ಬೆಂಗಳೂರು:ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ನೆಪದಲ್ಲಿ ಕೈಗೆತ್ತಿಕೊಂಡಿರುವ ಜಾತಿ ಗಣತಿಯನ್ನು ತಾತ್ಕಾಲಿಕವಾಗಿ ಮುಂದೂಡಿ ಎಂದು ಸರ್ಕಾರವನ್ನು ಒಕ್ಕಲಿಗ ಸಮಾಜ ಇಂದಿಲ್ಲಿ ಆಗ್ರಹಿಸಿದೆ.
ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದ ಒಕ್ಕಲಿಗ ಸಮುದಾಯ ಜಾತಿ ಗಣತಿ ಜಾಗೃತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ, ಸ್ಫಟಿಕಾಪುರಿ ಮಠದ ನಂಜಾವದೂತ ಸ್ವಾಮೀಜಿ ಹಾಗೂ ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಅಲ್ಲದೆ, ಆದಿಚುಂಚನಗಿರಿಯ ಎಲ್ಲಾ ಶಾಖಾ ಮಠದ ಸ್ವಾಮೀಜಿಗಳು ಮಾತನಾಡಿ, ರಾಜ್ಯಾದ್ಯಂತ ಕೃಷಿ ಚಟುವಟಿಕೆ ಆರಂಭಗೊಂಡಿದೆ, ಸಾಲು-ಸಾಲು ಹಬ್ಬಗಳು ಬರುತ್ತಿವೆ, ಅಲ್ಲದೆ, ಹಳೇ ಮೈಸೂರು ಭಾಗದಲ್ಲಿ ನವರಾತ್ರಿ ಹಾಗೂ ದಸರಾ ನಡೆಯುತ್ತಿರುವುದರಿಂದ ಜಾತಿ ಗಣತಿ ಸಮೀಕ್ಷೆಗೆ ಕಾಲ ಪಕ್ವವಲ್ಲ.
ಸಮೀಕ್ಷೆ ಪೂರ್ಣ ಪ್ರಮಾಣದಲ್ಲಿ ಸಾಧ್ಯವೇ
ದಸರಾ ಮತ್ತು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಜನ ಮತ್ತು ರೈತರು ಮನೆಯಿಂದ ಹೊರಗಿರುವ ಸಮಯದಲ್ಲಿ ಸಮೀಕ್ಷೆ ಪೂರ್ಣ ಪ್ರಮಾಣದಲ್ಲಿ ಸಾಧ್ಯವೇ ಎಂದು ಪ್ರಶ್ನಿಸಿದರು.
ಸರ್ಕಾರ ಒಂದು ವೇಳೆ ಜನಗಣತಿ ಮುಂದುಡಲು ಸಾಧ್ಯವಿಲ್ಲ ಎಂಬ ತೀರ್ಮಾನ ಕೈಗೊಂಡಿದ್ದೇ ಆದಲ್ಲಿ, ಈಗ ನಿಗದಿಪಡಿಸಿರುವ ದಿನಗಳನ್ನು ಹೆಚ್ಚಿಸುವಂತೆ ಆಗ್ರಹಿಸಿದರು.
ತೆಲಂಗಾಣ ಸರ್ಕಾರ ಜಾತಿ ಸಮೀಕ್ಷೆಯನ್ನು 90 ದಿನಗಳ ಕಾಲ ನಡೆಸಿತು, ಆ ರಾಜ್ಯದಲ್ಲಿರುವ ಜನಸಂಖ್ಯೆ 3.50 ಕೋಟಿ, ನಮ್ಮಲ್ಲಿ 7 ಕೋಟಿ ಜನಸಂಖ್ಯೆಗೆ ಕೇವಲ 15 ದಿನದಲ್ಲಿ ಪೂರ್ಣ ಪ್ರಮಾಣದ ಸಮೀಕ್ಷೆ ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
’ಒಕ್ಕಲಿಗ’ ಎಂದೇ ಬರೆಸಬೇಕು
ಸರ್ಕಾರ ನಡೆಸುವ ಜಾತಿ ಗಣತಿ ಸಮಯದಲ್ಲಿ ನಮ್ಮ ಸಮುದಾಯದವರು ಉಪಜಾತಿಗಳಿಗೂ ಮೊದಲು ’ಒಕ್ಕಲಿಗ’ ಎಂದೇ ಬರೆಸಬೇಕು, ನಂತರ ಅಗತ್ಯವಿದ್ದರೆ ಉಪಜಾತಿಗಳನ್ನು ಬರೆಸಿಕೊಳ್ಳಿ.
