ಬೆಂಗಳೂರು:ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಾಗದೆ ಸತತ ಸೋಲಿನ ಹತಾಶೆಯಲ್ಲಿರುವ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಚುನಾವಣಾ ಅಕ್ರಮದ ಹೊಸ ನಾಟಕ ಆಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಬೆಂಗಳೂರಿಗೆ ಬಂದು ಚುನಾವಣಾ ಅಕ್ರಮ ಆರೋಪ ಹೊರಿಸಿ ಪ್ರತಿಭಟನೆ, ಪಾದಯಾತ್ರೆ, ಧರಣಿ ನಡವಳಿಕೆ ಗಮನಿಸಿದರೆ ಅಯ್ಯೋ ಪಾಪ ಅನಿಸುತ್ತದೆ, ಒಮ್ಮೆ ಚುನಾವಣಾ ಆಯೋಗದ ಮೇಲೆ ಮತ್ತೊಮ್ಮೆ ಸುಪ್ರೀಂಕೋರ್ಟ್ ಮೇಲೆ ಅನುಮಾನ ವ್ಯಕ್ತಪಡಿಸುತ್ತಾರೆ.
ಬರೀ ಆರೋಪ
ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಳಿ ಚುನಾವಣಾ ಅಕ್ರಮ ನಡೆದ ಪುರಾವೆ ಇದ್ದರೆ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಿ, ಬರೀ ಆರೋಪದಿಂದ ಏನೂ ಸಾಧನೆ ಮಾಡಲಾಗದು.
ಚುನಾವಣಾ ಆಯೋಗವನ್ನು ಬಿಜೆಪಿ ದುರ್ಬಳಕೆ ಮಾಡಿಕೊಂಡಿದ್ದರೆ ಕರ್ನಾಟಕದಲ್ಲಿ ನಾವು ವಿರೋಧಪಕ್ಷದ ಸ್ಥಾನದಲ್ಲಿ ಕೂರುತ್ತಿರಲಿಲ್ಲ, ಕಾಂಗ್ರೆಸ್ 66 ಸ್ಥಾನ ಪಡೆದರೆ, ಬಿಜೆಪಿ 136 ಸ್ಥಾನಗಳಲ್ಲಿ ಗೆದ್ದು ಅಧಿಕಾರದಲ್ಲಿ ಇರುತ್ತಿತ್ತು ಎಂದರು.
ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದು ಹೇಗೆ, ಚುನಾವಣಾ ಅಕ್ರಮ ಆರೋಪ ಮೂರ್ಖತನದ ಪರಮಾವಧಿ, ಕಾಂಗ್ರೆಸ್ ಪಕ್ಷ ಮೂರ್ಖರ ಪಕ್ಷ.
ಗೆಲುವು ಹೇಗೆ ಸಾಧ್ಯ
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ 19 ಸ್ಥಾನ ಗೆದ್ದಿವೆ, ಅಕ್ರಮ ನಡೆದಿದ್ದರೆ ರಾಯಚೂರು, ದಾವಣಗೆರೆಯಲ್ಲಿ ಕಾಂಗ್ರೆಸ್ ಗೆಲುವು ಹೇಗೆ ಸಾಧ್ಯವಾಯಿತು.
ಹುಚ್ಚಾಟ, ರಂಪಾಟದ ಮೂಲಕ ಸಂವಿಧಾನಿಕ ಸಂಸ್ಥೆ ಬಗ್ಗೆ ಅನುಮಾನ ವ್ಯಕ್ತಪಡಿಸುವುದು ಅಪಾಯಕಾರಿ ಬೆಳವಣಿಗೆ, ಅಕ್ಷಮ್ಯ ಅಪರಾಧ ಎಂದರು.
ರಾಹುಲ್ ಗಾಂಧಿ ಬೆಂಗಳೂರಿಗೆ ಬಂದು ಅದೇನು ಕಡಿದು ಕಟ್ಟೆ ಹಾಕುತ್ತಾರೆಂದು ನಾವೂ ನೋಡುತ್ತೇವೆ, ನಾವು ಕಾರ್ಯತಂತ್ರ ರೂಪಿಸುತ್ತೇವೆ.
