ಬೆಂಗಳೂರು:ಅಕ್ಟೋಬರ್-ನವೆಂಬರ್ ವೇಳೆಗೆ ರಾಷ್ಟ್ರ ರಾಜಕಾರಣಕ್ಕೆ ಬನ್ನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಸೂಚನೆ, ಮುಖ್ಯಮಂತ್ರಿ ಅವರ ಆಪ್ತ ಕೂಟದಲ್ಲಿ ತಲ್ಲಣ ಉಂಟು ಮಾಡಿದೆ.
ಕಳೆದ ನಾಲ್ಕೈದು ದಶಕಗಳಿಂದ ರಾಜ್ಯದಲ್ಲಿ ಎಲ್ಲಾ ಹಂತದ ಅಧಿಕಾರ ಸವಿದಿದ್ದೀರಿ, ಪಕ್ಷ ಸಂಘಟನೆ ಹಾಗೂ ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ನಿಮ್ಮ ಸೇವೆಯ ಅಗತ್ಯವಿದೆ ಬಂದುಬಿಡಿ ಎಂದು ಸೌಮ್ಯವಾಗಿ ಒಂದೇ ಮಾತಿನಲ್ಲಿ ರಾಹುಲ್ ಗಾಂಧಿ ಅವರ ಸಂದೇಶವನ್ನು ಸಿದ್ದರಾಮಯ್ಯ ಅವರಿಗೆ ಖರ್ಗೆ ತಲುಪಿಸಿದ್ದಾರೆ.
ರಾಷ್ಟ್ರ ರಾಜಕಾರಣಕ್ಕೆ ಬನ್ನಿ
ಆಪ್ತ ಸಚಿವರ ಜೊತೆಗೂಡಿ ಕಳೆದ ವಾರ ದೆಹಲಿಗೆ ತೆರಳಿದ ಸಂದರ್ಭದಲ್ಲಿ ಖರ್ಗೆ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದ ವೇಳೆ, ಎರಡೇ ಸಾಲಿನಲ್ಲಿ ಪರೋಕ್ಷವಾಗಿ ಅಧಿಕಾರ ಬಿಟ್ಟು ರಾಷ್ಟ್ರ ರಾಜಕಾರಣಕ್ಕೆ ಬನ್ನಿ ಎಂದಿದ್ದಾರೆ.
ಈ ಎರಡು ಸಾಲಿನ ಸಂದೇಶದ ನಂತರ ಖರ್ಗೆ, ಶಾಸಕರ ಧ್ವನಿಗೆ ಸ್ಪಂದಿಸಿ ತಕ್ಷಣವೇ ಬೇಡಿಕೆಗಳನ್ನು ಈಡೇರಿಸಿ ಎಂದಷ್ಟೇ ಹೇಳಿದ್ದಾರೆ. ಎಐಸಿಸಿ ಅಧ್ಯಕ್ಷರ ಸಂದೇಶ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೂ ತಲುಪಿತು.
ಅಷ್ಟೇ ಅಲ್ಲದೆ, ಎರಡು ದಿನಗಳ ರಾಜ್ಯ ಪ್ರವಾಸಕ್ಕೆ ಬಂದಿರುವ ಎಐಸಿಸಿ ಅಧ್ಯಕ್ಷರು, ನಿನ್ನೆ ರಾತ್ರಿ ಉಪಮುಖ್ಯಮಂತ್ರಿ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಸಮಾಲೋಚನೆ ಮಾಡಿದರು.
ಶಿವಕುಮಾರ್ಗೆ ಎಲ್ಲಿಲ್ಲದ ಉತ್ಸಾಹ
ಅಧ್ಯಕ್ಷರ ಭೇಟಿ ನಂತರ ಹೊರಬಂದ ಶಿವಕುಮಾರ್ ಅವರಲ್ಲಿ ಎಲ್ಲಿಲ್ಲದ ಉತ್ಸಾಹ ಕಂಡುಬಂದಿತು.
ಖರ್ಗೆ ಅವರ ಹೇಳಿಕೆ ಮುಖ್ಯಮಂತ್ರಿ ಜೊತೆಗೆ ದೆಹಲಿಗೆ ತೆರಳಿದ್ದ ಸಚಿವರಾದ ಕೆ.ಜೆ.ಜಾರ್ಜ್, ಡಾ.ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ ಅವರುಗಳಿಗೆ ದೊಡ್ಡ ಶಾಕ್ ನೀಡಿದೆ.
ಇವರುಗಳು ದೆಹಲಿಗೆ ತೆರಳಿದ ಉದ್ದೇಶವೇ ಬೇರೆ ಆಗಿತ್ತು, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಜೊತೆಗೆ ಸಿದ್ದರಾಮಯ್ಯ ಅವರನ್ನು ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿ ಮುಂದುವರೆಸಿ ಎಂದು ಪಕ್ಷದ ವರಿಷ್ಠರಿಗೆ ಮನವಿ ಮಾಡಿಕೊಳ್ಳಲು ನಿಷ್ಠಾವಂತ ಸಚಿವರು ಖರ್ಗೆ ಭೇಟಿ ಮಾಡಿದ್ದರು.
ಮಾತೇ ಹೊರಡದಂತಾಯಿತು
ಇದೆಲ್ಲವನ್ನು ಮೊದಲೇ ಅರಿತಿದ್ದ ಅನುಭವಿ ರಾಜಕಾರಣಿ ಖರ್ಗೆ, ಒಂದೇ ಮಾತಿನಲ್ಲಿ ಸಂದೇಶ ನೀಡುತ್ತಿದ್ದಂತೆ ಸಚಿವರುಗಳಿಗೆ ಬೇರೇ ಮಾತೇ ಹೊರಡದಂತೆ ಆಯಿತು.
ಖರ್ಗೆ ಅವರ ಹೇಳಿಕೆ ನಂತರ ನಗರಕ್ಕೆ ಹಿಂತಿರುಗಿದ ಸಚಿವರಾದ ಸತೀಶ್ ಜಾರಕಿಹೊಳಿ ಜೊತೆ ಕೆ.ಎನ್.ರಾಜಣ್ಣ ಸಹಾ ಸೆಪ್ಟೆಂಬರ್ಗೆ ರಾಜ್ಯ ರಾಜಕಾರಣದಲ್ಲಿ ಕ್ರಾಂತಿ ನಡೆಯಲಿದೆ ಎಂದಿದ್ದರು.
ಸರ್ಕಾರದಲ್ಲಿ ದೊಡ್ಡ ಬದಲಾವಣೆ
ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಜಾರಕಿಹೊಳಿ, ಸರ್ಕಾರದಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಆಗಲಿದೆ ಎಂದು ಹೇಳುವ ಮೂಲಕ ಅನುಮಾನಾಸ್ಪದ ಸಂದೇಶ ನೀಡಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿತು.

ದೆಹಲಿಯಿಂದ ಮುಖ್ಯಮಂತ್ರಿ ಹಿಂದಿರುಗುತ್ತಿದ್ದಂತೆ, ಕಾಂಗ್ರೆಸ್ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ತಲಾ 50 ಕೋಟಿ ರೂ. ಬಿಡುಗಡೆ ಮಾಡಿದರೆ, ಮತ್ತೊಂದೆಡೆ, ರಾಜ್ಯ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಕರ್ನಾಟಕಕ್ಕೆ ಆಗಮಿಸಿ, ಶಾಸಕರ ಮನದಾಳದ ಮಾತುಗಳನ್ನು ಆಲಿಸುತ್ತಿದ್ದಾರೆ.

