ರಾಜ್ಯಕ್ಕೆ 15 ದಿನದಲ್ಲಿ 1.35 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಪೂರೈಕೆ ಭರವಸೆ
ನವದೆಹಲಿ:ಕರ್ನಾಟಕಕ್ಕೆ ಅಗತ್ಯವಿರುವ 1.35 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರವನ್ನು ಮುಂದಿನ 15 ದಿನಗಳಲ್ಲಿ ಪೂರೈಸುವುದಾಗಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಜೆ.ಪಿ.ನಡ್ಡಾ ಭರವಸೆ ನೀಡಿದ್ದಾರೆ.
ನವದೆಹಲಿಯಲ್ಲಿಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದರಾದ ಗೋವಿಂದ ಕಾರಜೋಳ, ಕೋಟ ಶ್ರೀನಿವಾಸ ಪೂಜಾರಿ, ಡಾ.ಸಿ.ಎನ್.ಮಂಜುನಾಥ, ಪಿ.ಸಿ.ಗದ್ದಿಗೌಡರ, ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ರಾಜ್ಯದಲ್ಲಿ ರಸಗೊಬ್ಬರ ವಿತರಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಅಂಗಡಿಗಳ ಮುಂದೆ ಸಾಲು
ಕರ್ನಾಟಕದಲ್ಲಿ ರಸಗೊಬ್ಬರ ದಾಸ್ತಾನು ಇದೆ, ಆದರೆ, ರೈತರಿಗೆ ಸಿಗುತ್ತಿಲ್ಲ, ಶ್ರೀಮಂತ ರೈತರು ಹೆಚ್ಚು ಹಣ ನೀಡಿ ಖರೀದಿಸುತ್ತಿದ್ದಾರೆ, ಸಣ್ಣ ಮತ್ತು ಅತಿಸಣ್ಣ ರೈತರು ಅಂಗಡಿಗಳ ಮುಂದೆ ಸಾಲಿನಲ್ಲಿ ನಿಂತಿದ್ದಾರೆ.
ರಸಗೊಬ್ಬರ ಅಕ್ರಮ ದಾಸ್ತಾನು ಬೇಡಿಕೆ ಹೆಚ್ಚುವಂತೆ ಮಾಡಿದ್ದು, ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಮೂಲಕ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ.
ಯಾವ ಜಿಲ್ಲೆಗೆ ಎಷ್ಟು ರಸಗೊಬ್ಬರ ಬೇಡಿಕೆ ಇದೆ ಎಂಬ ಮಾಹಿತಿ ಕೃಷಿ ಅಧಿಕಾರಿಗಳಿಗಿಲ್ಲ, ದುರಾಡಳಿತ ವ್ಯವಸ್ಥೆಯಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ.
ಸಮರ್ಪಕ ನಿರ್ವಹಣೆ ಆಗಬೇಕು
ಕರ್ನಾಟಕದಲ್ಲಿ 1.35 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದ್ದು, ಸಮರ್ಪಕ ನಿರ್ವಹಣೆಯಿಂದ ಸಮಸ್ಯೆ ಪರಿಹಾರ ಆಗಲಿದೆ, ರಾಜ್ಯ ಸರ್ಕಾರ ಸೊಸೈಟಿಗಳ ಮೂಲಕ ರೈತರಿಗೆ ಹಂಚಿಕೆ ಮಾಡಬೇಕು.
ಬೇರೆ ರಸಗೊಬ್ಬರ ಖರೀದಿಸಿದರೆ ಯೂರಿಯಾ ಕೊಡುವುದಾಗಿ ಒತ್ತಡ ಹೇರಬಾರದು ಎಂಬ ಕೇಂದ್ರ ಸರ್ಕಾರದ ಆದೇಶ ಇದ್ದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.
ಬೇರೆ ರಸಗೊಬ್ಬರ ಖರೀದಿಗೆ ಲಿಂಕ್ ಮಾಡಿ ಯೂರಿಯಾ ಮಾರಾಟ ಮಾಡುವವರ ಪರವಾನಗಿ ರದ್ದು ಪಡೆಸುವಂತೆಯೂ ಕೇಂದ್ರ ಸರ್ಕಾರ ಸೂಚನೆ ಕೊಟ್ಟಿದೆ, ರಾಜ್ಯ ಸರ್ಕಾರ ಈ ಸೂಚನೆ ಪಾಲಿಸಬೇಕು.

ರಾಜ್ಯ ಸರ್ಕಾರ ವಿಫಲ
ಕಳೆದ ವರ್ಷ ಎಷ್ಟು ರಸಗೊಬ್ಬರ ಬಳಕೆಯಾಗಿತ್ತು ಎಂಬ ಲೆಕ್ಕಚಾರದಲ್ಲಿ ಪ್ರಸಕ್ತ ಸಾಲಿನ ಅಗತ್ಯತೆ ಅಂದಾಜು ಮಾಡಿ ದಾಸ್ತಾನು ಇಟ್ಟುಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದರು.