ಸಮುದಾಯ ಒಗ್ಗಟ್ಟಿನಿಂದಿದೆ, ಆದರೆ, ಸಮೀಕ್ಷೆ ಸಂದರ್ಭದಲ್ಲಿ ಗೊಂದಲಗಳನ್ನು ಉಂಟು ಮಾಡಿಕೊಳ್ಳಬೇಡಿ, ನಿಮ್ಮ ಕುಟುಂಬದ ವಾಸ್ತವ ಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತನ್ನಿ, ಆದರೆ, ಅದಕ್ಕೂ ಮೊದಲು ಒಕ್ಕಲಿಗ ಎಂದೇ ನಮೂದಿಸಿ.
ಇಲ್ಲಿ ತಪ್ಪು ಮಾಡಿದರೆ, ಮುಂದೆ ಮಕ್ಕಳುಗಳು ಸಂಕಷ್ಟಕ್ಕೆ ಸಿಲುಕುತ್ತಾರೆ, ನಾವು ಇಲ್ಲಿ ಸರಿಯಾಗಿ ಹೆಜ್ಜೆ ಇಟ್ಟು ಒಂದಾಗಿ ಹೋದರೆ ಸಮುದಾಯದ ಶಕ್ತಿ ತೋರಿಸಿದಂತಾಗುತ್ತದೆ.
ಸವಲತ್ತು ದೊರಕಿಸಿಕೊಳ್ಳಬಹುದು
ಸಮುದಾಯ ಬಲಾಢ್ಯವಾಗಿದೆ ಎಂದರೆ, ನಮ್ಮ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಸೇರಿದಂತೆ ಉಳಿದ ಸವಲತ್ತುಗಳನ್ನು ದೊರಕಿಸಿಕೊಳ್ಳಬಹುದು.
ಹಿಂದಿನ ಕಾಂತರಾಜ್ ವರದಿಯಲ್ಲಿ ಅನೇಕ ಲೋಪಗಳಿದ್ದವು, ನಮ್ಮ ಸಮುದಾಯವನ್ನು ಕೇವಲ 50 ಲಕ್ಷ ಜನಸಂಖ್ಯೆಗೆ ಸೀಮಿತಗೊಳಿಸಲಾಗಿತ್ತು, ವಾಸ್ತವದಲ್ಲಿ ನಾವು 1.10 ಕೋಟಿಗಿಂತ ಹೆಚ್ಚಿದ್ದೇವೆ.
ಸರ್ಕಾರ ಕೂಡಾ ಪ್ರಮಾಣಿಕ ಮತ್ತು ನೈಜ ಸಮೀಕ್ಷೆ ಕೈಗೊಳ್ಳಬೇಕು, ಲೋಪಗಳು ಉಂಟಾಗಿ ವ್ಯತ್ಯಾಸವಾದರೆ ಸಮಾಜ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಒಕ್ಕಲಿಗ ಜನಾಂಗದ ಕೋಡ್ 1541
ಸಮೀಕ್ಷೆ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯದವರು ಜಾತಿ ಕಾಲಂ 9, 10, 11 ರಲ್ಲಿ ಏನೇ ಇದ್ದರೂ ಒಕ್ಕಲಿಗ ಎಂದೇ ಬರೆಸಬೇಕು, ಒಕ್ಕಲಿಗ ಜನಾಂಗದ ಕೋಡ್ 1541 ನಮೂದಿಸಬೇಕು, ಅಗತ್ಯವಿದ್ದರೆ ಮಾತ್ರ ತಮ್ಮ ತಮ್ಮ ಉಪಪಂಗಡಗಳನ್ನು ಬರೆಸಬೇಕು ಎಂದರು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜು ಅವಧಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇ.30 ರಿಂದ 40 ರಷ್ಟು ಸಮೀಕ್ಷೆ ಆಗಿರಲಿಲ್ಲ, ಹಾಗಾಗಿ ಆ ವರದಿ ಬಗ್ಗೆ ವಿರೋಧ ವ್ಯಕ್ತವಾಗಿತ್ತು, ಜನರ ಭಾವನೆಗೆ ಸರ್ಕಾರ ಸ್ಪಂದಿಸಿ ಹೊಸದಾಗಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಅವಕಾಶ ಕಲ್ಪಿಸಿರುವುದನ್ನು ಸ್ವಾಗತಿಸುತ್ತೇವೆ.
