ಬೆಂಗಳೂರು:ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ಯಲ್ಲಿ ತಾಂತ್ರಿಕ ಸಮಸ್ಯೆಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಜಾತಿಗಣತಿ ಕಾರ್ಯದ ಅವಧಿ ವಿಸ್ತರಿಸುವಂತೆ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಹಾಗೂ ರಾಜ್ಯ ಒಕ್ಕಲಿಗರ ಸಂಘ ಇಂದಿಲ್ಲಿ ಜಂಟಿಯಾಗಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿವೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಎಚ್.ಎಂ.ರೇಣುಕಾಪ್ರಸನ್ನ, ಒಕ್ಕಲಿಗರ ಸಂಘದ ಪ್ರಧಾನಕಾರ್ಯದರ್ಶಿ ಟಿ.ಕೋನಪ್ಪರೆಡ್ಡಿ, ಕೆಲವೆಡೆ ಅವೈಜ್ಞಾನಿಕವಾಗಿ ಸಮೀಕ್ಷೆ ನಡೆಸಲಾಗುತ್ತಿದೆ, ಇತ್ತ ಕಡೆ ಗಮನ ಹರಿಸಬೇಕು.
7.50 ಕೋಟಿ ಜನಸಂಖ್ಯೆ
ಇನ್ನು ಕೇವಲ 9 ದಿನಗಳು ಮಾತ್ರ ಸಮಯವಿದೆ, ಈ ಅವಧಿಯಲ್ಲಿ ರಾಜ್ಯದ 7.50 ಕೋಟಿ ಜನಸಂಖ್ಯೆಯ ಸಮೀಕ್ಷೆ ಮಾಡಲು ಸಾಧ್ಯವಿಲ್ಲ.
ಜನರಲ್ಲಿ ಗೊಂದಲ ಉಂಟು ಮಾಡಿ ತಪ್ಪು ಅಂಕಿ-ಅಂಶಗಳನ್ನು ಸಂಗ್ರಹಿಸುವ ಬದಲು ಸಮರ್ಪಕ ಮಾಹಿತಿ ಪಡೆಯಲು ಸಮೀಕ್ಷೆ ಕಾಲಾವಕಾಶ ವಿಸ್ತರಿಸಿ ಎಂದು ಆಗ್ರಹಿಸಿದರು.
ಅಗತ್ಯ ಕಂಡುಬಂದಲ್ಲಿ ಮಾತ್ರ ನಿಮ್ಮ ಅಂಕಿ-ಅಂಶಗಳನ್ನು ನೀಡಿ, ನ್ಯಾಯಾಲಯದ ಆದೇಶದಂತೆ ದಾಖಲೆಗಳನ್ನು ಒತ್ತಾಯಪೂರ್ವಕವಾಗಿ ಪಡೆಯಲಾಗದು.
ಧರ್ಮ, ಜಾತಿ, ಉಪಜಾತಿ ಮಾಹಿತಿ
ಕಡ್ಡಾಯವಾಗಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ವೀರಶೈವ ಮತ್ತು ಒಕ್ಕಲಿಗ ಸಮುದಾಯದಕ್ಕೆ ಕರೆ ನೀಡಿದ ಸಂಘಟನೆಗಳು, ತಮ್ಮ ತಮ್ಮ ಧರ್ಮ, ಜಾತಿ ಹಾಗೂ ಉಪಜಾತಿ ಬಗ್ಗೆ ಮಾಹಿತಿ ನೀಡಿ.
ಮಾಹಿತಿ ನೀಡದಿದ್ದರೆ ಸಮುದಾಯದ ಖಚಿತ ಜನಸಂಖ್ಯೆ ಬಗ್ಗೆ ತಿಳಿಯುವುದಿಲ್ಲ, ಆದ್ದರಿಂದ ನಿಮ್ಮ ಭಾಗವಹಿಸುವಿಕೆ ಸೂಕ್ತ ಎಂಬುದು ನಮ್ಮ ಅನಿಸಿಕೆ.
ರಾಜ್ಯ ಹೈಕೋರ್ಟ್ನ ಷರತ್ತುಬದ್ಧ ಮಧ್ಯಂತರ ಆದೇಶದಂತೆ ಗಣತಿಯ ದತ್ತಾಂಶವನ್ನು ಸರ್ಕಾರ ಸೇರಿದಂತೆ ಯಾರಿಗೂ ಬಹಿರಂಗ ಪಡಿಸಬಾರದು, ಇದರ ಗೌಪ್ಯತೆಯನ್ನು ಹಿಂದುಳಿದ ವರ್ಗಗಳ ಆಯೋಗ ರಕ್ಷಿಸಬೇಕು.
ಸ್ವಪ್ರೇರಣೆಯಿಂದ ಮಾಹಿತಿ
ಜನತೆ ಸ್ವಪ್ರೇರಣೆಯಿಂದ ನೀಡಿದರಷ್ಟೇ ಮಾಹಿತಿ ಸಂಗ್ರಹಿಸಬೇಕು, ಜೊತೆಗೆ ಸಾರ್ವಜನಿಕರಲ್ಲಿ ಅಗತ್ಯ ಅರಿವು ಮೂಡಿಸುವಂತೆಯೂ ನ್ಯಾಯಾಲಯ ಆದೇಶಿಸಿದೆ.
ಮಾಹಿತಿ ನೀಡಲೇಬೇಕೆಂದು ಸಮೀಕ್ಷೆದಾರರು ಜನರ ಮೇಲೆ ಒತ್ತಡ ಹಾಕುವಂತಿಲ್ಲ ಎಂಬ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಜಾತಿ ಮತ್ತು ಉಪಜಾತಿಗಳನ್ನು ಬರೆಸಿದ ನಂತರ ಉಳಿದ ವಿಚಾರಗಳನ್ನು ನೀಡುವುದು ನಿಮ್ಮಗಳ ವಿವೇಚನೆಗೆ ಬಿಟ್ಟಿದ್ದು ಎಂದು ತಿಳಿಸಿದರು.

