ಬೆಂಗಳೂರು:ಹೈಕೋರ್ಟ್ ಇಂದು ಮತ್ತೊಮ್ಮೆ ಚಾಟಿ ಬೀಸಿದ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ನಾಲ್ಕು ನಿಗಮಗಳ ನೌಕರರ ಮುಷ್ಕರ ಹಿಂಪಡೆಯಲಾಗಿದೆ.
ನ್ಯಾಯಾಲಯ ಚಾಟಿ ಬೀಸುತ್ತಿದ್ದಂತೆ ಸಾರಿಗೆ ಸಂಸ್ಥೆ ನೌಕರರ ಒಕ್ಕೂಟದ ಪದಾಧಿಕಾರಿಗಳು ಸಭೆ ಸೇರಿ ತಕ್ಷಣವೇ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿ ಎಂದು ಸೂಚಿಸಿದರು.
ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್, ವಕೀಲರ ಸಲಹೆ ಮೇರೆಗೆ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದ್ದೇವೆ.
ತಕ್ಷಣದಿಂದ ಸೇವೆಗೆ
ನೌಕರರು ತಕ್ಷಣದಿಂದಲೇ ಸೇವೆಗೆ ಹಾಜರಾಗಬೇಕು, ನಿಮ್ಮ ರಕ್ಷಣೆಗೆ ನಾವಿದ್ದೇವೆ ಎಂಬ ಭರವಸೆ ನೀಡಿದರು.
ಸಾರಿಗೆ ಸಂಸ್ಥೆಯಲ್ಲಿ ಕೈಗಾರಿಕಾ ವ್ಯವಸ್ಥೆ ಸ್ಥಾಪಿಸಲು ಹಾಗೂ ಶಾಂತಿ ಮೂಡಿಸಲು ಸರ್ಕಾರ ಕೂಡಲೇ ಸಭೆ ಕರೆದು ಚರ್ಚಿಸುವಂತೆ ಒತ್ತಾಯಿಸಿದರು.
ನ್ಯಾಯಾಲಯದ ಆದೇಶ ಗೌರವಿಸುವ ಮತ್ತು ಪ್ರಯಾಣಿಕರ ಹಿತದೃಷ್ಟಿಯಿಂದ ನಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದೇವೆ, ಇದು ತಾತ್ಕಾಲಿಕ.
ಬೇಡಿಕೆ ಈಡೇರಿಕೆಗೆ ಒತ್ತಾಯಿಸುತ್ತೇವೆ
ನಮ್ಮ ಬೇಡಿಕೆಗಳು ಏನೆಂಬುದನ್ನು ಈಗಾಗಲೇ ಮುಖ್ಯಮಂತ್ರಿಗಳು ಕರೆದಿದ್ದ ಸಭೆಯಲ್ಲಿ ಸ್ಪಷ್ಟಪಡಿಸಿದ್ದು, ಅವುಗಳ ಈಡೇರಿಕೆಗೆ ಒತ್ತಾಯಿಸುತ್ತೇವೆ ಎಂದರು.
ಮುಷ್ಕರ ಕರೆ ಹಿನ್ನೆಲೆಯಲ್ಲಿ ಬೆಳಗ್ಗೆ ರಾಜ್ಯದ ಹಲವೆಡೆ ಸಾರಿಗೆ ಸಂಸ್ಥೆ ಬಸ್ಗಳ ಸಂಚಾರವಿಲ್ಲದೆ, ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಪರದಾಡಬೇಕಾಯಿತು.
ಮುಷ್ಕರ ಒಂದು ದಿನ ಮುಂದೂಡುವಂತೆ ಹೈಕೋರ್ಟ್ ನಿನ್ನೆ ನೀಡಿದ್ದ ಆದೇಶ ಹಾಗೂ ಒಕ್ಕೂಟದಲ್ಲಿನ ಕೆಲವು ಕಾರ್ಮಿಕ ಸಂಘಟನೆಗಳು ಮುಷ್ಕರದಿಂದ ದೂರ ಉಳಿದಿದ್ದರಿಂದ ಶೇಕಡ ೩೦ರಿಂದ ೪೦ರಷ್ಟು ಬಸ್ಗಳು ಮಾತ್ರ ರಸ್ತೆಗಿಳಿದಿದ್ದವು.

ಪೋಲಿಸ್ ಬಿಗಿ ಬಂದೋಬಸ್ತ್
ಮುನ್ನೆಚ್ಚರಿಕೆಯಾಗಿ ಪೋಲಿಸ್ ಬಿಗಿ ಬಂದೋಬಸ್ತ್ ಮಾಡಿದ್ದರಿಂದ ಕಲ್ಲು ತೋರಾಟದ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಅನಾಹುತಗಳು ಜರುಗಲಿಲ್ಲ.
