ಬೆಂಗಳೂರು:ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಕಟುವಾಗಿ ಟೀಕಿಸಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್, ಜನರಿಗೆ ಮೂಲಸೌಕರ್ಯ ಕಲ್ಪಿಸಲು ಆಗದಿದ್ದರೆ ಅಧಿಕಾರ ಬಿಟ್ಟು ತೊಲಗಿ ಎಂದಿದ್ದಾರೆ.
ಕುಮಾರಸ್ವಾಮಿ ಟ್ವೀಟ್ ಮಾಡಿ, ಜನರ ರಕ್ತ ಹೀರಿ ತೆರಿಗೆ ಪೀಕುತ್ತಿದ್ದೀರಲ್ಲಾ, ಅದಕ್ಕೆ ಲೆಕ್ಕ ಕೊಡಿ ಎಂದಿದ್ದಾರೆ.
ಯಾವ ಸಮಯದಲ್ಲಿ ಏನು ಮಾಡಬೇಕೆಂಬುದು ಕೇಂದ್ರ ಸರ್ಕಾರಕ್ಕೆ ತಿಳಿದಿದೆ, ಅವರು ನೀಡುವ ಅಭಿವೃದ್ಧಿ ಹಣ ಬಳಸಿಕೊಳ್ಳಿ, ಮಾತೆತ್ತಿದರೆ, ಕೇಂದ್ರದಿಂದ ಹಣ ತನ್ನಿ.., ಕೇಂದ್ರದಿಂದ ಹಣ ತನ್ನಿ.., ಎಂದು ನಮ್ಮನ್ನು ಪ್ರಶ್ನಿಸುವುದನ್ನು ಬಿಟ್ಟು ಮೊದಲು ರಾಜ್ಯದ ಜನರ ತೆರಿಗೆ ಹಣ ಎಲ್ಲಿಗೆ ಹೋಗಿದೆ ಎಂಬುದನ್ನು ಬಹಿರಂಗಪಡಿಸಿ.
ಹಳೇ ಚಾಳಿ ಬೇಡ
ನೀವು ಅಧಿಕಾರದಲ್ಲಿ ಇರುವವರು ಹಳೇ ಚಾಳಿಗಳನ್ನು ಆಡಳಿತಕ್ಕೆ ಬಳಕೆ ಮಾಡಬೇಡಿ, ಮೊದಲು ಮೂಲಸೌಕರ್ಯ ಕಲ್ಪಿಸುವ ಕೆಲಸ ಮಾಡಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುಗಳಿಗೆ ಹೇಳಿದ್ದಾರೆ.
ರಸ್ತೆಗಳ ಗುಂಡಿ ಮುಚ್ಚಲು ಸಾಧ್ಯವಾಗದೆ, ಉದ್ಯಮಿಗಳಿಗೆ ಧಮ್ಕಿ ಹಾಕಿ ದಾದಾಗಿರಿ ಮಾಡುವುದಕ್ಕೆ ನಿಮ್ಮನ್ನು ಉಪಮುಖ್ಯಮಂತ್ರಿ ಮಾಡಿಲ್ಲ ಮಿಸ್ಟರ್ ಶಿವಕುಮಾರ್.., ಎಂದಿರುವ ಕುಮಾರಸ್ವಾಮಿ, ನಿಮಗೆ ಅಧಿಕಾರ ನೀಡಿರುವುದು ಕೆಲಸ ಮಾಡಲೇ ಹೊರತು ನಿಮ್ಮ ಹಳೇ ದಾದಾಗಿರಿ ತೋರಿಸಲು ಅಲ್ಲ ಎಂದು ಕಿಡಿಕಾರಿದ್ದಾರೆ.
ಉದ್ದಿಮೆಗಳು ಬೇಕಾದರೆ ರಾಜ್ಯ ಬಿಟ್ಟು ಹೋಗಲಿ ಎಂಬ ಶಿವಕುಮಾರ್ ಹೇಳಿಕೆಗೆ ಟ್ವೀಟ್ ಮೂಲಕ ಕಿಡಿಕಾರಿರುವ ಕುಮಾರಸ್ವಾಮಿ, ದಾದಾಗಿರಿ ದಿನಗಳು ಮುಗಿದಿವೆ, ಮೊದಲು ರಸ್ತೆ ಗುಂಡಿ ಮುಚ್ಚಿ ಮಾನ ಕಾಪಾಡಿಕೊಳ್ಳಿ, ನಿಮಗೆ ಆಗಲ್ಲಾ ಎಂದರೆ ಅಧಿಕಾರ ಬಿಡಿ ಎಂದಿದ್ದಾರೆ.
ದುರಾಡಳಿತ, ಭ್ರಷ್ಟಾಚಾರ
ಪ್ರತಿಪಕ್ಷ ನಾಯಕ ಆರ್.ಅಶೋಕ್ ತಮ್ಮ ಟ್ವೀಟ್ನಲ್ಲಿ, ಅಭಿವೃದ್ಧಿಗೆ ದುಡ್ಡಿಲ್ಲ, ರಾಜ್ಯದ ಪ್ರಗತಿಗೆ ಯಾವುದೇ ದೂರದೃಷ್ಟಿ ಇಲ್ಲ, ಹೂಡಿಕೆದಾರರನ್ನು, ಉದ್ಯಮಿಗಳನ್ನು ಆಕರ್ಷಿಸುವ ಆಸಕ್ತಿ ಇಲ್ಲ, ಇವ್ಯಾವುದೂ ಇಲ್ಲದೆ, ಹಿಂದೆಂದೂ ಕಂಡರಿಯದ ದುರಾಡಳಿತ, ಭ್ರಷ್ಟಾಚಾರ ಕೂಪದಲ್ಲಿ ರಾಜ್ಯವನ್ನು ಮುಳುಗಿಸಲಾಗಿದೆ ಎಂದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಮುಜುಗರಕ್ಕೆ ಒಳಗಾದಾಗಲೆಲ್ಲ ಜನರ ದಿಕ್ಕು ತಪ್ಪಿಸಿ, ಸಾರ್ವಜನಿಕರ ಗಮನ ಬೇರೆಡೆ ಸೆಳೆಯಲು ಜಾತಿಗಣತಿ ಎಂಬ ಮೆಗಾ ಸೀರಿಯಲ್ನ ಒಂದೊಂದೇ ಸಂಚಿಕೆ ಹೊರಬಿಡುವ ನಾಟಕ ಮಾಡುತ್ತಿದೆ.
ಸಿದ್ದರಾಮಯ್ಯನವರೇ, ಇನ್ನೆಷ್ಟು ದಿನ ಈ ಭಂಡ ಬಾಳು, ನೀವು ಹೇಳಿದ್ದನ್ನು ನಿಮ್ಮ ಸಂಪುಟ ಸದಸ್ಯರೂ ಒಪ್ಪುವುದಿಲ್ಲ, ಶಾಸಕರೂ ಒಪ್ಪುವುದಿಲ್ಲ, ಹೈಕಮಾಂಡ್ ಅಂತೂ ನಿಮ್ಮ ಮಾತಿಗೆ ಮೊದಲೇ ಕಿಮ್ಮತ್ತು ಕೊಡುತ್ತಿಲ್ಲ, ಸಾಕು ಈ ಭಂಡ ಬಾಳು, ರಾಜೀನಾಮೆ ಕೊಟ್ಟು ರಾಜ್ಯವನ್ನು ಉಳಿಸಿ ಸ್ವಾಮಿ ಎಂದಿದ್ದಾರೆ.