ಒಕ್ಕಲಿಗರ ಜಾತಿ ಜೊತೆಗೆ ವಿವಿಧ ಧರ್ಮ, ಜಾತಿಗಳನ್ನು ಸೇರಿಸಿರುವುದು ಅಸಮಾಧಾನ, ವೈರುಧ್ಯಕ್ಕೆ ಕಾರಣವಾಗಿದೆ, ಜಾತಿಗಣತಿ ಬಗ್ಗೆ ಮಠದ ಭಕ್ತರು ಹಾಗೂ ಸಮುದಾಯದವರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಎಲ್ಲಾ ಜನಪ್ರತಿನಿಧಿಗಳಿಗೆ ಈ ವಿಚಾರವನ್ನು ಮನದಟ್ಟು ಮಾಡಲಾಗಿದೆ.
ಕೇಂದ್ರದ ಜನಗಣತಿ ಅಧಿಕೃತ
ರಾಜ್ಯ ಸರ್ಕಾರಕ್ಕೆ ಜನತಿಗಣತಿ ಮಾಡುವ ಅಧಿಕಾರವಿಲ್ಲ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಮಾತ್ರ ಸಮೀಕ್ಷೆ ಮಾಡಬೇಕು ಎಂಬುದು ತಮಗಿರುವ ಮಾಹಿತಿ, ಕೇಂದ್ರ ಸರ್ಕಾರ ಜನಗಣತಿ ನಡೆಸಲಿದ್ದು ಅದು ಅಧಿಕೃತವಾಗಲಿದೆ ಎಂದರು.
ಸಮುದಾಯದ ಜನಪ್ರತಿನಿಧಿಗಳಿಗೆ ಸರ್ಕಾರದಲ್ಲಿ ಸಮುದಾಯದ ದನಿಯಾಗುವಂತೆ ನಿರ್ದೇಶನ ಕೊಡಲಾಗಿದೆ, ಅದಕ್ಕೆ ಸೂಕ್ತ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತದೆ ಎಂಬ ವಿಶ್ವಾಸವಿದೆ ಎಂದರು.
ಸ್ಫಟಿಕಪುರಿ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಮಾತನಾಡಿ, ಹೊಸ ಹೊಸ ಜಾತಿಗಳನ್ನು ಸೃಷ್ಟಿಸಿ ಗೊಂದಲ ಮೂಡಿಸಿರುವುದು ಸರಿಯಲ್ಲ ಎಂದರು.
ಧರ್ಮದ ಹೆಸರು ಥಳಕು
ಹಿಂದುಳಿದ ವರ್ಗಗಳ ಆಯೋಗ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಹೊಸ ಜಾತಿಯ ಹೆಸರುಗಳು ಪ್ರಕಟವಾಗಿವೆ, ಅಲ್ಲದೆ, ಒಕ್ಕಲಿಗ ಸಮುದಾಯದ ಜೊತೆ ಧರ್ಮದ ಹೆಸರು ಥಳಕು ಹಾಕಲಾಗಿದೆ, ಇದಕ್ಕೆ ನಮ್ಮ ತೀವ್ರ ಆಕ್ಷೇಪವಿದೆ.
ಯಾವುದೇ ಜಾತಿ, ಧರ್ಮ ಪ್ರಕಟವಾಗಬೇಕಾದರೆ ಆಯೋಗಕ್ಕೆ ಅರ್ಜಿ ಸಲ್ಲಿಸಿ, ಆಯೋಗದಲ್ಲಿ ಚರ್ಚಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು, ಅದನ್ನು ಗೆಜೆಟ್ನಲ್ಲಿ ಪ್ರಕಟಿಸಬೇಕು, ಈ ರೀತಿಯ ಯಾವ ಪ್ರಕ್ರಿಯೆಗಳೂ ನಡೆದಿಲ್ಲ.
