಗಲಿದೆ, ಹಾಗೆಂದು ಭಾರೀ ಬದಲಾವಣೆ ಇರುವುದಿಲ್ಲ.
ಸರ್ಕಾರದ ಮಟ್ಟದಲ್ಲಿ ಸಚಿವರ ಬದಲಾವಣೆ ಆಗಬಹುದು, ಆದರೆ, ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪರೋಕ್ಷವಾಗಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಮುಂದುವರೆಯಲಿದ್ದಾರೆ ಎಂಬ ಸುಳಿವು ನೀಡಿದರು.
ಆಂತರಿಕವಾಗಿ ಚರ್ಚೆ
ಮುಖ್ಯಮಂತ್ರಿ ಜೊತೆ ದೆಹಲಿ ಪ್ರವಾಸದಲ್ಲಿದ್ದೆ, ಬಹಳಷ್ಟು ರಾಜಕೀಯ ವಿಷಯಗಳು ಆಂತರಿಕವಾಗಿ ಚರ್ಚೆಯಾಗಿವೆ, ಅವುಗಳನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಆಗುತ್ತದೆಯೇ ಎಂಬ ಪ್ರಶ್ನೆಗೆ, ಇನ್ನೂ ಯುದ್ಧ ಶುರುವಾಗಿಲ್ಲ, ಆರಂಭವಾದಾಗ ಶಸ್ತ್ರ ಹಿಡಿಯೋಣ ಎಂದು ಮಾರ್ಮಿಕವಾಗಿ ನುಡಿದರು.
ರಾಜ್ಯ ಕಾಂಗ್ರೆಸ್ ನಾಯಕರ ಅರ್ಹತೆಯನ್ನು ವರಿಷ್ಠರು ತಿಳಿದಿದ್ದಾರೆ, ಮುಂದೆ ಅರ್ಹತೆಗೆ ತಕ್ಕಂತೆ ಅಧಿಕಾರ ಮತ್ತು ಹುದ್ದೆಗಳನ್ನು ನೀಡುತ್ತಾರೆ ಎಂದರು.
ವರಿಷ್ಠರಿಗೆ ಪೂರ್ಣ ಮಾಹಿತಿ
ಬಿ.ಆರ್.ಪಾಟೀಲ್ ಎತ್ತಿರುವ ಭ್ರಷ್ಟಾಚಾರ ವಿಷಯ ವರಿಷ್ಠರ ಮಟ್ಟದಲ್ಲಿ ಚರ್ಚೆಯಾಗಿದೆ, ಅದರ ಬಗ್ಗೆ ಮುಖ್ಯಮಂತ್ರಿ ಪೂರ್ಣ ಮಾಹಿತಿಯನ್ನು ನಮ್ಮ ನಾಯಕರುಗಳಿಗೆ ನೀಡಿದ್ದಾರೆ ಎಂದರು.
ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎನ್.ರಾಜಣ್ಣ, ಕಾಂಗ್ರೆಸ್ನಲ್ಲಿ ಪವರ್ ಸೆಂಟರ್ಗಳು ಜಾಸ್ತಿಯಾಗಿವೆ, ಇವು ಜಾಸ್ತಿಯಾದಷ್ಟೂ ನಮ್ಮ ಸಂಘಟನೆಗೆ ಒಳಿತಾಗಬಹುದೇನೋ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯಮಟ್ಟದಲ್ಲಿ ಏನೇ ನಿರ್ಧಾರ ಕೈಗೊಂಡರೂ ದೆಹಲಿಯ ಹಸಿರು ನಿಶಾನೆ ಬೇಕು, ಅದನ್ನು ಬಿಟ್ಟು ನಾವು ಇಲ್ಲಿ ಏನೂ ಮಾಡಲಾಗದು ಎಂದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷನಾಗಲು ಸಿದ್ಧ
ಸಿದ್ದರಾಮಯ್ಯ ಬದಲಾವಣೆ-ಗಿದಲಾವಣೆ ಎನ್ನುವುದೆಲ್ಲಾ ಮಾಧ್ಯಮದ ಸುದ್ದಿ, ನಾನಂತೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷನಾಗಲು ಸಿದ್ಧನಿದ್ದೇನೆ, ಅದಕ್ಕಾಗಿ ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧ.
ಪರಿಶಿಷ್ಟ ಪಂಗಡಕ್ಕೆ ಸೇರಿದ ನನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ವರಿಷ್ಠರಲ್ಲಿ ಮನವಿ ಮಾಡಿದ್ದೇನೆ, ಆದರೆ, ಎಲ್ಲವೂ ನಮ್ಮ ಪವರ್ ಸೆಂಟರ್ನಿಂದಲೇ ಆಗಬೇಕು.
ಪ್ರತ್ಯೇಕ ಪವರ್ ಸೆಂಟರ್
ಸಿದ್ದರಾಮಯ್ಯ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಪವರ್ ಸೆಂಟರ್ ಒಂದೇ ಆಗಿತ್ತು, ಆಗ, ಡಾ.ಜಿ.ಪರಮೇಶ್ವರ್ ಹಾಗೂ ದಿನೇಶ್ ಗುಂಡೂರಾವ್ ರಾಜ್ಯಾಧ್ಯಕ್ಷರಾಗಿದ್ದರು, ಹೊಂದಾಣಿಕೆಯಿಂದ ಹೋಗುತ್ತಿದ್ದೆವು ಎನ್ನುವ ಮೂಲಕ ಈಗ ಡಿ.ಕೆ.ಶಿವಕುಮಾರ್ ಪ್ರತ್ಯೇಕ ಪವರ್ ಸೆಂಟರ್ ಮಾಡಿಕೊಂಡಿದ್ದಾರೆ ಎಂದು ಪರೋಕ್ಷವಾಗಿ ತಿಳಿಸಿದರು.
ಏನೋ.., ಮುಂದೆ ದೆಹಲಿಯಲ್ಲಿ ನಮ್ಮನ್ನೆಲ್ಲಾ ಸರಿ ದಾರಿಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ, ಈಗ ಏನೇ ಮಾಡಿದರೂ ಏಕಪಕ್ಷೀಯ ನಿರ್ಧಾರ ಮಾಡಲು ಸಾಧ್ಯವಾಗದು, ಇದರಿಂದ ಮಹತ್ವದ ವಿಚಾರಗಳನ್ನು ತೆಗೆದುಕೊಳ್ಳಲು ಸರ್ಕಾರಕ್ಕೆ ಕಷ್ಟವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

