ಬೆಂಗಳೂರು:ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜ್ ವರದಿ ಕಸದ ಬುಟ್ಟಿಗೆ ಸೇರಲು ಕಾರಣರಾಗಿದ್ದ ಎಐಸಿಸಿ ವರಿಷ್ಠರು, ಇದೀಗ ಸಂಪುಟ ಸಚಿವರ ವಿರೋಧದ ನಡುವೆಯೂ ಮಧುಸೂಧನ್ ನಾಯಕ್ ನೇತೃತ್ವದಲ್ಲಿ ಹೊಸದಾಗಿ ಸಮೀಕ್ಷೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಒಕ್ಕಲಿಗ ಹಾಗೂ ವೀರಶೈವ ಸಮುದಾಯದ ಸಚಿವರುಗಳು ಹೊಸ ಜಾತಿ ಗಣತಿಯ ಮಾರ್ಗಸೂಚಿಗಳನ್ನು ಸಚಿವ ಸಂಪುಟದಲ್ಲೇ ಖಂಡಿಸಿ ಸಮೀಕ್ಷೆ ತಡೆ ಹಿಡಿಯುವಂತೆ ಒತ್ತಡ ಹೇರಿದ್ದರು.
ಸಮೀಕ್ಷೆಗೆ ತೀವ್ರ ಆಕ್ಷೇಪ
ಶಿವಕುಮಾರ್ಗಿಂತ ಮುಖ್ಯಮಂತ್ರಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಸಚಿವರಾದ ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆ ಸಮೀಕ್ಷೆ ಬಗ್ಗೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಸಿದ್ದರಾಮಯ್ಯ ಅವರನ್ನೇ ತರಾಟೆಗೆ ತೆಗೆದುಕೊಂಡಿದ್ದರು.
ಈ ಬೆಳವಣಿಗೆ ಮುಖ್ಯಮಂತ್ರಿ ಅವರಿಗೆ ಘಾಸಿ ಉಂಟು ಮಾಡುತ್ತಿದ್ದಂತೆ ಸಭೆ ನಂತರ ನಾವು-ನೀವು ಹಿಂದುಳಿದ ವರ್ಗದ ಆಯೋಗದ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳೋಣ ಎಂದು ವಿಷಯಕ್ಕೆ ತೆರೆ ಎಳೆದಿದ್ದರು.
ಸಮೀಕ್ಷೆಗೆ ವಿರೋಧ ಮಾಡಿದ ಸಚಿವರುಗಳು ಆಯೋಗದ ಸದಸ್ಯರೊಂದಿಗೆ ಸಮಾಲೋಚನೆ ನಡೆಸುವ ಸಂದರ್ಭದಲ್ಲೇ ಮುಖ್ಯಮಂತ್ರಿ ಅವರು, ಎಐಸಿಸಿ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಸಂಪರ್ಕಿಸಿ ಸಂಪುಟದಲ್ಲಿ ನಡೆದ ವಿದ್ಯಮಾನಗಳನ್ನು ಗಮನಕ್ಕೆ ತಂದರು.
ಹೊಸ ಸಮೀಕ್ಷೆಗೆ ವಿರೋಧ
ನಿಮ್ಮ ಸಲಹೆಯಂತೆ ಹೊಸ ಸಮೀಕ್ಷೆಗೆ ಸರ್ಕಾರ ಮುಂದಾಗಿದೆ, ಇದೀಗ, ಕಾಂತರಾಜ್ ವರದಿ ವಿರೋಧಿಸಿದವರೇ ನಾವು ಕೈಗೊಂಡಿರುವ ಜಾತಿ ಗಣತಿಯನ್ನೂ ವಿರೋಧ ಮಾಡುತ್ತಿದ್ದಾರೆ.
