ಬೆಂಗಳೂರು:ನಮ್ಮ ಪೂರ್ವಜರ ಆಹಾರ ಪದ್ಧತಿ ಮುಂದುವರೆಸುವ ಮೂಲಕ ಹೃದಯಾಘಾತ ಅಪಾಯದಿಂದ ಪಾರಾಗಿ ಎಂದು ರಾಜ್ಯ ಸರ್ಕಾರ ಜನರನ್ನು ಎಚ್ಚರಿಸಿದೆ.
ರಾಜ್ಯದಲ್ಲಿ ಹೃದಯಾಘಾತ ಸಂಖ್ಯೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ತಜ್ಞರು ನೀಡಿದ ವರದಿ ಬಿಡುಗಡೆ ಮಾಡಿ, ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಜನತೆ ಪಾಶ್ಚಾತ್ಯ ದೇಶಗಳ ಆಹಾರ ಪದ್ಧತಿಗೆ ಹೋಗುತ್ತಿರುವುದೇ ಹಠಾತ್ ಹೃದಯಾಘಾತಗಳಿಗೆ ಕಾರಣವಾಗಿದೆ ಎಂದರು.
ಯುವಜನರಲ್ಲಿ ಹೆಚ್ಚು
ಹಾಸನ ಜಿಲ್ಲೆಯಲ್ಲಿ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಿವೆ, ಅದರಲ್ಲೂ, ಯುವಜನರಲ್ಲಿ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿವೆ.
ಕೋವಿಡ್ ಸಾಂಕ್ರಾಮಿಕಕ್ಕೆ ಒಳಗಾದವರು ಹಾಗೂ ಲಸಿಕೆ ಪಡೆದವರು ಹೆಚ್ಚಾಗಿ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎಂಬುದರಲ್ಲಿ ಸತ್ಯವಿಲ್ಲ, ನಮ್ಮ ಆಹಾರ ಪದ್ಧತಿಯಲ್ಲಿನ ಬದಲಾವಣೆಯೇ ಹೃದಯಾಘಾತಕ್ಕೆ ಕಾರಣವಾಗಿದೆ.
ಕೋವಿಡ್ ಲಸಿಕೆಗೂ ಸಾವು ಪ್ರಕರಣಗಳಿಗೂ ಸಂಬಂಧವಿಲ್ಲ, ವ್ಯಾಕ್ಸಿನ್ ಬಗ್ಗೆ ಅನುಮಾನ ಬೇಡ, ಎಲ್ಲಾ ಜಿಲ್ಲೆಗಳಲ್ಲಿ ಹೃದಯಾಘಾತ ಸಾವಿನ ಘಟನೆಗಳು ಒಂದೇ ರೀತಿ ಇವೆ, ಹಾಸನ ಜಿಲ್ಲೆ ಬೇರೆ ಅನ್ನೋದು ತಪ್ಪು ಎಂದರು.
ಆತಂಕ ಪಡುವ ಅಗತ್ಯವಿಲ್ಲ
ಜನರು ಆತಂಕಗೊಂಡು ಆಸ್ಪತ್ರೆಗಳಿಗೆ ಧಾವಿಸುವ ಅಗತ್ಯವಿಲ್ಲ, ಸರಾಸರಿ ಹೃದಯಾಘಾತ ಪ್ರಕರಣಗಳು ಕಳೆದ ವರ್ಷದಷ್ಟೇ ಇವೆ, ಪ್ರತಿ ವರ್ಷ ಆರೋಗ್ಯ ತಪಾಸಣೆಗೆ ಒಳಗಾಗುವುದು ಒಳ್ಳೆಯದು.
ಯೋಗಾಭ್ಯಾಸ ಮತ್ತು ನಿಯಮಿತ ವ್ಯಾಯಾಮಕ್ಕೆ ದಿನದಲ್ಲಿ ಒಂದು ಗಂಟೆ ಮೀಸಲಿಡಬೇಕು, ಯುವಜನರು ಧೂಮಪಾನ ಸೇರಿದಂತೆ ಕೆಟ್ಟ ವ್ಯಸನಗಳಿಂದ ದೂರ ಇರಬೇಕು, ರಸ್ತೆ ಬದಿ ಆಹಾರ ತಯಾರಿಕೆ ವಿಧಾನದ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುತ್ತಿದೆ.

ಆತಂಕ ಬಿಟ್ಟು ಉತ್ತಮ ಜೀವನಶೈಲಿ, ಅಗತ್ಯ ನಿದ್ರೆ ಮತ್ತು ವಿರಾಮ ತೆಗೆದುಕೊಳ್ಳಬೇಕು, ಹೃದಯಾಘಾತ ರೋಗ ಲಕ್ಷಣಗಳು ಕಂಡುಬಂದರೆ ಮಾತ್ರ ಆಸ್ಪತ್ರೆಗೆ ಧಾವಿಸಿ, ಸುಮ್ಮನೆ ಹೋಗಬೇಡಿ ಎಂದು ಕಿವಿಮಾತು ಹೇಳಿದರು.
ಒತ್ತಡದ ಬದುಕು
ಮಧುಮೇಹ, ರಕ್ತದೊತ್ತಡ, ವಾಯುಮಾಲಿನ್ಯ, ಆಹಾರ ಪದ್ಧತಿಯಲ್ಲಿನ ಬದಲಾವಣೆ, ಒತ್ತಡದ ಬದುಕು ಹೃದಯಾಘಾತಕ್ಕೆ ಕಾರಣವಾಗುತ್ತಿವೆ, ಯುವಜನರಲ್ಲೇ ಏಕೆ ಹೃದಯಾಘಾತ ಸಾವುಗಳು ಹೆಚ್ಚು ಆಗುತ್ತಿವೆ ಎಂಬ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ.
ಜನವರಿಯಲ್ಲಿ 178 ಜನರು ದಾಖಲಾಗಿದ್ದು, 11 ಜನ ಮೃತಪಟ್ಟಿದ್ದಾರೆ, ಫೆಬ್ರವರಿಯಲ್ಲಿ 181 ಜನ ದಾಖಲಾಗಿದ್ದು 10 ಜನ, ಮಾರ್ಚ್ನಲ್ಲಿ 200 ಜನರಲ್ಲಿ 9 ಜನ ಸಾವೀಗೀಡಾಗಿದ್ದಾರೆ, ಬೆಂಗಳೂರಲ್ಲಿ 2,165 ಜನರಲ್ಲಿ 101 ಜನ ಮೃತಪಟ್ಟಿದ್ದಾರೆ ಎಂದು ಅಂಕಿ-ಅಂಶ ನೀಡಿದರು.
ಮಕ್ಕಳಿಗೆ ಸ್ಕ್ರೀನಿಂಗ್ ಮಾಡುವ ಆಗತ್ಯ ಇಲ್ಲ, ಜನರಿಗೆ ಜಯದೇವ ಆಸ್ಪತ್ರೆಯಿಂದ ಅರಿವು ಮೂಡಿಸುವ ಕಾರ್ಯ ನಡೆಸಲಾಗುತ್ತಿದೆ ಎಂದರು.


