ಬೆಂಗಳೂರು:ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ (ಜಾತಿಗಣತಿ) ಕಾರ್ಯದ ಅವಧಿ ವಿಸ್ತರಿಸಲು ಸರ್ಕಾರ ತೀರ್ಮಾನಿಸಿದೆ.
ಸೆಪ್ಟೆಂಬರ್ 22ರಿಂದ ರಾಜ್ಯಾದ್ಯಂತ ಆರಂಭಗೊಂಡ ಜಾತಿಗಣತಿ ಕಾರ್ಯ ಅವಧಿ ಅಕ್ಟೋಬರ್ 7ಕ್ಕೆ ಕೊನೆಗೊಳ್ಳಲಿದ್ದು, ಇದುವರೆಗೆ ಕೇವಲ 63ರಷ್ಟು ಮಾತ್ರ ಸಮೀಕ್ಷೆ ಪೂರ್ಣಗೊಂಡಿದೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಜಿಲ್ಲಾಡಳಿತಗಳಿಂದ ಮಾಹಿತಿ ಪಡೆದು ನಂತರ ಹಿಂದುಳಿದ ವರ್ಗಗಳ ಆಯೋಗದ ಜೊತೆ ಸಮಾಲೋಚಿಸಿ, ಎಷ್ಟು ದಿನಗಳ ವಿಸ್ತರಣೆ ಮಾಡಬೇಕೆಂಬ ಬಗ್ಗೆ ಪ್ರಕಟಿಸಲಿದ್ದಾರೆ.
ಕನಿಷ್ಟ 10 ದಿನಗಳ ಅಗತ್ಯ
ರಾಜಧಾನಿ ಬೆಂಗಳೂರಿನಲ್ಲಿ ಸಮೀಕ್ಷೆ ಕಾರ್ಯ ಅಕ್ಟೋಬರ್ 3ರಿಂದ ಆರಂಭಗೊಂಡಿದ್ದು, ಕಾರ್ಯ ಪೂರ್ಣಗೊಳಿಸಲು ಕನಿಷ್ಟ 10 ದಿನಗಳ ಅಗತ್ಯವಿದೆ.
ನಗರದಲ್ಲಿ ಸುಮಾರು ಒಂದೂವರೆ ಕೋಟಿ ಜನಸಂಖ್ಯೆಯಿಂದ ಮಾಹಿತಿ ಪಡೆಯಲು ಶಿಕ್ಷಣ ಇಲಾಖೆ ಅಲ್ಲದೆ, ವಿವಿಧ ಇಲಾಖಾ ಸಿಬ್ಬಂದಿಯನ್ನೂ ಬಳಕೆ ಮಾಡಿಕೊಳ್ಳಲಾಗಿದೆ.
ಬೆಂಗಳೂರು ಮಾದರಿಯಲ್ಲೇ ಉಳಿದ ನಗರ ಹಾಗೂ ಗ್ರಾಮೀಣ ಭಾಗದಲ್ಲೂ ಸಮೀಕ್ಷೆ ಪೂರ್ಣಗೊಳಿಸಲು ಇನ್ನೂ 15 ದಿನಗಳ ಕಾಲವಕಾಶ ಬೇಕಿದೆ ಎಂಬ ಮಾಹಿತಿಯನ್ನು ಆಯೋಗ ಸರ್ಕಾರಕ್ಕೆ ಕೇಳಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ವಿಡಿಯೊ ಸಂವಾದ
ಕಾಲಾವಧಿ ವಿಸ್ತರಣೆ ಮಾಡುವುದಿಲ್ಲ, ನಿಗದಿತ ಸಮಯದಲ್ಲಿ ಸಮೀಕ್ಷೆ ಪೂರ್ಣಗೊಳಿಸಬೇಕೆಂದು ಮುಖ್ಯಮಂತ್ರಿ ಜಿಲ್ಲಾಡಳಿತದೊಂದಿಗೆ ನಡೆಸಿದ ವಿಡಿಯೊ ಸಂವಾದದಲ್ಲಿ ಗಡುವು ನೀಡಿದ್ದರು.
ಗಡುವಿನ ಅವಧಿಯಲ್ಲಿ ಸಮೀಕ್ಷೆ ಕಾರ್ಯ ಪೂರ್ಣಗೊಳ್ಳದ ಕಾರಣ ಅವಧಿ ವಿಸ್ತರಿಸುವ ಬಗ್ಗೆ ನಾಳೆ ಸಂಜೆ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಅವರೇ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಬಂದಿರುವ ಮಾಹಿತಿ ಪ್ರಕಾರ ಶೇಕಡ 63ರಷ್ಟು ಸಮೀಕ್ಷೆ ಮುಗಿದಿದೆ, ಮಂಗಳವಾರ ಸಂಜೆ ವೇಳೆಗೆ ಎಷ್ಟು ಪ್ರಮಾಣದಲ್ಲಿ ಸಮೀಕ್ಷೆ ಆಗಲಿದೆ ಎಂಬುದನ್ನು ಅವಲೋಕಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಸಮೀಕ್ಷೆಗೆ ಬಿಜೆಪಿ ವಿರೋಧ
ಸಾಮಾಜಿಕ, ಶೈಕ್ಷಣಿಕ ಆರ್ಥಿಕ ಸಮೀಕ್ಷೆಗೆ ಬಿಜೆಪಿ ಸೇರಿದಂತೆ ಕೆಲವರು ವಿರೋಧ ಮಾಡುತ್ತಿರುವುದಕ್ಕೆ ಕಿಡಿಕಾರಿದ ಮುಖ್ಯಮಂತ್ರಿ, ಸಮೀಕ್ಷೆ ಮಾಡದಿದ್ದರೆ ನಮಗೆ ಯಾವುದೇ ಅಂಕಿ-ಅಂಶ ಸಿಗುವುದಿಲ್ಲ.
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಜನರಿಗೆ ಉದ್ಯೋಗ, ಶಿಕ್ಷಣ ದೊರೆತಿದೆಯೇ ಎನ್ನುವುದನ್ನು ತಿಳಿಯುವುದು ಬೇಡವೇ, ಇದರ ಅಂಕಿ-ಅಂಶ ತಿಳಿಯಬೇಕೆಂದರೆ ಸರ್ಕಾರಕ್ಕೆ ಸಮೀಕ್ಷೆ ಅತ್ಯವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.
ಸಮಸಮಾಜ ನಿರ್ಮಾಣ
ನಾವು ಯಾವುದೇ ಜಾತಿಯನ್ನು ತುಳಿಯುವ ಪ್ರಶ್ನೆಯೇ ಇಲ್ಲ, ಸಮಸಮಾಜ ನಿರ್ಮಾಣ ಮಾಡುವುದಷ್ಟೇ ನಮ್ಮ ಗುರಿ, ಆದರೆ, ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೇ 1.10 ಕೋಟಿ ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ, ಎಲ್ಲಾ ಕುಟುಂಬಗಳ ಸಮೀಕ್ಷೆ ಮಾಡಲೇಬೇಕೆಂಬ ದಿಟ್ಟ ನಿರ್ಧಾರ ಕೈಗೊಂಡಿದ್ದೇವೆ ಎಂದರು.

