ಬೆಂಗಳೂರು:ನರೇಂದ್ರ ಮೋದಿ 25 ಲೋಕಸಭಾ ಸ್ಥಾನಗಳಿಂದ ಪ್ರಧಾನಮಂತ್ರಿ ಆಗಿದ್ದಾರೆ ಎಂದು ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಇಂದಿಲ್ಲಿ ಕೇಂದ್ರದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು
2024ರ ಲೋಕಸಭಾ ಚುಣಾವಣೆಯಲ್ಲಿ ಬಿಜೆಪಿ ಮತಗಳ್ಳತನದಿಂದ ಅಧಿಕಾರದ ಚುಕ್ಕಾಣಿ ಹಿಡಿದಿರುವುದನ್ನು ನಾನು ನಿನ್ನೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ದಾಖಲೆ ಸಹಿತ ಸಾಬೀತು ಮಾಡಿದ್ದೇನೆ.
1,00250 ಮತಗಳವು
ಕರ್ನಾಟಕದ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರವೊಂದರಲ್ಲೇ 1,00250 ಮತಗಳವು ಮಾಡಿ ಬಿಜೆಪಿ ಅಭ್ಯರ್ಥಿ 25 ರಿಂದ 35 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದಾರೆಂದು ಕಿಡಿಕಾರಿದರು.
ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ನಂತರ ನಮಗೆ ಮತಗಳವು ಅನುಮಾನ ಕಾಡಿತು ನಂತರ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರ ಆಯ್ಕೆ ಮಾಡಿ ಪರಿಶೀಲಿಸಿದಾಗ ಮತಗಳ್ಳತನ ಸಾಬೀತಾಯಿತು.
ಇದು ಕೇವಲ ಒಂದು ಲೋಕಸಭಾ ಕ್ಷೇತ್ರವಲ್ಲ, ರಾಷ್ಟ್ರದ ವಿವಿಧೆಡೆ ಚುನಾವಣಾ ಆಯೋಗ ಬಿಜೆಪಿ ಜೊತೆ ಕೈಜೋಡಿಸಿ ಮತಗಳ್ಳತನ ಮಾಡಿ ಕೇಂದ್ರದಲ್ಲಿ ಅಧಿಕಾರದಲ್ಲಿದೆ.
ಸಂವಿಧಾನ ವಿರೋಧಿ
ಮತಗಳ್ಳತನ ಆರೋಪ ಸಂಬಂಧ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಎಐಸಿಸಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಸಿದ್ಧಾಂತ ಸಂವಿಧಾನ ವಿರೋಧಿಯಾಗಿದೆ ಎಂದರು.
ಸಂವಿಧಾನ ಪುಸ್ತಕ ಕೈಯಲ್ಲಿ ಹಿಡಿದು ಮಾತನಾಡಿದ ರಾಹುಲ್, ಭಾಷಣದ ಉದ್ದಕ್ಕೂ ಚುನಾವಣಾ ಆಯೋಗ ಮತ್ತು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.
ಕಳೆದ 10 ವರ್ಷಗಳ ಚುನಾವಣೆಯ ಮತದಾರರ ಪಟ್ಟಿ ಹಾಗೂ ವಿಡಿಯೋಗ್ರಾಫಿ ಬಿಡುಗಡೆ ಮಾಡುವಂತೆ ಆಯೋಗಕ್ಕೆ ರಾಹುಲ್ ಸವಾಲು ಹಾಕಿದರು.

ಇಡೀ ದೇಶ ಅರಿತುಕೊಳ್ಳಬೇಕು
ಎಲೆಕ್ಟ್ರಾನಿಕ್ಸ್ ಮತಯಂತ್ರ ಅಂಕಿ-ಅಂಶಗಳನ್ನು ಚುನಾವಣಾ ಆಯೋಗ ಏಕೆ ನೀಡುತ್ತಿಲ್ಲ ಎಂಬುದನ್ನು ಇಡೀ ದೇಶ ಅರಿತುಕೊಳ್ಳಬೇಕು.
ನಾನು ವಿರೋಧ ಪಕ್ಷದ ನಾಯಕನಾಗಿರಬಹುದು, ನನ್ನ ಈ ಹೋರಾಟದಲ್ಲಿ ನಾನು ಒಬ್ಬೊಂಟಿಯಲ್ಲ ಇಂಡಿಯಾ ಒಕ್ಕೂಟದ ಎಲ್ಲಾ ಪಕ್ಷಗಳು ನನ್ನೊಂದಿಗಿವೆ.
ಒಂದು ವೇಳೆ ಆಯೋಗ ನಮಗೆ ದಾಖಲೆ ನೀಡದಿದ್ದರೆ, ಒಂದು ಕ್ಷೇತ್ರವಲ್ಲ, 5, 10, 15, 25 ಕ್ಷೇತ್ರಗಳ ಮಾಹಿತಿಯನ್ನು ಬಹಿರಂಗ ಮಾಡಿಲಿದ್ದೇವೆ, ಇದಕ್ಕೆ ನಮ್ಮ ಬಳಿ ದಾಖಲೆ ಇವೆ.
ಸತ್ಯ ಮುಚ್ಚಿಡಲು ಸಾಧ್ಯವಿಲ್ಲ
ಆಯೋಗ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ, ಒಂದಲ್ಲಾ ಒಂದು ದಿನ ವಿರೋಧ ಪಕ್ಷಗಳ ಸವಾಲನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ 15ರಿಂದ 16 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತವಾಗಿತ್ತು, ಆದರೆ, ಕೇವಲ 9 ಕ್ಷೇತ್ರಗಳಲ್ಲಷ್ಟೇ ಗೆದ್ದೆವು.
ಅಂದೇ ನಮಗೆ ಅನುಮಾನಗಳು ಕಾಡಲು ಆರಂಭಿಸಿದವು, ಬೆಂಗಳೂರು ಮಹದೇವಪುರ ಕ್ಷೇತ್ರದ ಫಲಿತಾಂಶ ಸಮೀಕ್ಷೆ ಮಾಡಿದಾಗಿ ಚುನಾವಣಾ ಆಯೋಗ ಮತ್ತು ಬಿಜೆಪಿ ಒಟ್ಟಾಗಿ ವಂಚಿಸಿದೆ.

ಪುರಾವೆ ಸಮೇತ ಬಿಡುಗಡೆ
ಆರು ಮತಗಳ ಪೈಕಿ ಒಂದು ಮತ ಕಳ್ಳತನ ಮಾಡಿ ಬಿಜೆಪಿ ಗೆದ್ದಿರುವುದನ್ನು ನಾನು ಪುರಾವೆಗಳ ಸಮೇತ ಈಗಾಗಲೇ ಬಿಡುಗಡೆ ಮಾಡಿದ್ದೇನೆ.
ಈ ಮತಗಳವು ಕರ್ನಾಟಕದಲ್ಲಿ ಮಾತ್ರವಲ್ಲ ದೇಶಾದ್ಯಂತ ನಡೆದಿದೆ, ಬಿಜೆಪಿ ಪರವಾಗಿ ಆಯೋಗ ಕೆಲಸ ಮಾಡುತ್ತಿರುವುದು ಸಾಬೀತಾಗಿದೆ ಎಂದು ದೂರಿದರು.


