ಸ್ಯಾನ್ಹೋಸೆ(ಅಮೆರಿಕ):ಅಮೆರಿಕದ ಸ್ಯಾನ್ಹೋಸೆ ನಗರದ ಮೆಕನರಿ ಕನ್ವೆನ್ಷನ್ ಸೆಂಟರ್ನಲ್ಲಿ ಮೂರು ದಿನಗಳ 18ನೇ ವಿಶ್ವ ಒಕ್ಕಲಿಗ ಮಹಾಸಮ್ಮೇಳನಕ್ಕೆ ಅದ್ಧೂರಿ ಚಾಲನೆ ದೊರೆಯಿತು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಮಹಾಸಮ್ಮೇಳನ ಉದ್ಘಾಟಿಸಿ, ಆಶೀರ್ವಚನ ನೀಡಿ, ಒಕ್ಕಲಿಗ ಸಮುದಾಯ ಜ್ಞಾನ ಮತ್ತು ಸ್ವಸಾಮರ್ಥ್ಯದಿಂದ ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದು, ಅಮೆರಿಕ, ಯುರೋಪ್ ಸೇರಿದಂತೆ ಅನೇಕ ದೇಶಗಳಲ್ಲಿ ನೆಲೆಸಿದ್ದಾರೆ.
ಭಾರತಕ್ಕೆ ಮಹತ್ವದ ಕೊಡುಗೆ
ನೆಲೆಸಿದ ದೇಶ ಮತ್ತು ತಾಯ್ನಾಡು ಭಾರತಕ್ಕೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ, ಮಾತೃಭೂಮಿಯಿಂದ ಸಾವಿರಾರು ಕಿಲೋ ಮೀಟರ್ ದೂರದಲ್ಲಿ ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ, ಗೌರವ ಉಳಿಸಿ ಬೆಳೆಸುತ್ತಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ ಎಂದರು.
ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ಸಂಸ್ಕೃತಿ, ಕಲೆ, ಪರಂಪರೆಯ ಪ್ರದರ್ಶನದ ಜೊತೆಗೆ ವ್ಯಾಪಾರ ಉದ್ಯಮ ಸ್ಥಾಪನೆ, ವಿಸ್ತರಣೆ, ಸ್ಟಾರ್ಟಪ್ ಐಡಿಯಾಗಳು, ನೆಟ್ವರ್ಕಿಂಗ್, ಅಮೆರಿಕದಲ್ಲಿನ ಹೊಸ ಅವಕಾಶಗಳನ್ನು ಬಳಸಿಕೊಂಡು ಅಭಿವೃದ್ಧಿ ಕಾಣಲು ಸಮ್ಮೇಳನ ಮಹತ್ವದ ಪಾತ್ರ ವಹಿಸುತ್ತದೆ.
ಅಮೆರಿಕದಲ್ಲಿ ನೆಲೆಸಿರುವವರು, ಕರ್ನಾಟಕ ಸೇರಿದಂತೆ ಜಗತ್ತಿನ ವಿವಿಧ ಭಾಗಗಳಿಂದ ಆಗಮಿಸಿರುವವರು ಸಮ್ಮೇಳನದ ಸಂಪೂರ್ಣ ಪ್ರಯೋಜನ ಪಡೆದು ಮತ್ತಷ್ಟು ಅಭಿವೃದ್ಧಿ ಕಾಣುವರೆಂಬ ಸಂಪೂರ್ಣ ವಿಶ್ವಾಸವಿದೆ ಎಂದರು.
ಉದ್ಯಮ ಅವಕಾಶ
ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ಸಮ್ಮೇಳನದಲ್ಲಿ ಭಾಗವಹಿಸಿ ಅತ್ಯಂತ ಸಂತೋಷವಾಯಿತು, ಅಮೆರಿಕದಲ್ಲಿ ಒಕ್ಕಲಿಗ ಸಮುದಾಯ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿ ಸಂಸ್ಕೃತಿ, ಕಲೆ, ಪರಂಪರೆಯ ಪ್ರದರ್ಶನದ ಜೊತೆಗೆ ಉದ್ಯಮ ಅವಕಾಶಗಳು, ಬೆಳವಣಿಗೆ ಕುರಿತು ಚರ್ಚಿಸುವುದು ನಿಜಕ್ಕೂ ಶ್ಲಾಘನೀಯ, ಯಾವುದೇ ಸಮುದಾಯವಾಗಲಿ ಒಗ್ಗಟ್ಟಿನಿಂದ ಶ್ರಮಿಸಿದರೆ ಅಭಿವೃದ್ಧಿ ಕಾಣಬಹುದು ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದರು.