ನಾವೂ ಹೋರಾಟ ಮಾಡುತ್ತೇವೆ
ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆಗೆ ಮುಂದಾದರೆ ಪೋಲಿಸ್ ಕಮೀಷನರ್ ಹೈಕೋರ್ಟ್ನ ಆದೇಶ ತೋರಿಸುತ್ತಾರೆ, ಸಿದ್ದರಾಮಯ್ಯ ಎಲ್ಲಿಂದ ಬೇಕಾದರೂ ಪಾದಯಾತ್ರೆ ಮಾಡಬಹುದು, ರಾಹುಲ್ ಗಾಂಧಿ ಮೆರವಣಿಗೆ ಮಾಡಬಹುದು, ನಮಗೊಂದು ಕಾನೂನು, ಅವರಿಗೊಂದು ಕಾನೂನು ಇರಲು ಸಾಧ್ಯವಿಲ್ಲ, ಅವರಿಗೆ ಅವಕಾಶ ನೀಡಿದರೆ ನಾವೂ ಹೋರಾಟ ಮಾಡುತ್ತೇವೆ.
ರಾಹುಲ್ ಗಾಂಧಿ ಹತಾಶರಾಗಿದ್ದು, ಅವರಿಗೆ ದಿಕ್ಕು ತೋಚುತ್ತಿಲ್ಲ, ಒಂದೆಡೆ ನ್ಯಾಷನಲ್ ಹೆರಾಲ್ಡ್ ಕೇಸ್ನಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ, ದೇಶದ ಯಾವುದೇ ರಾಜ್ಯದಲ್ಲಿ ಅವರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದರಿಂದ ಇಲ್ಲಿಗೆ ಬಂದು ಪುಂಗಿ ಊದುವ ಕೆಲಸ ಮಾಡುತ್ತಿದ್ದಾರೆ, ಬರಲಿ ಎಂದರು.

ರಾತ್ರೋರಾತ್ರಿ ದೆಹಲಿಗೆ
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನಡುವೆ ಬಿಕ್ಕಟ್ಟು ಕಾಣುತ್ತಿದೆ, ಮೈಸೂರಿನಲ್ಲಿ ನಡೆದಿದ್ದು ಕಾಂಗ್ರೆಸ್ ಸಾಧನೆ ಅಲ್ಲ, ಸಿದ್ದರಾಮಯ್ಯ ಸಾಧನಾ ಸಮಾವೇಶ, ಇಲ್ಲಿ ಶಿವಕುಮಾರ್ ವೇದಿಕೆ ಬಿಟ್ಟು ನಡೆದು ಹೋದುದನ್ನು ನೋಡಿದ್ದೀರಿ, ರಾತ್ರೋರಾತ್ರಿ ದೆಹಲಿಗೂ ಹೋದರು.
ಆಡಳಿತ ಪಕ್ಷದ ಶಾಸಕರ ಮಧ್ಯೆ ವ್ಯತ್ಯಾಸ ಕಾಣಿಸುತ್ತಿದೆ, ಮುಖ್ಯಮಂತ್ರಿಗಳ ಬಗ್ಗೆ ವಿಶ್ವಾಸ ಕಳೆದುಹೋಗಿದೆ, ಸಿದ್ದರಾಮಯ್ಯ ವಿಚಲಿತರಾಗಿ ಮತ್ತೆ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಇವತ್ತಿಗೂ ಅನುದಾನ ಇಲ್ಲ
ಶಾಸಕರಿಗೆ ತಲಾ 50 ಕೋಟಿ ರೂ. ಅನುದಾನ ಬಿಡುಗಡೆ ಕುರಿತು ಸಿದ್ದರಾಮಯ್ಯ ಹೇಳಿಕೆ ನೀಡಿ ಒಂದು ವಾರ ಕಳೆಯುತ್ತಾ ಬಂದಿದೆ, ಆಡಳಿತ ಶಾಸಕರಿಗೆ ಇವತ್ತಿಗೂ ಅನುದಾನ ಬಿಡುಗಡೆ ಆಗಿಲ್ಲ.
ವಿರೋಧಪಕ್ಷದ ಶಾಸಕರಿಗೆ ತಲಾ 25 ಕೋಟಿ ರೂ. ಎಂಬುದು ಊಹಾಪೋಹ, ಒಟ್ಟಾರೆ ಮುಂದಿನ ದೀಪಾವಳಿಗೆ ಕರ್ನಾಟಕದಲ್ಲಿ ಧಮಾಕಾ ಆಗುವುದು ಸತ್ಯ, ರಷ್ಯಾ-ಉಕ್ರೇನ್ ಯುದ್ಧ ನಿಲ್ಲಬಹುದು, ಆದರೆ, ಇಲ್ಲಂತೂ ಯುದ್ಧ ಪ್ರಾರಂಭ ಆಗಲಿದೆ ಎಂದರು.