ಸಮೀಕ್ಷೆಯಿಂದ ಹಿಂದಕ್ಕೆ ಸರಿದರೆ ವೈಯಕ್ತಿಕವಾಗಿ ನನಗೆ ಮತ್ತು ಸರ್ಕಾರಕ್ಕೆ ಸಾರ್ವಜನಿಕವಾಗಿ ಕೆಟ್ಟ ಹೆಸರು ಬರುತ್ತದೆ.
ನೀವು ಹೇಳಿದ ಮಾನದಂಡಗಳನ್ನು ಇಟ್ಟುಕೊಂಡೇ ಜಾತಿ ಗಣತಿ ಕೈಗೆತ್ತಿಕೊಂಡಿದ್ದೇನೆ, ಸಮೀಕ್ಷೆ ಕಾರ್ಯ ಹತ್ತಿರವಾಗುತ್ತಿದ್ದಂತೆ, ಶಿವಕುಮಾರ್, ಎಂ.ಬಿ.ಪಾಟೀಲ್ ಸೇರಿದಂತೆ ಕೆಲವರು ಅಪಸ್ವರ ಎತ್ತಿದ್ದಾರೆ, ನೀವೇ ಮಧ್ಯಪ್ರವೇಶ ಮಾಡಬೇಕೆಂದು ಮನವಿ ಮಾಡಿಕೊಂಡರು.
ಗೊಂದಲ ಪರಿಹರಿಸಲು ಯತ್ನ
ಮುಖ್ಯಮಂತ್ರಿ ಮನವಿಗೆ ತಕ್ಷಣವೇ ಸ್ಪಂದಿಸಿದ ವೇಣುಗೋಪಾಲ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ನಗರಕ್ಕೆ ಕಳುಹಿಸಿ ಸಿದ್ದರಾಮಯ್ಯ ಮತ್ತು ಸಚಿವರುಗಳ ನಡುವೆ ಸಮೀಕ್ಷೆ ಕುರಿತ ಗೊಂದಲ ಪರಿಹರಿಸಲು ಮುಂದಾದರು.
ಸಮೀಕ್ಷೆಗೆ ವಿರೋಧಿಸಿದ ಸಚಿವರನ್ನು ಸಂಪರ್ಕಿಸಿದ ಸುರ್ಜೇವಾಲ, ತಾವು ತಂಗಿದ್ದ ಪಂಚತಾರಾ ಹೋಟೆಲ್ಗೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರನ್ನು ಕರೆಸಿಕೊಂಡು, ಈ ಕುರಿತು ಮುಖಾಮುಖಿ ಚರ್ಚೆ ಮಾಡಿದರು.
ಇದು ವರಿಷ್ಠರ ಆದೇಶ
ಎಐಇಸಿ ಸಲಹೆ ಮೇಲೆ ಹೊಸ ಸಮೀಕ್ಷೆ ನಡೆಯುತ್ತಿದೆ, ಈಗ ವಿರೋಧ ಸರಿಯಲ್ಲ, ಪ್ರಕ್ರಿಯೆ ಪೂರ್ಣಗೊಳ್ಳಲಿ, ಅದರಲ್ಲೂ ಲೋಪಗಳಿದ್ದರೆ ಸರಿಪಡಿಸೋಣ, ಇದು ವರಿಷ್ಠರ ಆದೇಶ ಎಂದು ಶಿವಕುಮಾರ್ಗೆ ತಿಳಿಸಿದರು.
ಸುರ್ಜೇವಾಲ ಮಧ್ಯಪ್ರವೇಶದ ನಂತರ ಯಾವ ಸಚಿವರೂ ಅಪಸ್ವರ ಎತ್ತಲಿಲ್ಲ, ಮುಖ್ಯಮಂತ್ರಿ ಸಣ್ಣ-ಪುಟ್ಟ ಬದಲಾವಣೆಗೆ ಆಯೋಗಕ್ಕೆ ಸೂಚಿಸಿದ್ದಲ್ಲದೆ, ಸೆಪ್ಟೆಂಬರ್ 22 ರಿಂದ ಸಮೀಕ್ಷೆ ಆರಂಭಿಸಲು ತಿಳಿಸಿದರು.

