ಬೆಂಗಳೂರು:ಅಧಿಕಾರ ಹಂಚಿಕೆ ಸಮಯ ಹತ್ತಿರವಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ನಾಳೆಯಿಂದ ಜಿಲ್ಲಾವಾರು ಸಭೆಗೆ ಮುಂದಾಗಿದ್ದಾರೆ.
ತಮ್ಮ ತವರು ಮೈಸೂರು ಜಿಲ್ಲೆಯಿಂದ ಮೊದಲ್ಗೊಂಡು ನಾಲ್ಕು ದಿನಗಳ ಕಾಲ ರಾಜ್ಯದ ಎಲ್ಲಾ ಜಿಲ್ಲೆಗಳ ಶಾಸಕರ ಸಭೆ ಆಯೋಜಿಸಿದ್ದಾರೆ.
ಶಾಸಕರೊಂದಿಗೆ ಸಮಾಲೋಚನೆ
ವಿಧಾನಸೌಧದಲ್ಲಿ ನಾಳೆ ಸಂಜೆಯಿಂದ ಮೈಸೂರು, ಚಾಮರಾಜನಗರ, ಕೊಡಗು, ತುಮಕೂರು, ಹಾಸನ ಜಿಲ್ಲೆಯ ಪಕ್ಷದ ಶಾಸಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ, ಸಭೆಯಲ್ಲಿ ಆಯಾ ಜಿಲ್ಲೆಯ ಉಸ್ತುವಾರಿ ಸಚಿವರು ಭಾಗವಹಿಸಲಿದ್ದಾರೆ.
ಮುಖ್ಯಮಂತ್ರಿ ಸಮ್ಮುಖದಲ್ಲೇ ಶಾಸಕರು ತಮ್ಮ ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಲ್ಲದೆ, ಅಧಿಕಾರಿಗಳ ವರ್ಗಾವಣೆ, ಯಾವ ಇಲಾಖೆ ಸಚಿವರು ತಮ್ಮ ಅಹವಾಲಿಗೆ ಸ್ಪಂದಿಸುತ್ತಿಲ್ಲ ಎಂಬ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳಬಹುದಾಗಿದೆ.
ಕೆಲವು ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧವೇ ಆಗಿಂದಾಗ್ಯೆ ಅಪಸ್ವರ ಎತ್ತುತ್ತಿರುವ ಹಿನ್ನೆಲೆಯಲ್ಲಿ ಆ ಸಮಸ್ಯೆಗಳನ್ನೂ ಸ್ಥಳದಲ್ಲೇ ಪರಿಹರಿಸುವ ಮೂಲಕ ನಾಯಕತ್ವ ಭದ್ರಪಡಿಸಿಕೊಳ್ಳಲು ಮುಖ್ಯಮಂತ್ರಿ ಮುಂದಾಗಿದ್ದಾರೆ.
ಬಹಿರಂಗ ಅಪಸ್ವರ
ಸಚಿವರ ವಿರುದ್ಧ ಪಕ್ಷದ ಶಾಸಕರು ಬಹಿರಂಗವಾಗಿ ಅಪಸ್ವರ ಎತ್ತಿದ್ದಲ್ಲದೆ, ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ದೂರಿದ್ದರು.
ಈ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು ರಾಜ್ಯದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಕಳುಹಿಸಿ, ಸಚಿವರು ಮತ್ತು ಶಾಸಕರನ್ನು ಮುಖಾಮುಖಿ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿದ್ದರು.
ವರಿಷ್ಠರು ಮಧ್ಯಪ್ರವೇಶ ಮಾಡುತ್ತಿದ್ದಂತೆ ಮುಖ್ಯಮಂತ್ರಿ, ಆಡಳಿತ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ತಲಾ 50 ಕೋಟಿ ರೂ. ಬಿಡುಗಡೆ ಮಾಡಿ, ಹಣವನ್ನು ಯಾವ ರೀತಿ ಬಳಕೆ ಮಾಡಿಕೊಳ್ಳಬೇಕೆಂಬ ಮಾರ್ಗಸೂಚಿಯನ್ನೂ ನೀಡಿದ್ದರು.

ಶಾಸಕರಿಗೆ ಸುತ್ತೋಲೆ
ಕಾಮಗಾರಿಗೂ ಮುನ್ನ ತಮ್ಮ ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಿ ಕಾಮಗಾರಿ ವಿವರ ನೀಡಬೇಕು ಹಾಗೂ ತಮ್ಮನ್ನೂ ಭೇಟಿ ಮಾಡಬೇಕೆಂದು ಪಕ್ಷದ ಎಲ್ಲಾ ಶಾಸಕರಿಗೆ ಸುತ್ತೋಲೆ ಕಳುಹಿಸಿದ್ದರು.
ಈ ಮಧ್ಯೆ, ಸೆಪ್ಟೆಂಬರ್-ನವೆಂಬರ್ ವೇಳೆಗೆ ಅಧಿಕಾರ ಹಸ್ತಾಂತರ ಆಗಲಿದೆ ಎಂಬುದಾಗಿ ಆಡಳಿತಾರೂಢ ಕಾಂಗ್ರೆಸ್ ವಲಯದಲ್ಲಿ ದಟ್ಟ ವದಂತಿ ಹಬ್ಬಿದೆ.
ರಾಹುಲ್ ಭೇಟಿ ಸಾಧ್ಯವಾಗಿಲ್ಲ
ಇದರ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಭೇಟಿಗೆ ಮೂರು ಬಾರಿ ದೆಹಲಿಗೆ ತೆರಳಿದ್ದರು, ಆದರೂ ಭೇಟಿ ಸಾಧ್ಯವಾಗಿರಲಿಲ್ಲ.
ಪುನಃ ಆಗಸ್ಟ್ 1ರಂದು ರಾಹುಲ್ ಭೇಟಿಗೆ ಮುಖ್ಯಮಂತ್ರಿ ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದು, ಇದಕ್ಕೂ ಮುನ್ನ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮತ್ತು ಅವರ ಸಮಸ್ಯೆಗಳಿಗೆ ಸ್ಪಂದಿಸಲು ಸಭೆಗಳನ್ನು ನಡೆಸುತ್ತಿದ್ದಾರೆ.