ಹೊರಗುತ್ತಿಗೆ ಚಾಲಕರನ್ನು ಹೊಂದಿದ ಎಲೆಕ್ಟ್ರಿಕ್ ಬಸ್ಗಳು ಎಂದಿನಂತೆ ಸಂಚರಿಸಿದವು, ಇದರೊಂದಿಗೆ ಸರ್ಕಾರ ಹಲವೆಡೆ ಖಾಸಗಿ ಬಸ್ಗಳ ಸಹಕಾರ ಪಡೆದುಕೊಂಡಿದ್ದರಿಂದ ಇಂತಹ ಪ್ರದೇಶಗಳಲ್ಲಿ ಮುಷ್ಕರದ ಬಿಸಿ ತಟ್ಟಲಿಲ್ಲ.
ಕೆಲವು ಬಸ್ಗಳು ರಸ್ತೆಗಳಿದ ಬಗ್ಗೆ ತನ್ನದೇ ದಾಟಿಯಲ್ಲಿ ಸಮರ್ಥಿಸಿಕೊಂಡಿರುವ ಒಕ್ಕೂಟ, ಇಂದು ಒಂದು ದಿನದ ಮಟ್ಟಿಗೆ ಬಸ್ ಸಂಚಾರಕ್ಕೆ ಅನುವು ಮಾಡುವಂತೆ ಆದೇಶಿಸಿತ್ತು.
ಪರೀಕ್ಷೆಗಳ ಮುಂದೂಡಿಕೆ
ಸಾರಿಗೆ ಬಸ್ ಮುಷ್ಕರದ ಹಿನ್ನೆಲೆಯಲ್ಲಿ ಕೆಲವು ಪರೀಕ್ಷೆಗಳನ್ನು ಮುಂದೂಡಬೇಕಾಯಿತು, ರಾಜ್ಯದ ಹಲವೆಡೆ ಸಾರಿಗೆ ಮುಷ್ಕರ ಇದೆಯೋ, ಇಲ್ಲವೋ ಎಂಬ ಬಗ್ಗೆ ಗೊಂದಲವೂ ಸೃಷ್ಟಿಯಾಗಿತ್ತು.
ಉತ್ತರ ಕರ್ನಾಟಕದ ಬಹಳಷ್ಟು ಕಡೆಗಳಲ್ಲಿ ಮುಷ್ಕರದ ಬಿಸಿ ತಟ್ಟಿತ್ತು, ಮನೆಯಿಂದ ಹೊರಟ ವಿದ್ಯಾರ್ಥಿಗಳು ಬಸ್ಗಳಿಲ್ಲದೆ ಹಿಂತಿರುಗಿದ ದೃಶ್ಯಗಳೂ ಕೆಲವಡೆ ಕಂಡುಬಂದಿತು.
ದೂರದ ಊರುಗಳಿಂದ ಬರುವ ಬಸ್ಗಳಿಗೆ ಮುಷ್ಕರ ನಿರತರು ತೊಂದರೆ ಮಾಡದಂತೆ ಪೋಲಿಸ್ ಭದ್ರತೆಯಲ್ಲಿ ನಿಲ್ದಾಣದವರೆಗೂ ಬೆಂಗಾವಲಿನಲ್ಲಿ ಕರೆತಂದು ಪ್ರಯಾಣಿಕರು ಮನೆಗಳಿಗೆ ತೆರಳುವ ವ್ಯವಸ್ಥೆ ಮಾಡಲಾಯಿತು ಎಂದು ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆದೇಶ ಪಾಲಿಸಬೇಕು
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ನೌಕರರು ಹೈಕೋರ್ಟ್ ಆದೇಶ ಪಾಲಿಸಬೇಕು, ತಕ್ಷಣ ಮುಷ್ಕರ ಹಿಂಪಡೆಯಬೇಕು ಎಂದರು.
ಸುದ್ದಿಗಾರರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ನೌಕರರು ಹಠ ಮಾಡುವುದರಿಂದ ಪ್ರಯೋಜನವಿಲ್ಲ, ಸಾರ್ವಜನಿಕರ ದೈನಂದಿನ ಬದುಕನ್ನು ಗಮನದಲ್ಲಿಟ್ಟುಕೊಂಡು ಸಹಕರಿಸಬೇಕು ಎಂದರು.
ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ
ಸಾರಿಗೆ ಸಂಸ್ಥೆ ನೌಕರರ ಬೇಡಿಕೆ ತಪ್ಪು ಎಂಬುದಾಗಿ ಸರ್ಕಾರ ಹೇಳುತ್ತಿಲ್ಲ, ಅವರು ಸಹಾ ಸರ್ಕಾರದ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು, ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರು ಪರಿಹಾರಕ್ಕೆ ಪ್ರಯತ್ನಿಸುತ್ತಿದ್ದಾರೆ.
ಅಸಾಧ್ಯವಾದುದನ್ನು ಮಾಡಿ ಎಂಬ ಒತ್ತಡ ಹಾಕಬಾರದು, ಸಹಕಾರ ನೀಡಬೇಕು, ಕರ್ತವ್ಯಕ್ಕೆ ಹಾಜರಾಗಿರುವ ಚಾಲಕರು ಹಾಗೂ ನಿರ್ವಾಹಕರನ್ನು ಅಭಿನಂದಿಸುತ್ತೇನೆ ಎಂದರು.