ಈ ಬಾರಿ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆಯಿಂದಾಗಿ ರೈತರು ಕೃಷಿ ಚಟುವಟಿಕೆಯನ್ನು ಮೊದಲೇ ಆರಂಭಿಸಿದ್ದು, ಪದೇ ಪದೇ ಮಳೆ ಬಿದ್ದಿದ್ದರಿಂದ ಜಮೀನಿಗೆ ಹಾಕಿದ ಯೂರಿಯಾ ವ್ಯರ್ಥವಾಗಿ ಮತ್ತೊಮ್ಮೆ ಹಾಕಲು ಮುಂದಾಗಿದ್ದೇ ಕೊರತೆ ಹೆಚ್ಚಾಗಲು ಕಾರಣವಾಯಿತು.
ಮೆಕ್ಕೆ ಜೋಳ ಬಿತ್ತನೆ ಪ್ರದೇಶ ಶೇ.1.5ರಷ್ಟು ಹೆಚ್ಚಳವಾಗಿದೆ, ಇದು ಕೃಷಿ ಇಲಾಖೆಗೂ ಗೊತ್ತಿದೆ, ಜೂನ್ 3ನೇ ವಾರದಿಂದಲೇ ರಸಗೊಬ್ಬರ ಬೇಡಿಕೆ ಪ್ರಾರಂಭವಾಗಿದೆ.
ಎಂಟತ್ತು ಜಿಲ್ಲೆಗಳಲ್ಲಿ ಅಭಾವ
ರಾಜ್ಯದ ಸುಮಾರು ಎಂಟತ್ತು ಜಿಲ್ಲೆಗಳಲ್ಲಿ ರಸಗೊಬ್ಬರ ಅಭಾವ ತೀವ್ರವಾಗಿದೆ, ಮೂರ್ನಾಲ್ಕು ಜಿಲ್ಲೆಗಳಲ್ಲಿ ಸಾಮಾನ್ಯವಾಗಿದೆ.
ಜುಲೈ ಅಂತ್ಯದವರೆಗೆ 6.25 ಲಕ್ಷ ಮೆಟ್ರಿಕ್ ಟನ್ ಪೂರೈಕೆ ಆಗಬೇಕಿದ್ದು, ಕೇಂದ್ರ ಈಗಾಗಲೇ 5.35 ಲಕ್ಷ ಮೆಟ್ರಿಕ್ ಟನ್ ಕೊಟ್ಟಿದೆ.
ಕರ್ನಾಟಕಕ್ಕೆ 8.82 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಪೈಕಿ 7.74 ಲಕ್ಷ ಮೆಟ್ರಿಕ್ ಟನ್ ವಿತರಣೆಯಾಗಿದೆ ಎಂಬ ವರದಿ ಕಳುಹಿಸಿದ್ದು, ಇದರರ್ಥ ರಾಜ್ಯದ ಬಳಿ ಬಫರ್ ಸ್ಟಾಕ್ ಇತ್ತು, ಈಗ ಕೇಂದ್ರ ಕೊಡಬೇಕಿರುವುದು 1.35 ಲಕ್ಷ ಮೆಟ್ರಿಕ್ ಟನ್.

ಕೇಂದ್ರ ಸಚಿವರ ಭರವಸೆ
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಜೆ.ಪಿ. ನಡ್ಡಾ ಬಳಿಗೆ ಸಂಸದರ ನಿಯೋಗ ತೆರಳಿ ಸಮಸ್ಯೆ ಕುರಿತು ಚರ್ಚಿಸಿದ್ದು, ಕರ್ನಾಟಕಕ್ಕೆ ತಕ್ಷಣಕ್ಕೆ 1.35 ಲಕ್ಷ ಮೆಟ್ರಿಕ್ ಟನ್ ಯುರಿಯಾ ಕಳುಹಿಸುವ ಭರವಸೆ ನೀಡಿದ್ದು, ಮೂರ್ನಾಲ್ಕು ಕಂಪನಿಗಳಿಗೂ ಸೂಚಿಸುವುದಾಗಿ ತಿಳಿಸಿದ್ದಾರೆ.
ಕೇಂದ್ರದಿಂದ ಸರಬರಾಜಾದ ರಸಗೊಬ್ಬರವನ್ನು ಬೇಡಿಕೆಗೆ ತಕ್ಕಂತೆ ಆಯಾ ಪ್ರದೇಶಗಳಿಗೆ ಪೂರೈಕೆ ಮಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ.
ರೈತರು ಸರತಿ ಸಾಲಿನಲ್ಲಿ ನಿಲ್ಲದೇ ಅಗತ್ಯ ರಸಗೊಬ್ಬರ ಪಡೆದುಕೊಳ್ಳುವಂತೆ ನಿಗಾ ವಹಿಸಬೇಕು, ಅಕ್ರಮ ದಾಸ್ತಾನು ಹಾಗೂ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಮಳಿಗೆಗಳ ಮೇಲೆ ದಾಳಿ ನಡೆಸಿ ತಪ್ಪಿತಸ್ತರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು, ಪರವಾನಗಿ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.