ಸಾವಿರಾರು ಅಹವಾಲು, ಆಕ್ಷೇಪಗಳನ್ನು ಆಯೋಗಕ್ಕೆ ಸಲ್ಲಿಸಲಾಗಿದ್ದರೂ ಸಮಂಜಸ ಉತ್ತರ ನೀಡದೇ ಏಕ ಪಕ್ಷೀಯವಾಗಿ ತರಾತುರಿಯಲ್ಲಿ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ.
ಸಮಯಾವಕಾಶ ನೀಡಬೇಕು
ವೀರಶೈವ-ಲಿಂಗಾಯತ ಸಮುದಾಯವೂ ಸಮೀಕ್ಷೆ ಮುಂದೂಡಬೇಕು ಮತ್ತು ಹೆಚ್ಚು ಸಮಯಾವಕಾಶ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
ನಮ್ಮ ಜನಾಂಗದವರು ಮುಗ್ಧರು, ಅನಕ್ಷರಸ್ಥರಿದ್ದು, ಅವರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ, ಎಲ್ಲರ ಅಭಿಪ್ರಾಯವನ್ನು ಆಯೋಗ ಗೌರವಿಸಬೇಕು.
ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಸಮೀಕ್ಷೆ ಸಂದರ್ಭದಲ್ಲಿ ಜಾತಿ ಕಾಲಂ 9 ರಲ್ಲಿ ಒಕ್ಕಲಿಗ ಎಂದೇ ಬರೆಸಬೇಕು, ಅಗತ್ಯವಿದ್ದರೆ ಮಾತ್ರ ಉಪಜಾತಿ ನಮೂದಿಸಬೇಕು, ಸಮೀಕ್ಷೆ ನಡೆಸಲು ಈಗ ಸಕಾಲವಲ್ಲ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಲ್ಲಿ ನಮ್ಮ ಮನವಿ ಏನೆಂದರೆ, 15 ದಿನ ಸಮಯ ಸಾಲುವುದಿಲ್ಲ, ಕನಿಷ್ಟ 45 ದಿನವಾದರೂ ಗಣತಿಗೆ ಕಾಲಾವಕಾಶ ಕೊಡಬೇಕು ಎಂದು ಆಗ್ರಹಿಸಿದರು.
ಒಕ್ಕಲಿಗ ನಮೂದಿಸುವ ತೀರ್ಮಾನ
ಇದಕ್ಕೂ ಮೊದಲು ವಿವಿಧ ರಾಜಕೀಯ ಪಕ್ಷಗಳಿಗೆ ಸೇರಿದ ಸಚಿವರು, ಸಂಸದರು, ಶಾಸಕರು ಹಾಗೂ ಮುಖಂಡರನ್ನು ಒಳಗೊಂಡ ಸಭೆಯಲ್ಲಿ ಸಮೀಕ್ಷಾ ವೇಳೆ ಒಕ್ಕಲಿಗ ಎಂದೇ ನಮೂದಿಸುವ ತೀರ್ಮಾನ ಕೈಗೊಳ್ಳಲಾಯಿತು.
ಜಾತಿ ಗಣತಿ ಮಹತ್ವವನ್ನು ಸಮಾಜದ ಬಂಧುಗಳಿಗೆ ತಿಳಿಸಿ, ಅವರೂ ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಒಕ್ಕಲಿಗ ಎಂದೇ ಬರೆಸುವಂತೆ ರಾಜಕಾರಣಿಗಳು, ಸಂಘಟನೆಗಳು ಮತ್ತು ಮುಖಂಡರು ಪ್ರಮುಖ ಪಾತ್ರ ವಹಿಸಬೇಕೆಂಬ ನಿರ್ಣಯ ಕೈಗೊಳ್ಳಲಾಯಿತು.
ರಾಜ್ಯ ಒಕ್ಕಲಿಗರ ಸಂಘ ಸಂಪೂರ್ಣ ಹೊಣೆ ಹೊತ್ತು, ಸಮಾಜದ ಮನೆ-ಮನೆಗೂ ಇಂದಿನ ಮಾಹಿತಿ ತಲುಪಿಸುವಂತೆ ಸಭೆಯಲ್ಲಿ ಭಾಗವಹಿಸಿದ ಮಠಾಧೀಶರು ಸೂಚಿಸಿದರು.