ವಿಶ್ವ ಒಕ್ಕಲಿಗ ಪರಿಷತ್ ಆಫ್ ಅಮೆರಿಕ ಅಧ್ಯಕ್ಷ ಧನಂಜಯ್ ಕೆಂಗಯ್ಯ ಮಾತನಾಡಿ, ಅಮೆರಿಕದಲ್ಲಿ ಒಕ್ಕಲಿಗರ ಸಮ್ಮೇಳನ ಆಯೋಜನೆಯೇ ಒಂದು ಹೆಮ್ಮೆಯ ಸಂಗತಿ, ಮೂಲತಃ ಕೃಷಿಕರಾಗಿರುವ ಒಕ್ಕಲಿಗ ಸಮುದಾಯ ಇಂದು ಜಗತ್ತಿನ ಮೂಲೆ ಮೂಲೆಯಲ್ಲಿದ್ದಾರೆ, ಅಮೆರಿಕದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಒಕ್ಕಲಿಗರು ಒಂದೆಡೆ ಸೇರುವುದರಿಂದ ಸಮುದಾಯದ ಬೆಳವಣಿಗೆಗೆ ಇನ್ನಷ್ಟು ಅನುಕೂಲವಾಗುತ್ತದೆ, ಮುಂದಿನ ದಿನಗಳಲ್ಲಿ ಸಮ್ಮೇಳನವನ್ನು ಮತ್ತಷ್ಟು ವಿಸ್ತಾರಗೊಳಿಸುವ ಉದ್ದೇಶವಿದೆ ಎಂದರು.
ಮಹಾಸಮ್ಮೇಳನವು ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಮಾಜಮುಖಿ ಹಬ್ಬವಾಗಿ ರೂಪುಗೊಂಡಿದ್ದು ವಿಶ್ವದ ವಿವಿಧೆಡೆ ನೆಲೆಸಿರುವ ಒಕ್ಕಲಿಗ ಸಮುದಾಯದ ಬಂಧುಗಳನ್ನು ಒಂದೆಡೆ ಸೇರಿಸುವ ಅಪೂರ್ವ ಸನ್ನಿವೇಶವಾಗಿದೆ.
ವೈವಿಧ್ಯಮಯ ಸಂಸ್ಕೃತಿ
ಸಮುದಾಯದ ಸದಸ್ಯರು, ವೈವಿಧ್ಯಮಯ ಸಂಸ್ಕೃತಿ, ಪರಂಪರೆಯ ಉತ್ಸವವನ್ನು ಜಗತ್ತಿಗೆ ಪ್ರದರ್ಶಿಸಿದರು.
ಒಕ್ಕಲಿಗರ ಸಂಸ್ಕೃತಿಯ ಬಣ್ಣನೆ, ಭಕ್ತಿಯ ಮೆರವಣಿಗೆ, ಸುಗ್ಗಿ ಕುಣಿತ, ದೇವರ ಉತ್ಸವ, ಕೋಲಾಟ, ವೇಷ-ಭೂಷಣಗಳ ಪ್ರದರ್ಶನ ಸ್ಯಾನ್ಹೋಸೆ ರಸ್ತೆಗಳಲ್ಲಿ ಜಾತ್ರಾ ಉತ್ಸವದ ರಂಗು ಮೂಡಿಸಿದವು.

ಸಾಂಸ್ಕೃತಿಕ, ಕಲಾ ಪ್ರದರ್ಶನಗಳ ಜೊತೆಗೆ ಮೂರು ದಿನಗಳ ಕಾರ್ಯಕ್ರಮದಲ್ಲಿ ಸಮುದಾಯ ವಧು-ವರರ ಪರಿಚಯ ವೇದಿಕೆ, ಉದ್ಯಮಿಗಳಿಗೆ ‘ಬಿಸಿನೆಸ್ ಫೋರಂ’, ಮಕ್ಕಳಿಗಾಗಿ ವಿವಿಧ ಸ್ಪರ್ಧೆ, ಮಹಿಳಾ ಚಟುವಟಿಕೆ ಸೇರಿದಂತೆ ಹಲವು ವಿಷಯಾಧಾರಿತ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿಶ್ವಾದ್ಯಂತ ಒಕ್ಕಲಿಗ ಸಮುದಾಯದ ಬಲವರ್ಧನೆ ಹಾಗೂ ಪರಸ್ಪರ ಸಹಕಾರಕ್ಕೆ ನಾಂದಿಯಾಗಿದೆ.
ಸಾವಿರಾರು ಕುಟುಂಬ ಭಾಗಿ
ಅಮೆರಿಕದ ವಿವಿಧ ರಾಜ್ಯಗಳು ಹಾಗೂ ಇತರ ದೇಶಗಳಿಂದ ಸಾವಿರಾರು ಕುಟುಂಬಗಳು ಭಾಗವಹಿಸಿದ್ದ ಸಮ್ಮೇಳನ, ವಿದೇಶಿ ನೆಲದಲ್ಲಿ ಸಮುದಾಯದ ಹೆಗ್ಗಳಿಕೆ ಅನಾವರಣಗೊಳಿಸಿದ್ದು, “ಒಕ್ಕಲಿಗ ಸಮಾಜ ಜಗತ್ತಿನ ಮೂಲೆ ಮೂಲೆಗೂ ತಲುಪಿದೆ” ಎಂಬುದನ್ನು ಸಾರುತ್ತಿದೆ.
ಶಾಸಕರಾದ ಎಸ್.ಟಿ.ಸೋಮಶೇಖರ್, ಸತೀಶ್ ರೆಡ್ಡಿ, ಗುಬ್ಬಿ ಶ್ರೀನಿವಾಸ್ ಹಾಗೂ ಒಕ್ಕಲಿಗ ಸಮುದಾಯದ ಮುಖಂಡ ಸಚ್ಚಿದಾನಂದ ಸೇರಿದಂತೆ ಹಲವು ಗಣ್ಯರು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.


